ಒಂದೇ ಓವರ್‌ನಲ್ಲಿ ಮೂರು ವಿಕೆಟ್ ಕಿತ್ತ ಶಾರ್ದೂಲ್- ಭಾರತಕ್ಕೆ 143 ರನ್‍ಗಳ ಗುರಿ

– ಎರಡಂಕಿ ರನ್ ದಾಟದ ನಾಲ್ವರು ಶ್ರೀಲಂಕಾ ಆಟಗಾರರು
– ಭರ್ಜರಿ ಬೌಲಿಂಗ್ ಮಾಡಿದ ಯುವ ವೇಗಿಗಳು

ಇಂದೋರ್: ಟೀಂ ಇಂಡಿಯಾ ಯುವ ವೇಗದ ಬೌಲರ್ ಶಾರ್ದೂಲ್ ಠಾಕೂರ್, ನವದೀಪ್ ಸೈನಿ ಹಾಗೂ ಸ್ಪಿನ್ನರ್ ಕುಲದೀಪ್ ಯಾದವ್ ಅವರ ದಾಳಿಗೆ ನಲುಗಿದ ಶ್ರೀಲಂಕಾ ತಂಡವು 142 ರನ್ ಗಳಿಸಲು ಶಕ್ತವಾಯಿತು.

ಇಂದೋರ್‌ನ ಹೋಲ್ಕರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟಿ20 ಪಂದ್ಯದಲ್ಲಿ ಶ್ರೀಲಂಕಾ ತಂಡವು ಕುಸಲ್ ಪೆರೆರಾ 34 ರನ್, ಅವಿಷ್ಕಾ ಫರ್ನಾಂಡೊ 22 ರನ್, ಧನುಷ್ಕಾ ಗುಣತಿಲಕ 20 ರನ್‍ಗಳಿಂದ 9 ವಿಕೆಟ್ ನಷ್ಟಕ್ಕೆ 142 ರನ್ ಪೇರಿಸಿದೆ. ಈ ಮೂಲಕ ಟೀಂ ಇಂಡಿಯಾಗೆ 143 ರನ್‍ಗಳ ಸುಲಭದ ಗುರಿ ನೀಡಿದೆ.

ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಟೀಂ ಇಂಡಿಯಾ ಶ್ರೀಲಂಕಾ ಆಟಗಾರರನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಯಿತು. ಇನ್ನಿಂಗ್ಸ್ ನ 5ನೇ ಓವರ್ ನಲ್ಲಿ ವಾಷಿಂಗ್ಟನ್ ಸುಂದರ್ ಅವರು ಅವಿಷ್ಕಾ ಫರ್ನಾಂಡೊ ವಿಕೆಟ್ ಪಡೆಯುವ ಮೂಲಕ ಪಂದ್ಯಕ್ಕೆ ಭರ್ಜರಿ ತಿರುವು ನೀಡಿದರು. 16 ಎಸೆತಗಳಲ್ಲಿ ಅವಿಷ್ಕಾ ಫರ್ನಾಂಡೊ 22 ರನ್ (3 ಸಿಕ್ಸರ್) ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ 7ನೇ ಓವರ್ ನಲ್ಲಿ ನವದೀಪ್ ಸೈನಿ ಧನುಷ್ಕಾ ಗುಣತಿಲಕ ವಿಕೆಟ್ ಕಿತ್ತರು. ಧನುಷ್ಕಾ ಗುಣತಿಲಕ 21 ಎಸೆತಗಳಲ್ಲಿ ಧನುಷ್ಕಾ ಗುಣತಿಲಕ 20 ರನ್ (3 ಬೌಂಡರಿ) ಗಳಿಸಿ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿದರು.

ಬಳಿಕ ಮೈದಾನಕ್ಕಿಳಿದ ಕುಸಲ್ ಪೆರೆರಾ 34 ರನ್ ಸಿಡಿಸಿ ತಂಡದ ಮೊತ್ತವನ್ನು ಏರಿಸಿದರು. ಆದರೆ ಇನ್ನಿಂಗ್ಸ್ ನ 14ನೇ ಓವರ್ ನಲ್ಲಿ ಅವರು ವಿಕೆಟ್ ಒಪ್ಪಿಸಿದರು. ಈ ಬೆನ್ನಲ್ಲೇ ಮೈದಾನಕ್ಕಿಳಿದ ಆಟಗಾರರು ಸಾಲಾಗಿ ಪೆವಿಲಿಯನ್ ಕಡೆ ಪರೇಡ್ ನಡೆಸಿದರು. ಈ ಪೈಕಿ ನಾಲ್ವರು ಎರಡಂಕಿ ರನ್ ದಾಟಲು ವಿಫಲರಾದರು. ಇನ್ನಿಂಗ್ಸ್ ನ 19ನೇ ಓವರ್ ನಲ್ಲಿ ಭರ್ಜರಿ ಬೌಲಿಂಗ್ ಮಾಡಿದ ಯುವ ವೇಗಿ ಶಾರ್ದೂಲ್ ಠಾಕೂರ್ ಮೂರು ವಿಕೆಟ್ ಉರುಳಿಸಿ ತಂಡಕ್ಕೆ ಆಸರೆಯಾದರು. ಈ ಮೂಲಕ ಶ್ರೀಲಂಕಾ 9 ವಿಕೆಟ್ ಕಳೆದುಕೊಂಡು 142 ರನ್ ಪೇರಿಸಿತು.

Comments

Leave a Reply

Your email address will not be published. Required fields are marked *