ರಮ್ಯಾ ವಿರುದ್ಧ ಚುನಾವಣೆಗೆ ಸ್ಪರ್ಧಿಸಲು ರಾಜೀನಾಮೆ ನೀಡಿದ್ರಾ ಐಆರ್‍ಎಸ್ ಅಧಿಕಾರಿ ಲಕ್ಷ್ಮಿ ಅಶ್ವಿನ್ ಗೌಡ?

ಮಂಡ್ಯ: ಮಾಜಿ ಸಂಸದೆ ರಮ್ಯಾ ವಿರುದ್ಧ ಮುಂಬರುವ ಚುನಾವಣೆಯಲ್ಲಿ ಐಆರ್‍ಎಸ್ ಅಧಿಕಾರಿ ಲಕ್ಷ್ಮಿ ಅಶ್ವಿನ್ ಗೌಡ ಸ್ಪರ್ಧೆ ಮಾಡುತ್ತಾರೆ ಎಂಬ ಊಹಾಪೋಹಕ್ಕೆ ಪುಷ್ಟಿ ನೀಡುವಂತೆ ಲಕ್ಷ್ಮಿ ಅಶ್ವಿನ್‍ಗೌಡ ತಮ್ಮ ವೃತ್ತಿಗೆ ರಾಜೀನಾಮೆ ನೀಡಿದ್ದಾರೆ.

ಮುಂಬರುವ ವಿಧಾಸಭೆ ಚುನಾವಣೆಯಲ್ಲಿ ರಮ್ಯಾ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಗುಸುಗುಸು ಜಿಲ್ಲೆಯಲ್ಲಿ ಶುರುವಾಗಿತ್ತು. ಹೀಗಾಗಿ ಮಂಡ್ಯ ಕ್ಷೇತ್ರದ ಶಾಸಕರಾಗಿದ್ದ ಅಂಬರೀಷ್ ಮತ್ತು ರಮ್ಯಾ ನಡುವೆ ಮುಸುಕಿನ ಗುದ್ದಾಟ ಆರಂಭವಾಗಿತ್ತು. ಇದೆಲ್ಲದರ ನಡುವೆಯೇ ಒಂದು ವೇಳೆ ರಮ್ಯಾ ಮಂಡ್ಯ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ರೆ ಅವರಿಗೆ ಪ್ರತಿಸ್ಪರ್ಧಿಯಾಗಿ ಪ್ರಬಲ ಮಹಿಳಾ ಅಭ್ಯರ್ಥಿಯನ್ನೇ ಕಣಕ್ಕಿಳಿಸಲು ಜೆಡಿಎಸ್ ವಲಯದಲ್ಲೂ ಚರ್ಚೆ ಶುರುವಾಗಿತ್ತು.

ಐಆರ್‍ಎಸ್ ಅಧಿಕಾರಿಯಾಗಿದ್ದ ಲಕ್ಷ್ಮಿ ಅಶ್ವಿನ್ ಗೌಡ ಅವರು ರಮ್ಯಾ ಅವರಿಗೆ ಪ್ರಬಲ ಪೈಪೋಟಿ ನೀಡಬಲ್ಲ ಮಹಿಳಾ ಅಭ್ಯರ್ಥಿ ಎಂದು ಜಿಲ್ಲೆಯಲ್ಲಿ ಚರ್ಚೆ ಶುರುವಾಗಿತ್ತು. ಪರೋಕ್ಷವಾಗಿ ಜೆಡಿಎಸ್ ವರಿಷ್ಠರ ಜೊತೆ ಸಂಪರ್ಕದಲ್ಲಿದ್ದ ಲಕ್ಷ್ಮಿ ಅಶ್ವಿನ್ ಗೌಡ ಸರ್ಕಾರಿ ಕೆಲಸದಲ್ಲಿದ್ದರಿಂದ ಅವರು ಮಾಜಿ ಸಂಸದೆ ರಮ್ಯಾ ವಿರುದ್ಧ ಸ್ಪರ್ಧಿಸೋದು ಅನುಮಾನ ಎಂಬಂತಾಗಿತ್ತು. ಆದರೆ ಈ ಊಹಾಪೋಹಕ್ಕೆ ತೆರೆ ಎಂಬಂತೆ ಲಕ್ಷ್ಮಿ ಅಶ್ವಿನ್‍ಗೌಡ ಅವರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ.

ಇಂದು ಜಿಲ್ಲೆಯ ಕೆಆರ್ ಪೇಟೆಯಲ್ಲಿ ನಡೆದ ಜೆಡಿಎಸ್‍ನ ಕುಮಾರಪರ್ವ ಕಾರ್ಯಕ್ರಮದಲ್ಲಿ ಲಕ್ಷ್ಮಿ ಅಶ್ವಿನ್‍ಗೌಡ ಅವರು ಭಾಗವಹಿಸಿದ್ದರು. ಸ್ವತಃ ಅವರೇ ಮಾತನಾಡಿ ಐಆರ್‍ಎಸ್ ಹುದ್ದೆಗೆ ರಾಜೀನಾಮೆ ನೀಡಾಗಿದೆ. ಮುಂದೆ ಇದರ ಬಗ್ಗೆ ಮಾತನಾಡುತ್ತೇನೆ ಎಂದು ತಿಳಿಸಿದರು.

 

Comments

Leave a Reply

Your email address will not be published. Required fields are marked *