ABVP, RSS, ಬಜರಂಗದಳದ ರೀತಿಯಲ್ಲೇ IT,ED,CBI ಬಿಜೆಪಿಗೆ ಕಾರ್ಯನಿರ್ವಹಿಸುತ್ತಿವೆ: ದಿನೇಶ್ ಗುಂಡೂರಾವ್

ಬೆಂಗಳೂರು: ಇಂಧನ ಸಚಿವ ಡಿ ಕೆ ಶಿವಕುಮಾರ್ ಹಾಗೂ ಕೈ ನಾಯಕರ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿರುವುದನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಖಂಡಿಸಿದ್ದಾರೆ.

ಈ ಬಗ್ಗೆ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಐಟಿ ಸೇರಿದಂತೆ ಇಡಿ, ಸಿಬಿಐ ಗಳು ಮೋದಿ ಅವರ ಕೈಗೊಂಬೆಯಾಗಿ ಕೆಲಸ ಮಾಡ್ತಿವೆ. ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಗಮನಕ್ಕೆ ತರದೇ ಸಿಆರ್‍ಪಿಎಫ್ ಅನ್ನು ಕಳುಹಿಸಿದ್ದಾರೆ. ರಾಜಕೀಯ ಪ್ರೇರಿತವಾಗಿ ಐಟಿ ದಾಳಿ ನಡೆಸಲಾಗಿದೆ ಎಂದು ಟೀಕಿಸಿದರು.

ಆಪರೇಷನ್ ಕಮಲದ ವಿರುದ್ಧ ನಮ್ಮ ಶಾಸಕರನ್ನ ಗುಜರಾತ್ ನಿಂದ ಕರ್ನಾಟಕಕ್ಕೆ ಕರೆತರಲಾಗಿತ್ತು. ಕುದುರೆ ವ್ಯಾಪಾರವನ್ನ ತಪ್ಪಿಸಲು ಶಾಸಕರನ್ನ ಗುಜರಾತ್ ನಿಂದ ಕರ್ನಾಟಕಕ್ಕೆ ಶಿಫ್ಟ್ ಮಾಡಲಾಗಿತ್ತು.. ಶಾಸಕರನ್ನ ಕರೆತಂದಿದ್ದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರವಾಗಿದೆ. ಇದನ್ನೇ ಗುರಿಯಾಗಿಸಿಟ್ಟುಕೊಂಡು ಐಟಿ ದಾಳಿ ನಡೆಸಿರೋದು ಸರಿಯಲ್ಲ. ಮೋದಿ ಅವರು ಟಿ.ವಿ ಚಾನಲ್‍ಗಳನ್ನು ಖರೀದಿ ಮಾಡಿದ್ದಾರೆ. ಆ ಚಾನಲ್ ಗಳ ಮೂಲಕ ಐಟಿ ದಾಳಿಗಳನ್ನ ಹೆಚ್ವು ಹೆಚ್ಚು ತೋರಿಸಿ ದೇಶಾದ್ಯಂತೆ ಚರ್ಚೆ ನಡೆಸ್ತಾರೆ ಅಂತಾ ಕಿಡಿಕಾರಿದ್ರು.

ದೇಶದಲ್ಲಿ ಸರ್ವಾಧಿಕಾರ ಆಡಳಿತ, ಮೋದಿ ಹಿಟ್ಲರ್ ನೀತಿ ಅನುಸರಿಸುತ್ತಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಿದ್ದು ಹೋಗಿಲ್ಲ. ಸಿಆರ್‍ಪಿಎಫ್ ಕರ್ನಾಟಕಕ್ಕೆ ಕಳುಹಿಸುವ ಅಗತ್ಯವಿರಲಿಲ್ಲ. ಸರ್ಕಾರದ ಗಮನಕ್ಕೆ ತರದೇ ಸಿಆರ್‍ಪಿಎಫ್ ಕಳಿಸಿರೋದು ಸರಿಯಲ್ಲ. ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಕೇಂದ್ರ ಸರ್ಕಾರದ ಪ್ರಧಾನಿ ಮೋದಿ ಅವರು ಪ್ರಯತ್ನ ಮಾಡ್ತಿದ್ದಾರೆ. ಸಿಬಿಐ, ಇಡಿ, ಐಟಿ ಮೂರು ಕೇಂದ್ರ ಸರ್ಕಾರದ ಏಜೆನ್ಸಿಗಳು. ಹಾಗೂ ಬಿಜೆಪಿಯ ಅಂಗಸಂಸ್ಥೆಗಳಾಗಿವೆ. ಎಬಿವಿಪಿ, ಆರ್‍ಎಸ್‍ಎಸ್, ಬಜರಂಗದಳದ ರೀತಿಯಲ್ಲೇ ಐಟಿ, ಇಡಿ ಸಿಬಿಐ ಬಿಜೆಪಿಗೆ ಕಾರ್ಯನಿರ್ವಹಿಸುತ್ತಿವೆ ಅಂತಾ ಅವರು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *