ಕುಮಾರಸ್ವಾಮಿಗೆ ನಂಬಿಕೆದ್ರೋಹ ಮಾಡಿದ್ದು ನಾವಲ್ಲ, ಬಿಎಸ್‍ವೈಗೆ ಹೆಚ್‍ಡಿಕೆಯಿಂದ ದ್ರೋಹ: ಚೆಲುವರಾಯಸ್ವಾಮಿ

– ಮುಂದಿನ ಚುನಾವಣೆಗೆ ನಾಗಮಂಗಲದಿಂದಲೇ ಸ್ಪರ್ಧೆ

ಬೆಂಗಳೂರು: ಕುಮಾರಸ್ವಾಮಿ ಅವರಿಗೆ ದ್ರೋಹ ಮಾಡಿದ್ದು ನಾವಲ್ಲ. ಯಡಿಯೂರಪ್ಪಗೆ ಕುಮಾರಸ್ವಾಮಿ ದ್ರೋಹ ಮಾಡಿದ್ದು ಎಂದು ಜೆಡಿಎಸ್ ರೆಬಲ್ ಶಾಸಕ ಚಲುವರಾಯಸ್ವಾಮಿ ಹೇಳಿದ್ದಾರೆ.

ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿರೋ ಚಲುವರಾಯಸ್ವಾಮಿ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಕುಮಾರಸ್ವಾಮಿಯವರಿಗೆ ನಂಬಿಕೆ ದ್ರೋಹ ಮಾಡಿದ್ದು ನಾವಲ್ಲ. ರಾಮಕೃಷ್ಣ ಹೆಗಡೆ ಬೊಮ್ಮಯ್ಯ ಜೆಡಿಎಸ್ ಪಕ್ಷದಲ್ಲಿ ಏನಾಯ್ತು. ಯಡಿಯೂರಪ್ಪರಿಗೆ ನಂಬಿಕೆ ದ್ರೋಹ ಮಾಡಿದ್ದು ಕುಮಾರಸ್ವಾಮಿ. ಬಿಜೆಪಿ ಬೆಂಬಲ ಇಲ್ಲದೆ ಕುಮಾರಸ್ವಾಮಿ ಸಿಎಂ ಆಗ್ತಿದ್ರಾ? ದೇವೇಗೌಡರು ಸಿಎಂ ಆಗೋಕೆ ಬೆಂಬಲ ನೀಡಿದ್ದು ಯಾರು? ಬಿಎಸ್‍ವೈ ಗೆ 20 ತಿಂಗಳು ಅಧಿಕಾರ ಕೊಡದೆ ದ್ರೋಹ ಮಾಡಿದ್ದು ಯಾರು? ನಂಬಿಕೆ ದ್ರೋಹ ಮಾಡಿದ್ದು ಯಾರು ಮೊದಲು ಅರ್ಥ ಮಾಡಿಕೊಳ್ಳಲಿ ಅಂದ್ರು.

ಮುಂದಿನ ಚುನಾವಣೆಯಲ್ಲಿ ನಾಗಮಂಗಲದಿಂದಲೇ ಸ್ಪರ್ಧೆ ಮಾಡುತ್ತೇನೆ. ಜೆಡಿಎಸ್ ಪಕ್ಷದಿಂದ ನಿಲ್ಲೋದಿಲ್ಲ. ಯಾವ ಪಕ್ಷ ಅಂತ ಮುಂದೆ ಗೊತ್ತಾಗುತ್ತೆ. ಯಾವ ಪಕ್ಷ ಅಂತ ಆದಷ್ಟು ಬೇಗ ನಿರ್ಧಾರ ಮಾಡ್ತೀನಿ. ಬಿಜೆಪಿ ಜೊತೆ ಮಾತುಕತೆ ಆಗಿಲ್ಲ. ಎಸ್.ಎಂ.ಕೃಷ್ಣ ಜೊತೆ ನಾನು ಮಾತಾಡಿಲ್ಲ. ಬಿಜೆಪಿಯ ಯಾವ ನಾಯಕರ ಜೊತೆ ಚರ್ಚಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಡಿಕೆ ಶಿವಕುಮಾರ್, ಪರಮೇಶ್ವರ್ ಮಾತಿಗೂ ನಮಗೂ ಸಂಬಂಧವಿಲ್ಲ. ಅವರೊಂದಿಗೆ ನಾವು ಚರ್ಚೆ ಮಾಡಿಲ್ಲ. ರಾಷ್ಟ್ರೀಯ ನಾಯಕರೊಂದಿಗೆ ಚರ್ಚಿಸಿ ನಾವು ತೀರ್ಮಾನ ಮಾಡ್ತೀವಿ. ಆದಷ್ಟು ಬೇಗ ರಾಜಕೀಯ ನಿರ್ಧಾರ ಪ್ರಕಟ ಮಾಡ್ತೀವಿ ಅಂದ್ರು.

Comments

Leave a Reply

Your email address will not be published. Required fields are marked *