ಟಾಸ್ ಗೆದ್ದು, ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಪಾಕ್ – ಆಡುವ 11ರ ಬಳಗದಲ್ಲಿ ವಿಜಯ್ ಶಂಕರ್ ಗೆ ಸ್ಥಾನ

ಮ್ಯಾಂಚೆಸ್ಟರ್: 2019ರ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಇಂದು ನಡೆಯುತ್ತಿದ್ದು, ಪಾಕ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.

ಟೀಂ ಇಂಡಿಯಾ ತಂಡದಲ್ಲಿ ನಾಯಕ ವಿರಾಟ್ ಕೊಹ್ಲಿ, ಉಪನಾಯಕ ರೋಹಿತ್ ಶರ್ಮಾ, ಕೀಪರ್ ಎಂ.ಎಸ್.ಧೋನಿ, ಕೆ.ಎಲ್.ರಾಹುಲ್, ವಿಜಯ್ ಶಂಕರ್, ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ, ಕೇದಾರ್ ಜಾಧವ್, ಬೌಲರ್ ಗಳಾದ ಜಸ್ಪ್ರೀತ್ ಬುಮ್ರಾ,  ಭುವನೇಶ್ವರ್ ಕುಮಾರ್, ಯಜುವೇಂದ್ರ ಚಾಹಲ್,  ಕುಲ್ದೀಪ್ ಯಾದವ್ ತಂಡದಲ್ಲಿದ್ದಾರೆ.

ಆರಂಭಿಕ ಬ್ಯಾಟ್ಸಮನ್ ಶಿಖರ್ ಧವನ್ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿರುವುದರಿಂದ ರಾಹುಲ್ ಇನ್ನಿಂಗ್ಸ್ ಆರಂಭಿಸುವುದು ಖಚಿತವಾಗಿದೆ. ಭಾರೀ ಕುತೂಹಲ ಮೂಡಿಸಿದ್ದ 4ನೇ ಸ್ಥಾನದಲ್ಲಿ ವಿಜಯ್ ಶಂಕರ್ ಆಡಲಿದ್ದಾರೆ. ಈ ಸ್ಥಾನದಲ್ಲಿ ದಿನೇಶ್ ಕಾರ್ತಿಕ್ ಅವರನ್ನು ಆಯ್ಕೆ ಮಾಡಲಾಗುವುದು ಎನ್ನಲಾಗಿತ್ತು. ಆದರೆ ಕಾರ್ತಿಕ್ ಅನುಭವವನ್ನು ಪರಿಗಣಿಸದ ಆಯ್ಕೆ ಸಮಿತಿ ವಿಜಯ್ ಶಂಕರ್ ಗೆ ಮಣೆ ಹಾಕಿದೆ.

ವಿಜಯ್ ಶಂಕರ್ ಆಡುವ 11ರ ಬಳಗದಲ್ಲಿ ಸ್ಥಾನ ನೀಡಲು ಆಯ್ಕೆ ಸಮಿತಿ ಭಾರೀ ಲೆಕ್ಕಾಚಾರಗಳನ್ನು ಹಾಕಿದೆ. ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ವಿರುದ್ಧದ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿ ವಿಜಯ್ ಶಂಕರ್ ವಿಶ್ವಕಪ್ ಗೆ ಆಯ್ಕೆ ಆಗಿದ್ದರು. ಈ ವೇಳೆ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸುವ ಸಲುವಾಗಿಯೇ ವಿಜಯ್‍ರನ್ನ ಆಯ್ಕೆ ಮಾಡಲಾಗಿತ್ತು. ಅಲ್ಲದೇ ಬ್ಯಾಟಿಂಗ್, ಬೌಲಿಂಗ್ ನಲ್ಲೂ ಮಿಂಚುವ ಸಾಮರ್ಥ್ಯ ಹೊಂದಿರುವುದರಿಂದ ವಿಜಯ್ ಶಂಕರ್ ಗೆ ಮಣೆ ಹಾಕಲಾಗಿದೆ.

ಪಾಕಿಸ್ತಾನದ ಪ್ರಧಾನಿ, ಮಾಜಿ ಕ್ರಿಕೆಟರ್ ಇಮ್ರಾನ್ ಖಾನ್ ತಮ್ಮ ದೇಶದ ತಂಡಕ್ಕೆ ಶುಭ ಕೋರಿದ್ದಾರೆ. ಒಂದು ವೇಳೆ ಟಾಸ್ ಗೆದ್ದರೆ ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳಿ ಎಂದು ಟ್ವೀಟ್ ಮೂಲಕ ಸಲಹೆ ನೀಡಿದ್ದರು.

Comments

Leave a Reply

Your email address will not be published. Required fields are marked *