ರಾಜ್ಯೋತ್ಸವದ ಹೆಸರಿನಲ್ಲಿ ಅಧಿಕಾರಿಗಳಿಂದ ಹಣ ವಸೂಲಿಗೆ ಇಳಿದ್ರಾ ಶಾಸಕ ಬಿ.ಶಿವಣ್ಣ!

ಬೆಂಗಳೂರು: ಹಲವು ಇಲಾಖೆಯ ಅಧಿಕಾರಿಗಳಿಂದ ರಾಜ್ಯೋತ್ಸವ ಕಾರ್ಯಕ್ರಮ ಮಾಡುವುದಕ್ಕೆ ಶಾಸಕರೇ ಅಧಿಕಾರಿಗಳ ಬಳಿ ವಸೂಲಿಗೆ ಇಳಿದಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಬೆಂಗಳೂರು ಹೊರವಲಯ ಆನೇಕಲ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಶಾಸಕ ಬಿ.ಶಿವಣ್ಣರ ವಿರುದ್ಧ ಈ ರೀತಿಯ ಆರೋಪಗಳು ಕೇಳಿ ಬಂದಿವೆ.

ಕನ್ನಡ ರಾಜ್ಯೋತ್ಸವ ಹೆಸರಿನಲ್ಲಿ ಹಲವು ಇಲಾಖೆಗಳಿಂದ ಲಕ್ಷಗಟ್ಟಲ್ಲೇ ಹಣವನ್ನು ವಸೂಲಿ ಮಾಡಿದ್ದು, ಅಧಿಕಾರಿಗಳು ಭ್ರಷ್ಟಾಚಾರ ಮಾಡುವುದಕ್ಕೆ ಶಾಸಕರೇ ಕುಮ್ಮಕ್ಕು ನೀಡಿದ್ದಂತಾಗಿದೆ. ಅಕ್ಟೋಬರ್ 17ರಂದು ರಾಜ್ಯೋತ್ಸವ ಕಾರ್ಯಕ್ರಮದ ಬಗ್ಗೆ ಆಯೋಜಿಸಿದ್ದ ಸಭೆಯಲ್ಲಿ ತಹಶೀಲ್ದಾರ್ ಮಹದೇವಯ್ಯ ಹಾಗು ತಾಲೂಕು ಪಂಚಾಯಿತಿ ಇ.ಓ. ರಮೇಶ್ ಹಣ ವಸೂಲಿ ಮಾಡುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ. ಇಲಾಖೆಯ ಅಧಿಕಾರಿಗಳಿಂದ ಲಕ್ಷಾಂತರ ರೂಪಾಯಿಗಳ ಹಣವನ್ನು ವಸೂಲಿ ಮಾಡಿದ್ದು ರೆವಿನ್ಯೂ, ಸಬ್ ರಿಜಿಸ್ಟರ್ ಹಾಗು ಹಲವು ಇಲಾಖೆಗಳಿಗೆ ಕುದ್ದು ಶಾಸಕರೇ ಸಭೆ ಮಾಡಿ ಹಣ ನೀಡುವಂತೆ ಸೂಚನೆ ಸಹ ನೀಡಿದ್ದಾರಂತೆ.

ತಾಲೂಕು ಪಂಚಾಯತಿ ರಾಜ್ಯೋತ್ಸವ ಕಾರ್ಯಕ್ರಮ ಸಭೆಯಲ್ಲಿ ಶಾಸಕರ ಸೂಚನೆಯಂತೆ ತಹಶೀಲ್ದಾರ್ ಮಹದೇವಯ್ಯ ಅಧಿಕಾರಿಗಳ ಹಣಕ್ಕೆ ಬೇಡಿಕೆ ಇಟ್ಟಿದ್ದು, ಇನ್ನು ಪ್ರತಿ ಬಾರಿ ಸಹ ಆಚರಿಸುವ ರಾಷ್ಟ್ರೀಯ ಹಬ್ಬಗಳಿಗೆ ಲಕ್ಷಗಟ್ಟಲ್ಲೇ ಹಣ ವಸೂಲಿ ಮಾಡಿ ಸಂಗ್ರಹಿಸಿದ ಹಣದ ಖರ್ಚಿನ ಮಾಹಿತಿ ಸಹ ನೀಡಿಲ್ಲ. ಇಲಾಖೆಯ ಅಧಿಕಾರಿಗಳಿಗೆ ಶಾಸಕರೇ ಕುಮ್ಮಕ್ಕು ನೀಡಿ ಭ್ರಷ್ಟಾಚಾರದಲ್ಲಿ ತೊಡಗುವಂತೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಒಂದು ನಗರಸಭೆಯಲ್ಲಿಯೇ ಮೂರು ಲಕ್ಷ ರೂ ಹಣ ಪಡೆದಿದ್ದು, ಹಲವು ಇಲಾಖೆಗಳಿಂದ ಸಾಕಷ್ಟು ಹಣ ವಸೂಲಿಗೆ ಶಾಸಕರೇ ಅಖಾಡಕ್ಕೆ ಇಳಿದಿದ್ದಾರಂತೆ. ಕನ್ನಡ ರಾಜ್ಯೋತ್ಸವ ಮಾಡಲು ಸರ್ಕಾರದ ಬಳಿ ಹಣ ಇಲ್ವಾ ? ಶಾಸಕರೇ ಹೀಗೆ ಅಧಿಕಾರಿಗಳ ಬಳಿ ಹಣ ವಸೂಲಿ ಮಾಡಿದ್ರೆ ಹೇಗೆ? ಭ್ರಷ್ಟಾಚಾರದಲ್ಲಿ ತೊಡಗಿಕೊಳ್ಳಲು ಅಧಿಕಾರಿಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರಾ ಎಂಬಿತ್ಯಾದಿ ಪ್ರಶ್ನೆಗಳ ಸಾರ್ವಜನಿಕರಲ್ಲಿ ಹುಟ್ಟಿಕೊಂಡಿವೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *