ಹೆಂಡ್ತಿಯಿಂದ ಬೇಸತ್ತು ಜೈಲಿಗೆ ಹೋಗಲು ಎಸಿಪಿ ಮುಖಕ್ಕೆ ಪಂಚ್ ಕೊಟ್ಟ

ಜೈಪುರ: ಪತ್ನಿಯ ಕಾಟದಿಂದ ತಪ್ಪಿಸಿಕೊಳ್ಳಲು ಪತಿಯೊಬ್ಬ ಎಸಿಪಿ ಒಬ್ಬರಿಗೆ ಮುಖಕ್ಕೆ ಪಂಚ್ ಕೊಟ್ಟು ಜೈಲು ಸೇರಿರುವ ವಿಚಿತ್ರ ಘಟನೆ ಶಿಪ್ರಾ ಪೊಲೀಸ್ ಠಾಣೆಯಲ್ಲಿ ನಡೆದಿದೆ.

30 ವರ್ಷದ ಯೋಗೇಶ್ ಗೋಯಲ್ ಎಂಬ ವ್ಯಕ್ತಿ ಗುರುವಾರ ಶಿಪ್ರಾ ಪೊಲೀಸ್ ಠಾಣೆಗೆ ಬಂದಿದ್ದಾನೆ. ಠಾಣೆಗೆ ಬಂದವನು ನೇರವಾಗಿ ಪೊಲೀಸರಿಗೆ ನನ್ನನ್ನು ಬಂಧಿಸಿ, ನಾನು ನನ್ನ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದೇನೆ ಎಂದು ಹೇಳಿದ್ದಾನೆ. ಅಷ್ಟರಲ್ಲೇ ಠಾಣೆಗೆ ಬಂದ ಯೋಗೇಶ್ ಪತ್ನಿಯೂ ಸಹ ಪತಿಯ ವಿರುದ್ಧ ದೂರು ದಾಖಲಿಸಲು ಮುಂದಾಗಿದ್ದಾರೆ.

ಈ ವೇಳೆ ಠಾಣೆಯಲ್ಲಿದ್ದ ಎಸಿಪಿ ದೇಶ್‍ರಾಜ್ ಯಾದವ್ ಇಬ್ಬರನ್ನೂ ಕೂರಿಸಿ ರಾಜಿ ಪಂಚಾಯ್ತಿ ಮಾಡಲು ಮುಂದಾಗಿದ್ದಾರೆ. ದೂರು ದಾಖಲಿಸುವದಕ್ಕಿಂತ ಇಬ್ಬರನ್ನೂ ಸಮಾಧಾನಪಡಿಸಲು ಎಸಿಪಿ ದೇಶ್‍ರಾಜ್ ಪ್ರಯತ್ನಿಸಿದ್ದಾರೆ.

ಎಸಿಪಿ ಇಬ್ಬರ ಜಗಳವನ್ನು ಇತ್ಯರ್ಥಿಸುವಾಗಿ ಯೋಗೇಶ್ ನೇರವಾಗಿ ಎಸಿಪಿ ಮುಖಕ್ಕೆ ಹೊಡೆದಿದ್ದಾನೆ. ಇದರ ತೀವ್ರತೆಗೆ ಎಸಿಪಿಯವರ ಮೂಗು ಮತ್ತು ತುಟಿಯಿಂದ ರಕ್ತ ಬರಲಾರಂಭಿಸಿತು ಎಂದು ಸ್ಟೇಶನ್ ಆಫೀಸರ್ ಮುಖೇಶ್ ಚೌಧರಿ ತಿಳಿಸಿದ್ದಾರೆ.

ಯೋಗೇಶ್ ವಾಲ್ಲೇಡ್ ನಗರದಲ್ಲಿ ಸ್ವಂತ ಅಂಗಡಿಯೊಂದನ್ನು ಹೊಂದಿದ್ದು, ಪತಿ-ಪತ್ನಿ ನಡುವೆ ವೈಮನಸ್ಸು ಉಂಟಾಗಿತ್ತು. ಹೀಗಾಗಿ ಇಬ್ಬರೂ ಒಬ್ಬರ ವಿರುದ್ಧ ಒಬ್ಬರು ದೂರು ದಾಖಲಿಸಲು ಠಾಣೆಗೆ ಬಂದಿದ್ದರು. ಈ ವೇಳೆ ಎಸಿಪಿ ಅವರ ಮೇಲೆ ಹಲ್ಲೆ ನಡೆಸಿ ಪತಿರಾಯ ಕೊನೆಗೂ ಜೈಲು ಸೇರಿದ್ದಾನೆ.

ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಆರೋಪಿ ಯೋಗೇಶ್ ವಿರುದ್ಧ ದೂರು ದಾಖಲಾಗಿದೆ.

Comments

Leave a Reply

Your email address will not be published. Required fields are marked *