ಕೊಟ್ಟ ಮಾತು ಉಳಿಸಿಕೊಂಡ ಜಗ್ಗೇಶ್- ನಿರ್ಭಯಾ ಹಂತಕರ ಹ್ಯಾಂಗ್‍ಮ್ಯಾನ್‍ಗೆ 1 ಲಕ್ಷ ರೂ.

ಬೆಂಗಳೂರು: ನವರಸನಾಯಕ ಜಗ್ಗೇಶ್ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದು, ನಿರ್ಭಯಾ ಪ್ರಕರಣದ ಅಪರಾಧಿಗಳನ್ನು ಗಲ್ಲಿಗೇರಿಸಿದ ಹ್ಯಾಂಗ್ ಮ್ಯಾನ್ ಪವನ್ ಜಲ್ಲಾದ್‍ಗೆ ಒಂದು ಲಕ್ಷ ರೂ. ನೀಡಿದ್ದಾರೆ.

ಇಂದು ಸೂರ್ಯೋದಯಕ್ಕೂ ಮೊದಲೇ ನಿರ್ಭಯಾ ಹಂತಕರನ್ನು ಗಲ್ಲಿಗೇರಿಸಲಾಯಿತು. ಅಪರಾಧಿಗಳನ್ನು ಗಲ್ಲಿಗೇರಿಸಿದ ಬಳಿಕ ಜಗ್ಗೇಶ್ ತಮ್ಮ ಟ್ವಿಟ್ಟರಿನಲ್ಲಿ, ಕೊಟ್ಟ ಮಾತಿನಂತೆ 1 ಲಕ್ಷ ರೂ. ನಿರ್ಭಯಾ ಹಂತಕರ ಹ್ಯಾಂಗ್‍ಮ್ಯಾನ್‍ಗೆ ನನ್ನ ದೇಣಿಗೆ. ದೇವನೊಬ್ಬನಿರುವ ಅವ ಎಲ್ಲ ನೋಡುತಿರುವ. ಸತ್ಯದ ಹಾದಿಯಲ್ಲಿ ನಡೆದವಗೆ ಭಯವಿಲ್ಲ. ಅಸತ್ಯದ ಮಾರ್ಗಕ್ಕೆ ಶಿಕ್ಷೆ ತಪ್ಪೊಲ್ಲಾ. ಈ ದಿನಕ್ಕೆ ಹಲ್ಲುಕಚ್ಚಿ ಎಂದು ಅಂತ್ಯ ದುಷ್ಟ ಕ್ರಿಮಿಗಳಿಗೆ ಎಂದು ಕಾಯುತ್ತಿದ್ದೆ. ಸುದ್ದಿ ಕೇಳಲು ನಿದ್ರೆಮಾಡದೆ ಕಾದೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ನಿರ್ಭಯಾ ಅತ್ಯಾಚಾರಿಗಳನ್ನು ಹ್ಯಾಂಗ್ ಮಾಡೋನಿಗೆ ಜಗ್ಗೇಶ್ ಉಡುಗೊರೆ

ಈ ಹಿಂದೆ ಹ್ಯಾಂಗ್‍ಮ್ಯಾನ್ ಪವನ್ ಅವರು ನಿರ್ಭಯಾ ಅತ್ಯಾಚಾರಿಗಳನ್ನು ಗಲ್ಲಿಗೇರಿಸಿದರೆ ಅದರಿಂದ ಬರುವ ದುಡ್ಡಿನಲ್ಲಿ ನನ್ನ ಮಗಳ ಮದುವೆ ಮಾಡುತ್ತೇನೆ. ಸರ್ಕಾರ ನಂಗೆ ಒಂದು ಲಕ್ಷ ನೀಡುತ್ತದೆ. ನಾನು ಬಡತನದಿಂದ ಕುಸಿದು ಹೋಗಿದ್ದೆ. ಈಗ ಈ ಕರ್ತವ್ಯ ನಿರ್ವಹಿಸಲು ಹೇಳಿದ್ದಾರೆ. ಹೀಗಾದರೆ ನನಗೆ ಒಂದು ಲಕ್ಷ ದುಡ್ಡು ಬರುತ್ತದೆ. ಮಗಳ ಮದುವೆ ಮಾಡುತ್ತೇನೆ. ಗಲ್ಲಿಗೇರಿಸಲು ನಾನು ಸಿದ್ಧವಾಗಿದ್ದೇನೆ. ಇದು ನನ್ನ ಮಗಳ ಮದುವೆಗೆ ಹಣ ಹೊಂದಿಸುವುದಕ್ಕಾಗಿ ದೇವರೇ ಕೊಟ್ಟ ಅವಕಾಶ ಎಂದು ಭಾವುಕರಾಗಿ ಮಾಧ್ಯಮಕ್ಕೆ ಹೇಳಿಕೆ ಕೊಟ್ಟಿದ್ದರು. ಇದನ್ನೂ ಓದಿ: ಗಲ್ಲು ವಿಧಿಸುವ ಪ್ರಕ್ರಿಯೆ ಹೇಗಿತ್ತು? ಗಲ್ಲು ಶಿಕ್ಷೆಗೆ ಒಳಗಾದವರ್ಯಾರು?

ಪವನ್ ಅವರ ಮಾತು ಕೇಳಿ ಜಗ್ಗೇಶ್ ತಮ್ಮ ಟ್ವಿಟ್ಟರಿನಲ್ಲಿ, ರಾಕ್ಷಸ ಸಂಹಾರ ಮಾಡುವ ಈ ಕಾರ್ಯವನ್ನು ನೀವು ಮಾಡಿದರೆ ಒಂದು ಲಕ್ಷ ರೂ. ನಿಮಗೆ ನೀಡುತ್ತೇನೆ. ಮಗಳ ಮದುವೆ ಮಾಡುವೆ ಎನ್ನುವ ನಿಮ್ಮ ಮಾತು ನನ್ನನ್ನು ಭಾವುಕನಾಗಿಸಿದೆ. ಇಂದೇ ನಾನು ದುಡಿದ ಹಣದಲ್ಲಿ ನಿಮಗೆ ದುಡ್ಡು ಎತ್ತಿಡುವೆ ಎಂದು ಟ್ವೀಟ್ ಮಾಡಿದ್ದರು. ಕೊಟ್ಟ ಮಾತಿನಂತೆಯೇ ಜಗ್ಗೇಶ್ ಇಂದು ಹ್ಯಾಂಗ್‍ಮ್ಯಾನ್ ಪವನ್ ಅವರಿಗೆ ಒಂದು ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಇದನ್ನೂ ಓದಿ: ನ್ಯಾಯ ಸಿಕ್ಕಿದೆ ಎಂದು ನಾವು ಸುಮ್ಮನೆ ಮನೆಯಲ್ಲಿ ಕೂರುವುದಿಲ್ಲ: ನಿರ್ಭಯಾ ತಂದೆ

Comments

Leave a Reply

Your email address will not be published. Required fields are marked *