ಕಿಚ್ಚ ಸುದೀಪ್ ಸಿನಿಮಾ ಶೂಟಿಂಗ್‍ ಗೂ ತಟ್ಟಿದ್ದ ಐಟಿ ದಾಳಿ ಬಿಸಿ

ರಾಮನಗರ: ಸಚಿವ ಡಿಕೆ ಶಿವಕುಮಾರ್ ಮೇಲಿನ ಐಟಿ ದಾಳಿ ಬಿಸಿ ಕಿಚ್ಚ ಸುದೀಪ್ ಅವರ ಸಿನಿಮಾ ಶೂಟಿಂಗ್‍ ಗೂ ತಟ್ಟಿದೆ.

ಈಗಲ್ಟನ್ ರೆಸಾರ್ಟ್ ಸುತ್ತ ಖಾಕಿ ಕಣ್ಗಾವಲು ಇದ್ದು ಈ ರೆಸಾರ್ಟ್‍ಗೆ ಇಂದು ಕಿಚ್ಚ ಸುದೀಪ್ ಹೋಗುತ್ತಿದ್ದಾರೆ. ಬುಧವಾರದಂದು ಈಗಲ್‍ಟನ್ ರೆಸಾರ್ಟ್‍ನಲ್ಲಿ ಸಚಿವ ಡಿಕೆ ಶಿವಕುಮಾರ್ ಇದ್ದ ಕಾರಣ ಐಟಿ ಅಧಿಕಾರಿಗಳು ರೆಸಾರ್ಟ್ ಮೇಲೂ ದಾಳಿ ಮಾಡಿದ್ದರು. ಎಲ್ಲಾ ವಾಹನಗಳನ್ನ ಪರಿಶೀಲಿಸಿ ಒಳಗೆ ಬಿಡಲಾಗ್ತಿತ್ತು.

ಇಂದು ರಾಜು ಕನ್ನಡ ಮೀಡಿಯಂ ಚಿತ್ರದ ಚಿತ್ರೀಕರಣ ಇರುವುದರಿಂದ ಮೂರು ಕ್ಯಾರವಾನ್ ಬಸ್ ಸೇರಿದಂತೆ ಒಂದು ಐಷಾರಾಮಿ ಬಸ್‍ನಲ್ಲಿ ಬಂದಿದ್ದ ಕಲಾವಿದರನ್ನು ಭದ್ರತಾ ಸಿಬ್ಬಂದಿ ಸುಮಾರು ಅರ್ಧ ಗಂಟೆ ಕಾಲ ಪರೀಕ್ಷಿಸಿ ರೆಸಾರ್ಟ್‍ನೊಳಗೆ ಬಿಟ್ಟಿದ್ದಾರೆ. ಈ ಚಿತ್ರದಲ್ಲಿ ನಟ ಸುದೀಪ್ ಗೆಸ್ಟ್ ರೋಲ್‍ನಲ್ಲಿ ನಟಿಸುತ್ತಿದ್ದು, ದೃಶ್ಯದ ಚಿತ್ರೀಕರಣ ಈಗಲ್‍ಟನ್ ರೆಸಾರ್ಟ್‍ನ ಗಾಲ್ಫ್ ಆವರಣದಲ್ಲಿ ನಡೆಯುತ್ತಿದೆ.

ಮೊದಲಿಗೆ ವಿಶೇಷ ಬಸ್ ರೆಸಾರ್ಟ್‍ನೊಳಗೆ ಎಂಟ್ರಿ ಕೊಟ್ಟಿದ್ದನ್ನು ನೋಡಿ ಗುಜರಾತ್ ಶಾಸಕರು ರೆಸಾರ್ಟ್‍ನಿಂದ ಶಿಫ್ಟ್ ಆಗಲು ಬಂದಿರುವ ಬಸ್ ಇರಬಹುದು ಎಂದು ಊಹಿಸಲಾಗಿತ್ತು.

ಆದರೂ ಡಿಕೆಶಿ ಮೇಲಿನ ಐಟಿ ದಾಳಿಗೆ ಹೆದರಿದ ರೆಸಾರ್ಟ್ ಮಾಲೀಕರು ಗುಜರಾತ್ ಕಾಂಗ್ರೆಸ್ ಶಾಸಕರಿಗೆ ರೆಸಾರ್ಟ್ ಖಾಲಿ ಮಾಡುವಂತೆ ಸೂಚಿಸಿದ್ದಾರೆ. ಸದ್ಯ ಗುಜರಾತ್ ಶಾಸಕರ ಮೇಲ್ವಿಚಾರಣೆಯಲ್ಲಿ ತೊಡಗಿರುವ ಡಿ.ಕೆ.ಸುರೇಶ್ ಗೂ ಕೂಡ ಈ ಬಗ್ಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ರೆಸಾರ್ಟ್‍ನಿಂದ ಗುಜರಾತ್ ಶಾಸಕರು ಬೇರೆಡೆಗೆ ಶಿಫ್ಟ್ ಆಗುವ ಸಾಧ್ಯತೆ ದಟ್ಟವಾಗಿದೆ.

Comments

Leave a Reply

Your email address will not be published. Required fields are marked *