ಸೈನಿಕರ ರೋಚಕ ಕಥೆ ಹೇಳಲಿದ್ದಾರೆ ಧೋನಿ

ನವದೆಹಲಿ: 2019ರ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಬಳಿಕ ಟೀಂ ಇಂಡಿಯಾದಿಂದ ದೂರ ಉಳಿದಿರುವ ಮಾಜಿ ನಾಯಕ ಎಂಎಸ್ ಧೋನಿ, ಸದ್ಯ ಕಿರುತೆರೆಗೆ ಕಾಲಿಡಲು ಸಿದ್ಧತೆ ನಡೆಸಿದ್ದಾರೆ. ಸೈನಿಕರಿಗಾಗಿಯೇ ನಡೆಯುವ ವಿಶೇಷ ಕಾರ್ಯಕ್ರಮವೊಂದನ್ನು ಧೋನಿ ನಿರ್ಮಾಣ ಮಾಡಲಿದ್ದಾರೆ.

ಈ ಹಿಂದೆಯೂ ಬಾಲಿವುಡ್ ಪರದೆಯ ಮೇಲೆ ಧೋನಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಸಾಕಷ್ಟು ಬಾರಿ ಕೇಳಿ ಬಂದಿದ್ದರು ಸದ್ಯ ಅವರು ಕಿರುತೆರೆಗೆ ನಿರ್ಮಾಪಕರಾಗಿ ಎಂಟ್ರಿ ನೀಡುವುದು ಖಚಿತವಾಗಿದೆ. ಕ್ರಿಕೆಟ್‍ನಿಂದ ವಿಶ್ರಾಂತಿ ಪಡೆದಿರುವ ಧೋನಿ, ಸದ್ಯ ಸ್ಟೂಡಿಯೋ ನೆಟ್ಸ್ ಸಂಸ್ಥೆಯೊಂದಿಗೆ ಕೈಜೋಡಿಸಿ ಧೋನಿ ಎಂಟರ್ ಟೈನ್ಮೆಂಟ್ ಮೂಲಕ ಕಾರ್ಯಕ್ರಮ ನಿರ್ಮಾಣವಾಗಲಿದೆ.

ವಿಶ್ವಕಪ್ ಟೂರ್ನಿಯ ಬಳಿಕ ತಂಡದಿಂದ ಸ್ವತಃ ದೂರ ಉಳಿದಿದ್ದ ಧೋನಿ ಭಾರತದ ಸೈನ್ಯದಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ಸೇವೆ ಸಲ್ಲಿಸಿದ್ದರು. ಈ ವೇಳೆ ಸೈನಿಕರ ಸಮಸ್ಯೆಗಳನ್ನು ಹತ್ತಿರದಿಂದ ತಿಳಿದುಕೊಂಡಿದ್ದ ಧೋನಿ, ಸದ್ಯ ಪರಮವೀರ ಚಕ್ರ, ಆಶೋಕ ಚಕ್ರ ಪ್ರಶಸ್ತಿಗಳನ್ನು ಪಡೆದಿರುವ ಸೈನಿಕರ ಸಾಧನೆ, ಅವರ ಕುಟುಂಬದ ಕುರಿತು ಕಾರ್ಯಕ್ರಮ ನಿರ್ಮಾಣ ಮಾಡಲಿದ್ದು, ಕಿರುತೆರೆಯಲ್ಲಿ ಈ ಕಾರ್ಯಕ್ರಮ ಪ್ರಸಾರವಾಗಲಿದೆ.

ಸದ್ಯ ಕಾರ್ಯಕ್ರಮದ ಸ್ಕ್ರಿಪ್ಟ್ ರಚಿಸುವ ಕಾರ್ಯದಲ್ಲಿ ತಂಡ ಬ್ಯುಸಿಯಾಗಿದ್ದು, ಮುಂದಿನ ವರ್ಷ ಈ ಕಾರ್ಯಕ್ರಮ ಪ್ರಸಾರವಾಗಲಿದೆ. ಅಂದಹಾಗೇ ಕಳೆದ ವರ್ಷ ಜುಲೈ 30ರಂದು 106ಟಿಎ ಪ್ಯಾರಾ ಬೆಟಾಲಿಯನ್‍ನಲ್ಲಿ ಸೇನೆಯ ಕರ್ತವ್ಯಕ್ಕೆ ಹಾಜರಾಗಿದ್ದ ಧೋನಿ 14 ದಿನಗಳ ಕಾಲ ಸೈನ್ಯದಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಅಲ್ಲದೇ ಕಾಶ್ಮೀರದ ಪರ್ವತದಲ್ಲಿ ಗಸ್ತು, ಕಾವಲು ಹಾಗೂ ಹೊರ ಠಾಣೆಗಳ ಕಾವಲು ಕೆಲಸವನ್ನು ನಿರ್ವಹಿಸಿದ್ದರು. ಧೋನಿ ಭಾರತೀಯ ಸೇನೆಯ ಬ್ರಾಂಡ್ ಅಂಬಾಸಿಡರ್ ಆಗಿದ್ದು, 2011ರಲ್ಲಿ ಅವರಿಗೆ ಲೆಫ್ಟಿನೆಂಟ್ ಕರ್ನಲ್ ಗೌರವ ಹುದ್ದೆ ನೀಡಲಾಗಿತ್ತು. 2015ರಲ್ಲಿಯೂ ಧೋನಿ ಆಗ್ರಾದಲ್ಲಿ ಪ್ಯಾರಾಚೂಟ್ ರೆಜಿಮೆಂಟ್ ಸೇನಾ ತಂಡದವರೊಂದಿಗೆ ತರಬೇತಿ ಪಡೆದಿದ್ದರು.

Comments

Leave a Reply

Your email address will not be published. Required fields are marked *