ರಕ್ತದ ಮಡುವಲ್ಲಿ ಬಿದ್ದಿದ್ದ ಶರತ್‍ನನ್ನ ಆಸ್ಪತ್ರೆಗೆ ಸೇರಿಸಿದ್ದು ಮುಸ್ಲಿಂ ಯುವಕ

ಮಂಗಳೂರು: ಆರ್‍ಎಸ್‍ಎಸ್‍ನ ಶರತ್ ಮಡಿವಾಳ ಸಾವಿಗೂ ಮುಂಚೆ ನಡೆದಿದ್ದೇನು ಎಂಬ ಬಗ್ಗೆ ಮಾಹಿತಿಯೊಂದು ಸಿಕ್ಕಿದೆ. ಶರತ್ ಸಾವಿಗೆ ಸಂಬಂಧಿಸಿದಂತೆ ಕಾಂಗ್ರೆಸ್‍ನವರು ಬಿಜೆಪಿ ಮೇಲೆ, ಬಿಜೆಪಿಯವ್ರು ಕಾಂಗ್ರೆಸ್ ಮೇಲೆ ಆರೋಪ ಮಾಡ್ತಿದ್ದಾರೆ. ಮುಸ್ಲಿಂ ಭಯೋತ್ಪಾದಕರು ಅಂತಾ ಬಿಜೆಪಿಯವ್ರು, ಹಿಂದೂ ಭಯೋತ್ಪಾದಕರು ಅಂತ ಕಾಂಗ್ರೆಸ್ಸಿಗರು ಆರೋಪ ಪ್ರತ್ಯಾರೋಪ ಮಾಡ್ತಿದ್ರೆ ಇವೆಲ್ಲದರ ಮಧ್ಯೆ ಸೌಹಾರ್ದತೆ, ಮಾನವೀಯತೆಯ ದರ್ಶನವಾಗಿದೆ.

ಹೌದು. ಶರತ್ ಮಡಿವಾಳಗೆ ಚಾಕು ಹಾಕಿದಾಗ ದುಷ್ಕರ್ಮಿಗಳಿಂದ ಶರತ್‍ನನ್ನ ರಕ್ಷಿಸಿದ್ದೇ ಮುಸ್ಲಿಂ ಯುವಕ. ಶರತ್ ಆರ್‍ಎಸ್‍ಎಸ್ ಕಡೆಯವನೆಂದು ಗೊತ್ತಿದ್ರೂ ಪ್ರಾಣ ಉಳಿಸಿದ್ದು ಮುಸ್ಲಿಂ ಸ್ನೇಹಿತ. ರಕ್ತದ ಮಡುವಲ್ಲಿ ಬಿದ್ದಿದ್ದ ಶರತ್‍ನನ್ನ ಆಸ್ಪತ್ರೆಗೆ ಸೇರಿಸಿದ್ದು ಮುಸ್ಲಿಂ ಗೆಳೆಯ ರವೂಫ್ ಎಂದು ತಿಳಿದುಬಂದಿದೆ. ಈ ಬಗ್ಗೆ ಸ್ವತಃ ರವೂಫ್ ಜುಲೈ 6ರಂದು ಫೇಸ್‍ಬುಕ್‍ನಲ್ಲಿ ಹೇಳಿಕೊಂಡಿದ್ದಾರೆ.

