ಕೆಆರ್‌ಎಸ್ ಡ್ಯಾಂನ ನೀರಿನ ಮಟ್ಟ ಹೆಚ್ಚಳ

ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಸಾಧಾರಣ ಮಳೆ ಆಗುತ್ತಿರುವುರಿಂದ ಕೆಆರ್‌ಎಸ್ ಜಲಾಶಯದ ಒಳ ಹರಿವು ಹೆಚ್ಚಾಗಿದ್ದು, 120 ಅಡಿ ಸನಿಹಕ್ಕೆ ನೀರಿನ ಮಟ್ಟ ತಲುಪಿದೆ.

ಮುಂಗಾರು ಹಾಗೂ ಹಿಂಗಾರು ವೇಳೆ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬೀಳದ ಕಾರಣ ಈ ಬಾರಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಜಲಾಶಯ ಭರ್ತಿಯಾಗುವ ಸೂಚನೆಯೇ ಇರಲಿಲ್ಲ. ಇದೀಗ ಕಳೆದ 10 ದಿನಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಸಾಧಾರಣ ಮಳೆಯಾಗುತ್ತಿದ್ದು ಕೆಆರ್‌ಎಸ್ ಜಲಾಶಯ ಭರ್ತಿಯಾಗುವ ಸೂಚನೆ ಸಿಕ್ಕಿದೆ.

ಈ ವರ್ಷ 121 ಅಡಿ ತುಂಬಿದ್ದೇ ಗರಿಷ್ಠ ಮಟ್ಟವಾಗಿತ್ತು. ಮಳೆ ಕಡಿಮೆಯಾಗಿದ್ದರಿಂದ ಒಳಹರಿವು ಇಳಿಮುಖವಾಗಿತ್ತು. ತಮಿಳುನಾಡು ಹಾಗೂ ರೈತರ ಬೆಳೆಗಳಿಗೆ ನೀರು ಹರಿಸಿದ ಪರಿಣಾಮ ಡ್ಯಾಂ ನೀರಿನ ಮಟ್ಟ ಕುಸಿತ ಕಂಡಿತ್ತು.

ಅಕ್ಟೋಬರ್ 1ರಂದು 112.72 ಅಡಿಗೆ ನೀರಿನ ಮಟ್ಟ ಕುಸಿತ ಕಂಡಿತ್ತು. ಇದರಿಂದ ಡ್ಯಾಂ ಅಚ್ಟುಕಟ್ಟು ಪ್ರದೇಶದಲ್ಲಿ ರೈತರಿಗೆ ಆತಂಕವಾಗಿದ್ದರೆ ಬೆಂಗಳೂರಿಗೂ ನೀರಿನ ಸಮಸ್ಯೆಯ ಭೀತಿ ಎದುರಾಗಿತ್ತು. ಇದೀಗ ಕಾವೇರಿ ನದಿ ಪಾತ್ರದಲ್ಲಿ ಮತ್ತೆ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಡ್ಯಾಂ ನೀರಿನ ಮಟ್ಟ 119.78 ಅಡಿಗೆ ಏರಿಕೆಯಾಗಿದೆ.

ಡ್ಯಾಂ ಭರ್ತಿಗಾಗಿ ಇತ್ತೀಚೆಗೆ ವಿಶೇಷ ಪೂಜೆ ಮಾಡಲಾಗಿತ್ತು. ಕಾವೇರಿ ಪ್ರತಿಮೆ ಬಳಿ ಖ್ಯಾತ ಜ್ಯೋತಿಷಿ ಬಾನುಪ್ರಕಾಶ ಶರ್ಮಾ ನೇತೃತ್ವದಲ್ಲಿ ಪರ್ಜನ್ಯ ಜಪ ಮಾಡಲಾಗಿತ್ತು. ಈ ಪೂಜೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಕುಟುಂಬ ಸಮೇತರಾಗಿ ಪಾಲ್ಗೊಂಡಿದ್ದರು. ಇದನ್ನೂ ಓದಿ: ಕೃಷಿ ಕ್ಷೇತ್ರಕ್ಕೂ ಕಾಲಿಟ್ಟ ಡ್ರೋನ್ – ಕ್ರಿಮಿನಾಶಕ್ಕೆ ಡ್ರೋನ್ ಬಳಕೆ

ಈಗ ನೀರು ಎಷ್ಟಿದೆ?
ಡ್ಯಾಂ ಗರಿಷ್ಠ ಮಟ್ಟ 124.80 ಅಡಿ
ಡ್ಯಾಂ ಇಂದಿನ ಮಟ್ಟ :119.78 ಅಡಿ
ಒಳಹರಿವು : 19,785 ಕ್ಯೂಸೆಕ್
ಹೊರಹರಿವು : 5,167 ಕ್ಯೂಸೆಕ್
ಗರಿಷ್ಠ ಸಂಗ್ರಹ: 49.401 ಟಿಎಂಸಿ.
ಪ್ರಸ್ತುತ ಸಂಗ್ರಹ : 42.767 ಟಿಎಂಸಿ

Comments

Leave a Reply

Your email address will not be published. Required fields are marked *