ಆರ್‌ಸಿಬಿ ಗೆಲುವಿಗೆ ಅಶ್ವಿನ್ ಕಾರಣ!

ಬೆಂಗಳೂರು: ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಆರ್ ಸಿಬಿ ನಡುವಿನ ಭಾನುವಾರದ ಪಂದ್ಯದಲ್ಲಿ ಬೆಂಗಳೂರು ತಂಡ ಗೆಲುವು ಪಡೆಯಲು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ನಾಯಕ ಆರ್ ಅಶ್ವಿನ್ ಕಾರಣವೇ? – ಹೀಗೊಂದು ಪ್ರಶ್ನೆಯನ್ನು ಇಟ್ಟುಕೊಂಡು ಕ್ರಿಕೆಟ್ ಅಭಿಮಾನಿಗಳು ಚರ್ಚೆ ನಡೆಸುತ್ತಿದ್ದಾರೆ.

ಪಂದ್ಯದ ಅಂತಿಮ ಓವರಿನಲ್ಲಿ ನಡೆದ ರನೌಟ್ ನಿಂದಾಗಿ ಈ ಪ್ರಶ್ನೆ ಎದ್ದಿದ್ದು, ಆರ್ ಅಶ್ವಿನ್ ಟೂರ್ನಿಯಲ್ಲಿ ‘ಮಂಕಡ್’ ರನೌಟ್ ಮಾಡಿದ್ದೆ ಕಾರಣ ಎಂಬ ವಿವರಣೆಯನ್ನು ಮುಂದಿಟ್ಟಿದ್ದಾರೆ.

ಅಂತಿಮ ಎಸೆತದಲ್ಲಿ ಗೆಲುವಿಗೆ 2 ರನ್ ಅಗತ್ಯವಿತ್ತು. ಆದರೆ ಧೋನಿ ಚೆಂಡನ್ನು ಕನೆಕ್ಟ್ ಮಾಡಲು ವಿಫಲವಾದ ಪರಿಣಾಮ ಒಂಟಿ ರನ್ ಓಡಿದ್ದರು. ಈ ವೇಳೆ ನಾನ್‍ಸ್ಟ್ರೈಕ್ ಬದಿಯಿಂದ ಓಡಿಬಂದ ಶಾರ್ದೂಲ್ ಠಾಕೂರ್ ರನ್ನು ಕೇವಲ 16 ಸೆ.ಮೀ ಅಂತರದಲ್ಲಿ ಪಾರ್ಥಿವ್ ಪಟೇಲ್ ರನೌಟ್ ಮಾಡಿದ್ದರು.

ಒಂದೊಮ್ಮೆ ಠಾಕೂರ್ ಒಂಟಿ ರನ್ ಗಳಿಸಲು ಯಶಸ್ವಿ ಆಗಿದ್ದರೆ ಪಂದ್ಯ ಟೈ ಆಗುತ್ತಿತ್ತು. ಆ ಬಳಿಕ ಸೂಪರ್ ಓವರ್ ಆಡುವ ಅವಕಾಶ ಚೆನ್ನೈಗೆ ಲಭಿಸುತ್ತಿತ್ತು. ಆದರೆ ಟೂರ್ನಿಯಲ್ಲಿ ಅಶ್ವಿನ್ ಮಂಕಡ್ ರನೌಟ್ ಮಾಡಿದ್ದರ ಪರಿಣಾಮ ಬೌಲರ್ ಚೆಂಡು ಎಸೆಯುವ ಮುನ್ನ ಶಾರ್ದೂಲ್ ಠಾಕೂರ್ ಕ್ರಿಸ್ ಬಿಡಲು ಹಿಂದೇಟು ಹಾಕಿದ್ದರಿಂದಲೇ ರನೌಟ್ ಆಗಿದೆ ಎಂಬ ವಾದವನ್ನು ನೆಟ್ಟಿಗರು ಮುಂದಿಟ್ಟಿದ್ದಾರೆ.

ಈ ಕುರಿತಂತೆ ಕ್ರಿಕೆಟ್ ವಿಶ್ಲೇಷಕ ಹರ್ಷ ಭೋಗ್ಲೆ ಕೂಡ ಟ್ವೀಟ್ ಮಾಡಿ ಪ್ರತಿಕ್ರಿಯೆ ನೀಡಿದ್ದು, ಶಾರ್ದೂಲ್ ಠಾಕೂರ್ ಈ ಪಂದ್ಯದಲ್ಲಿ 6 ಇಂಚಿನ ಜಾಗವನ್ನು ಕಬಳಿಸುತ್ತಿದ್ದರು. ಕ್ರೀಡಾ ಸ್ಫೂರ್ತಿಯ ಹಿನ್ನೆಲೆಯಲ್ಲಿ ಇದನ್ನು ಒಪ್ಪಿಕೊಳ್ಳಲು ಸಾಧ್ಯವೇ? ಆದ್ದರಿಂದಲೇ ನಿಯಮಗಳಿಗೆ ಗೌರವ ನೀಡಬೇಕೆಂದು ಟ್ವೀಟ್ ಮಾಡಿದ್ದಾರೆ.

ಕೊನೆಯ ಓವರ್ ಹೀಗಿತ್ತು:
ಕೊನೆಯ 6 ಎಸೆತದಲ್ಲಿ ಚೆನ್ನೈ ತಂಡ 26 ರನ್ ಗಳಿಸಬೇಕಿತ್ತು. ಉಮೇಶ್ ಯಾದವ್ ಎಸೆದ ಮೊದಲ ಎಸೆತವನ್ನು ಧೋನಿ ಬೌಂಡರಿಗೆ ಅಟ್ಟಿದರೆ ನಂತರದ ಎರಡು ಎಸೆತಗಳನ್ನು ಸಿಕ್ಸರ್‍ಗೆ ಅಟ್ಟಿದ್ದರು. ನಾಲ್ಕನೇಯ ಎಸೆತದಲ್ಲಿ 2 ರನ್ ಓಡಿದ ಧೋನಿ 5ನೇ ಎಸೆತದಲ್ಲಿ ಸಿಕ್ಸರ್ ಸಿಡಿಸಿದರು. ಕೊನೆಯ ಎಸೆತದಲ್ಲಿ ಎರಡು ಬೇಕಿತ್ತು. ಧೋನಿ ಸ್ಟ್ರೈಕ್ ನಲ್ಲಿದ್ದ ಕಾರಣ ಚೆನ್ನೈ ಪಂದ್ಯ ಗೆಲ್ಲುತ್ತದೆ ಎನ್ನುವ ನಿರೀಕ್ಷೆ ಇತ್ತು. ಆದರೆ ಕೊನೆಯ ಎಸೆತ ಧೋನಿ ಬ್ಯಾಟಿಗೆ ಸಿಗದೇ ಬಾಲ್ ಕೀಪರ್ ಪಾರ್ಥಿವ್ ಪಟೇಲ್ ಕೈಗೆ ಸಿಕ್ಕಿತು. ಆದರೂ ಒಂದು ರನ್ ಓಡಲು ಪ್ರಯತ್ನಿಸುತ್ತಿದ್ದಾಗ ಪಾರ್ಥಿವ್ ಪಟೇಲ್ ಶಾರ್ದೂಲ್ ಠಾಕೂರ್ ಅವರನ್ನು ರನೌಟ್ ಮಾಡಿದರು. ಈ ಮೂಲಕ ಬೆಂಗಳೂರು ತಂಡ 1 ರನ್‍ನಿಂದ ಪಂದ್ಯವನ್ನು ರೋಚಕವಾಗಿ ಗೆದ್ದುಕೊಂಡಿತು.

ಈ ಸುದ್ದಿಗೆ ಸಂಬಂಧಿಸಿದಂತೆ ನಿಮ್ಮ ಅಭಿಪ್ರಾಯ ಏನು? ಕಮೆಂಟ್ ಮಾಡಿ ತಿಳಿಸಿ.

Comments

Leave a Reply

Your email address will not be published. Required fields are marked *