ರವೂಫ್ ಫೇಸ್‍ಬುಕ್ ಪೋಸ್ಟ್ ನಲ್ಲಿ ಹೇಳಿದ್ದೇನು?:
ಶರತ್‍ನನ್ನು ಒಂದೆರಡು ಬಾರಿ ಎತ್ತಲು ಪ್ರಯತ್ನಿಸಿದೆ. ಆದರೆ ಸಾಧ್ಯವಾಗಲಿಲ್ಲ. ನಾನು ಪ್ರವೀಣ್ ಎಂಬವರನ್ನು ಹತ್ತಿರ ಕರೆದೆ. ಪ್ರವೀಣ್‍ರ ಸಹಯೋಗದೊಂದಿಗೆ ಅಂಗಡಿಗೆ ಹಣ್ಣು ಹಂಪಲು ತರುವ ನನ್ನ ರಿಕ್ಷಾದಲ್ಲಿ ಶರತ್‍ರನ್ನು ಹಾಕಿ ತುಂಬೆ ಆಸ್ಪತ್ರೆಗೆ ಸಾಗಿಸಿದೆವು. ಈ ವೇಳೆ ಇಬ್ಬರು ರಿಕ್ಷಾಕ್ಕೆ ಹತ್ತಿದರು. ತುಂಬೆ ಆಸ್ಪತ್ರೆಯಲ್ಲಿ ಶರತ್‍ಗೆ ಚಿಕಿತ್ಸೆ ನೀಡಿದ ವೈದ್ಯರು ತಕ್ಷಣ ಮಂಗಳೂರು ಆಸ್ಪತ್ರೆಗೆ ಸಾಗಿಸಲು ಸೂಚಿಸಿದರು. ಈ ಸಂದರ್ಭ ಆಸ್ಪತ್ರೆಯ ಒಳಗೆ ಹಾಗೂ ಹೊರಗೆ ನೂರಾರು ಮಂದಿ ಹಿಂದೂ ಯುವಕರು ಜಮಾಯಿಸಿದ್ದರು. ಆದ್ರೆ ಆಂಬುಲೆನ್ಸ್‍ನಲ್ಲಿ ಶರತ್‍ನನ್ನು ಮಂಗಳೂರಿಗೆ ಸಾಗಿಸಲು ಒಬ್ಬನೇ ಒಬ್ಬ ಮುಂದೆ ಬಂದಿಲ್ಲ. ಶರತ್ ಇದ್ದ ಸ್ಟ್ರೆಚರ್‍ನನ್ನು ಆಂಬುಲೆನ್ಸ್ ಒಳಗೆ ದೂಡಲು ಯಾರ ಸಹಾಯವೂ ಸಿಕ್ಕಿಲ್ಲ. ಎಲ್ಲರೂ ದೂರದಲ್ಲಿ ನಿಂತು ನೋಡುತ್ತಿದ್ದರಷ್ಟೆ. ಕೊನೆಗೆ ನಾನು, ಬಿಸಿ ರೋಡಿನಿಂದ ನಮ್ಮ ರಿಕ್ಷಾದಲ್ಲಿ ಬಂದಿದ್ದ ಮತ್ತೊಬ್ಬ ಸೇರಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಆಂಬುಲೆನ್ಸ್‍ನಲ್ಲಿ ಶರತ್‍ನನ್ನು ಸಾಗಿಸಿದೆವು ಎಂದು ರವೂಫ್ ಪೋಸ್ಟ್ ಹಾಕಿದ್ದಾರೆ.

ಅತ್ತ ಶರತ್ ಗ್ರಾಮದಲ್ಲಿ ಅಂತ್ಯ ಸಂಸ್ಕಾರ ಪ್ರಕ್ರಿಯೆ ಆರಂಭವಾಗಿದೆ. ಮನೆಯವರು ಶರತ್ ಶವಕ್ಕೆ ಸಾಂಪ್ರದಾಯಿಕ ಮೈಸೂರು ಪೇಟ ತೊಡಿಸಿದ್ದಾರೆ. ಶರತ್ ಪಾರ್ಥಿವ ಶರೀರ ಮನೆಯಿಂದ ಹೊರಟಿದ್ದು, ಶವಸಂಸ್ಕಾರದ ಜಾಗದತ್ತ ಸಾಗಿದೆ. ಶರತ್ ಅಮರ್ ರಹೇ ಎಂಬ ಘೋಷವಾಕ್ಯದೊಂದಿಗೆ ಮೃತ ದೇಹವನ್ನ ಕೊಂಡೊಯ್ಯಲಾಗಿದೆ.

Comments

Leave a Reply

Your email address will not be published. Required fields are marked *