Exclusive: ಬಿಜೆಪಿ ಪರಿವರ್ತನಾ ಯಾತ್ರೆಗೆ ಬೆದರಿದ್ರಾ ಸಿಎಂ ಸಿದ್ದರಾಮಯ್ಯ?

ಬೆಂಗಳೂರು: ಮುಂಬರುವ ಚುನಾವಣೆಗೆ ಬಿಜೆಪಿಯಿಂದ ಹಿಂದುತ್ವ ಅಜೆಂಡಾ ಘೋಷಣೆ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಇಂದು ಹಿರಿಯ ಪೊಲೀಸ್ ಅಧಿಕಾರಿಗಳ ಮಹತ್ವದ ಸಭೆ ನಡೆಸಿದ್ದಾರೆ. ಇಂದು ಬೆಳಗ್ಗೆ 11 ಗಂಟೆ ವೇಳೆ ಗೃಹ ಕಚೇರಿ ಕೃಷ್ಣದಲ್ಲಿ ನಡೆದ ಸಭೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು, ಎಸ್‍ಪಿ, ಪೊಲೀಸ್ ಆಯುಕ್ತರು ಸಭೆಯಲ್ಲಿ ಭಾಗವಹಿಸಿದ್ದರು.

ಈ ಸಭೆಯಲ್ಲಿ ಸಿಎಂ ಬರೀ ಪರಿವರ್ತನಾ ರ‍್ಯಾಲಿಯ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದುಬಂದಿದೆ. ಪರಿವರ್ತನಾ ರ‍್ಯಾಲಿ ಯಾವ ರೀತಿ ನಡೆಯುತ್ತೆ? ಎಲ್ಲೆಲ್ಲಿ ಏನೇನಾಗುತ್ತೆ ಎಂಬುದರ ಬಗ್ಗೆ ಇಂಚಿಚು ಮಾಹಿತಿ ನೀಡಬೇಕು. ಯಾತ್ರೆ ವೇಳೆ ಎಲ್ಲಿಯಾದರೂ ಉದ್ಧಟತನ ಮಾಡಿದ್ರೆ ಮುಲಾಜಿಲ್ಲದೆ ಅವರ ವಿರುದ್ಧ ಕೇಸ್ ಗಳನ್ನು ಹಾಕಬೇಕು. ಪರಿವರ್ತನಾ ಯಾತ್ರೆಯ ಅಲೆ ಹೇಗಿದೆ? ಅದಕ್ಕೆ ಎಷ್ಟು ಜನ ಸೇರಿದ್ರು, ಎಂಬುದರ ಬಗ್ಗೆ ಸಂಪೂರ್ಣ ವರದಿ ನೀಡಬೇಕು ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

 

ಸಾಧ್ಯವಾದರೆ ಪರಿವರ್ತನಾ ಯಾತ್ರೆಗೆ ಅಡ್ಡಗಾಲು ಹಾಕಿ, ಭಯಪಡುವ ಅಗತ್ಯ ಇಲ್ಲ. ಸೂಕ್ಷ ಪ್ರದೇಶಗಳಲ್ಲಿ ಪ್ರಚೋದನಕಾರಿ ಭಾಷಣ ಮಾಡುವವರು ಯಾರಾದರೂ ಬಂದರೆ ಅವರನ್ನು ತಡೆಯಿರಿ. ಸೂಕ್ಷ್ಮ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ ಎಂದು ತಿಳಿದರೆ ತಕ್ಷಣ ನಿಷೇಧಾಜ್ಞೆ ಜಾರಿ ಮಾಡಿ. ನಿಷೇಧಾಜ್ಞೆ ಜಾರಿ ಮಾಡಿದ ಪ್ರದೇಶದಲ್ಲಿ ಯಾತ್ರೆ ಆಗದಂತೆ ನೋಡಿಕೊಳಬೇಕು ಎಂದು ಸೂಚಿಸಿದ್ದಾರೆ ಎನ್ನಲಾಗಿದೆ.

ಈ ಯಾತ್ರೆಯಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರಬಾರದು. ಜೊತೆಗೆ ಸಾರ್ವಜನಿಕರಿಗೂ ಯಾವುದೇ ರೀತಿಯ ತೊಂದರೆ ಆಗಬಾರದು. ಟಿಪ್ಪು ಜಯಂತಿ ಸಂದರ್ಭದಲ್ಲಿ ಅಹಿತಕರ ಘಟನೆ ನಡೆಯದಂತೆ ಕಾಪಾಡಬೇಕು. ಹಾಗೇನಾದರೂ ಅಹಿತಕರ ಘಟನೆ ನಡೆದರೆ ತಲೆದಂಡ ಗ್ಯಾರೆಂಟಿ ಎಂದು ಎಚ್ಚರಿಸಿದ್ದಾರೆ.

ಪ್ರಚೋದನಕಾರಿ ಭಾಷಣ ಮಾಡುವ ನಾಯಕರ ಪಟ್ಟಿ ತಯಾರಿಸಿ, ಭದ್ರತೆ ನೋಡಿಕೊಳ್ಳಿ. ಅದನ್ನು ಬಿಟ್ಟು ಚಮಚಗಿರಿ ಮಾಡೋಕೆ ಹೋದ್ರೆ ನಿಮಗೆ ಬಹುಮಾನ ಸಿಕ್ಕುತ್ತೆ ನೋಡಿ ಎಂದು ಎಚ್ಚರಿಸಿದ್ದಾರೆ ಎನ್ನಲಾಗಿದೆ.

 

 

Comments

Leave a Reply

Your email address will not be published. Required fields are marked *