ಜಾರಕಿಹೊಳಿ ಬೆಂಬಲಿಗರಿಗೆ ಐಟಿ ನೋಟಿಸ್ – ಬಂಧನದ ಭೀತಿಯಲ್ಲಿ ಊರು ಬಿಟ್ಟ ಗೋಕಾಕ್ ಜನ

ಬೆಳಗಾವಿ: ತಮ್ಮ ಶಾಸಕನ ಮೇಲೆ ನಂಬಿಕೆ ಇಟ್ಟು ಕೇಳಿದ್ದಲ್ಲವನ್ನೂ ಕೊಟ್ಟು ಗೋಕಾಕ್ ಜನ ಬೆನ್ನಿಗೆ ನಿಂತರು. ಆದ್ರೆ ನಂಬಿದ ಬೆಂಬಲಿಗರಿಗೆ ಗೋಕಾಕ್ ಶಾಸಕ ಹಾಗೂ ಸುಪುತ್ರ ಮಾಡಿದ ಮಹಾಮೋಸಕ್ಕೆ ಇಂದು ಅವರೆಲ್ಲರೂ ತಮ್ಮ ಊರು ಬಿಟ್ಟು ಅಜ್ಞಾತವಾಗಿದ್ದಾರೆ. ಮೂರು ವರ್ಷದ ಹಿಂದೆ ನಡೆದ ಐಟಿ ದಾಳಿಗೆ ಸಂಬಂಧಿಸಿದಂತೆ ಈಗ ಐಟಿ ಇಲಾಖೆಯಿಂದ ಬಡ ಕುಟುಂಬಗಳಿಗೆ ನೋಟಿಸ್ ಬಂದಿದೆ.

ಹೌದು. ಮಾಜಿ ಮಂತ್ರಿ ದಿ ಗ್ರೇಟ್ ರಮೇಶ್ ಜಾರಕಿಹೊಳಿ ಅವರು ತಮ್ಮ ಮಂತ್ರಿ ಸ್ಥಾನ ಹೋದ ಬಳಿಕ ದೋಸ್ತಿ ಸರ್ಕಾರದ ವಿರುದ್ಧ ಸಿಡಿದೆದ್ದು, ಬಿಜೆಪಿ ಸೇರೋ ಸಲುವಾಗಿ ಮುಂಬೈ ಸೇರಿ ತಿಂಗಳಾಗ್ತಾ ಬಂದಿದೆ. ತಾವು ಪ್ರತಿನಿಧಿಸ್ತಿರೋ ಗೋಕಾಕ್ ಕ್ಷೇತ್ರದ ಮತದಾರರ ಪಾಡು ಏನಾಯ್ತು ಎಂಬ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಮತದಾರರು ಹೋಗ್ಲಿ, ಅವ್ರ ಬೆಂಬಲಿಗರು ಪಾಡನ್ನು ವಿಚಾರಿಸೋರಿಲ್ಲ.

ರಮೇಶ್ ಮೇಲೆ ಐಟಿ ರೇಡ್ ನಡೆದ ಮೂರು ವರ್ಷದ ನಂತರ ಬೇನಾಮಿ ಆಸ್ತಿ ಹಾಗೂ ಹಣ ವರ್ಗಾವಣೆ ಸಂಬಂಧಿಸಿದಂತೆ ಈಗ ಅವರ ಬೆಂಬಲಿಗರಿಗೆ ಐಟಿ ಇಲಾಖೆ ಸಮನ್ಸ್ ನೀಡಿದೆ. ಗೋಕಾಕ್ ತಾಲೂಕಿನ ಅಕ್ಕತಂಗೇರಹಾಳ, ಗುಜನಾಳ, ಅಂಕಲಗಿ, ಮಲ್ಲಾಪುರ ಸೇರಿದಂತೆ 9ಕ್ಕೂ ಅಧಿಕ ಗ್ರಾಮಗಳಲ್ಲಿನ 50ಕ್ಕೂ ಅಧಿಕ ಜನರಿಗೆ ಐಟಿ ನೋಟಿಸ್ ನೀಡಿದೆ. ಈ ನೋಟಿಸ್ ಬೆನ್ನಲ್ಲೇ ಜನ ಊರು ತೊರೆದಿದ್ದಾರೆ.

ನಾಲ್ಕೈದು ವರ್ಷದ ಹಿಂದೆ ರೈತ ಭೀಮಗೌಡನಿಂದ ವೋಟರ್ ಐಡಿ ಹಾಗೂ ಒಂದು ಫೋಟೋ ಪಡೆದಿದ್ದ ರಮೇಶ್ ಜಾರಕಿಹೊಳಿ, ಅವರಿಗೆ ಗೊತ್ತಿಲ್ಲದಂತೆ ಅಕೌಂಟ್ ನಿಂದ ಸುಮಾರು ಮೂವತ್ತು ಲಕ್ಷ ಹಣ ವರ್ಗಾವಣೆ ಮಾಡಿದ್ರಂತೆ. ಇದು ಐಟಿ ದಾಳಿ ವೇಳೆ ಬಯಲಾಗಿದ್ದು, ಇದರ ಆಧಾರದ ಮೇಲೆ ಸದ್ಯ ಐಟಿ ಇಲಾಖೆ ಸಮನ್ಸ್ ನೀಡಿದೆ ಎನ್ನಲಾಗುತ್ತಿದೆ. ತಮ್ಮಿಂದ ಮುಗ್ಧ ರೈತರು ಇಷ್ಟೆಲ್ಲಾ ಕಷ್ಟ ಅನುಭವಿಸ್ತಿದ್ರೂ ಜಾರಕಿಹೊಳಿ ಮಾತ್ರ ಮುಂಬೈ ರೇಸಾರ್ಟ್‍ನಲ್ಲಿ ಮಸ್ತ್ ಮಜಾ ಮಾಡುತ್ತಿರುವುದು ಇದೀಗ ಅವರ ಬೆಂಬಲಿಗರನ್ನೇ ಕೆರಳಿಸಿದೆ.

ಒಟ್ಟಿನಲ್ಲಿ ಗೋಕಾಕ್ ಶಾಸಕರನ್ನು ಬೆಂಬಲಿಸಿದ ಏಕೈಕ ಕಾರಣಕ್ಕೆ ಅವರು ಆದಾಯ ತೆರಿಗೆ ದಾಳಿಯ ಬಿಸಿ ಅನುಭವಿಸಬೇಕಾಗಿ ಬಂದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Comments

Leave a Reply

Your email address will not be published. Required fields are marked *