ಪುರಾತತ್ವ ಇಲಾಖೆಯ ನಿರ್ಲಕ್ಷ್ಯಕ್ಕೊಳಗಾದ ಚಿತ್ರದುರ್ಗ ಕೋಟೆ

ಚಿತ್ರದುರ್ಗ: ಐತಿಹಾಸಿಕ ಪ್ರವಾಸಿ ತಾಣವಾದ ಚಿತ್ರದುರ್ಗದ ಕೋಟೆಯಲ್ಲಿ ಬಿದ್ದರೆ ಸೀದಾ ಶಿವನ ಪಾದ ಗ್ಯಾರಂಟಿ ಎಂಬಂತಾಗಿದೆ. ಜಗತ್ ಪ್ರಸಿದ್ಧ ಕೋಟೆ ಪುರಾತತ್ವ ಇಲಾಖೆಯ ನಿರ್ಲಕ್ಷ್ಯದಿಂದ ಪ್ರವಾಸಿ ತಾಣವೀಗ ಮೃತ್ಯುಕೂಪವಾಗಿ ಮಾರ್ಪಟ್ಟಿದೆ.

ಹೌದು. ಲಕ್ಷಾಂತರ ಜನ ಪ್ರವಾಸಿಗರು ಬರುವ ಪ್ರಸಿದ್ಧ ಪ್ರವಾಸಿ ತಾಣವಾದ ಚಿತ್ರದುರ್ಗ ಕೋಟೆಯಲ್ಲಿ ಪ್ರಥಮ ಚಿಕಿತ್ಸಾ ಕೇಂದ್ರವಿಲ್ಲ. ಅಪಾಯಕಾರಿ ಸ್ಥಳಗಳಲ್ಲಿ ಸೂಚನಾ ಫಲಕವೂ ಇಲ್ಲ. ಹೀಗೆ ಪುರಾತತ್ವ ಇಲಾಖೆ ಪ್ರಸಿದ್ಧ ಚಿತ್ರದುರ್ಗ ಕೋಟೆಯಲ್ಲಿ ನಿರ್ಲಕ್ಷ ತೋರುತ್ತಿರುವುದು ಪ್ರವಾಸಿಗರ ಕೆಂಗಣ್ಣಿಗೆ ಕಾರಣವಾಗಿದೆ.

ಏಳುಸುತ್ತಿನ ಕೋಟೆಯೊಳಗೆ ಬಂದವರು ವಾಪಾಸ್ ಹೋಗುವುದೇ ಅನುಮಾನವಾಗಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಯಾಕೆಂದರೆ ಕೋಟೆಯಲ್ಲಿನ ಅಪಾಯಕಾರಿ ಸ್ಥಳಗಳಲ್ಲಿ ಮುಂಜಾಗ್ರತಾ ಸೂಚನ ಫಲಕವಿಲ್ಲ. ನೂರಾರು ಅಡಿ ಎತ್ತರದ ತುಪ್ಪದ ಕೊಳ, ಗೋಪಾಲಸ್ವಾಮಿ ಹೊಂಡದಲ್ಲಿ ಪ್ರವಾಸಿಗರ ಜೀವಕ್ಕೆ ರಕ್ಷಣೆಯಿಲ್ಲ. ಪುರಾತತ್ವ ಇಲಾಖೆ ಪ್ರವಾಸಿಗರ ಹಣ ಮಾತ್ರ ಬೇಕು, ರಕ್ಷಣೆ ಮಾತ್ರ ಬೇಡ ಅನ್ನುತ್ತಿದೆ ಎಂದು ಇಲಾಖೆಯ ನಿರ್ಲಕ್ಷ್ಯಕ್ಕೆ ಪ್ರವಾಸಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಏನಾದರೂ ಅವಘಡ ಸಂಭವಿಸಿದರೆ ಪ್ರಥಮ ಚಿಕಿತ್ಸೆ ನೀಡುವುದಕ್ಕೂ ಕೋಟೆಯಲ್ಲಿ ಸೂಕ್ತ ವ್ಯವಸ್ಥೆಯಿಲ್ಲ. ಅಹಿತಕರ ಘಟನೆಗಳು ಆದರೆ ಕೋಟೆ ಪ್ರವಾಸಿಗರಿಗೆ ಜಿಲ್ಲಾ ಸರ್ಕಾರಿ ಆಸ್ಪತ್ರೆಯೇ ಆಸರೆ. ಹೀಗಾಗಿ ಪ್ರವಾಸಿಗರಲ್ಲಿ ಆತಂಕ ಹೆಚ್ಚಾಗಿದೆ.

Comments

Leave a Reply

Your email address will not be published. Required fields are marked *