ಟೀಂ ಇಂಡಿಯಾದಲ್ಲಿ ಕನ್ನಡಿಗರ ಕಮಾಲ್

ನ್ಯೂಜಿಲೆಂಡ್: ಟೀಂ ಇಂಡಿಯಾದಲ್ಲಿ ಕನ್ನಡಿಗರು ಕಮಾಲ್ ಮಾಡಲು ಸಿದ್ಧರಾಗಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಮೂವರು ಕನ್ನಡಿಗರು ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಬ್ಯಾಟ್ಸ್‌ಮನ್‌ಗಳಾದ ಕೆ.ಎಲ್.ರಾಹುಲ್, ಮನೀಶ್ ಪಾಂಡೆ ಬಳಿಕ ಈಗ ಮಯಾಂಕ್ ಅಗರ್ವಾಲ್ ತಂಡ ಸೇರಿಕೊಂಡಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾದ ಕ್ಯಾಪನ್ನು ಮಯಾಂಕ್ ಅಗರ್ವಾಲ್ ತೊಡಲಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಲಿದ್ದಾರೆ. ಈಗಾಗಲೇ ಟೆಸ್ಟ್‍ನಲ್ಲಿ ಕೊಟ್ಟ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡಿರುವ ಮಯಾಂಕ್ ಅಗರ್ವಾಲ್ ಏಕದಿನ ಕ್ರಿಕೆಟ್‍ನಲ್ಲಿ ಕಿವೀಸ್ ನಾಡಲ್ಲೂ ಸ್ಫೋಟಕ ಬ್ಯಾಟಿಂಗ್‍ಗೆ ಸನ್ನದ್ಧರಾಗಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ನಡೆದ ಟಿ20 ಸರಣಿಯಲ್ಲಿ ಕನ್ನಡಿಗರಾದ ಕೆ.ಎಲ್.ರಾಹುಲ್ ಹಾಗೂ ಮನೀಶ್ ಪಾಂಡೆ ಸಖತ್ ಮಿಂಚಿದ್ದಾರೆ. ಕೆ.ಎಲ್.ರಾಹುಲ್ 5 ಪಂದ್ಯಗಳಲ್ಲೂ ಬ್ಯಾಟಿಂಗ್ ಹಾಗೂ ಕೀಪಿಂಗ್‍ನಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದರು.

ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಮನೀಶ್ ಪಾಂಡೆ ಸಹ ಮಿಡಲ್ ಆರ್ಡರ್‍ನಲ್ಲಿ ತಂಡಕ್ಕೆ ನೆರವಾಗಿ, ಪಂದ್ಯದ ಗೆಲುವಿನ ಕಾರಣಿಕರ್ತರಾದರು. ಇದರೊಂದಿಗೆ ತಂಡದಲ್ಲಿ ಕೆ.ಎಲ್.ರಾಹುಲ್, ಮನೀಶ್ ಪಾಂಡೆ ಸ್ಥಾನವನ್ನು ಭದ್ರ ಮಾಡಿಕೊಂಡಿದ್ದಾರೆ. ಮಯಾಂಕ್ ಅಗರ್ವಾಲ್ ಸಹ ಬುಧವಾರದ ಪಂದ್ಯದಲ್ಲಿ ಮಿಂಚಿದರೆ 11 ರ ಬಳಗದಲ್ಲಿ ನೆಲೆಯುರಲಿದ್ದಾರೆ.

ಒಟ್ಟಿನಲ್ಲಿ ಮೂವರು ಕನ್ನಡಿಗರು ಬುಧವಾರದ ಪಂದ್ಯದಲ್ಲಿ ಅವಕಾಶಗಿಟ್ಟಿಸಿಕೊಂಡರೆ ಇತಿಹಾಸ ಮರುಕಳುಹಿಸಲಿದೆ. ದಶಕದ ಹಿಂದೆ ಭಾರತ ತಂಡದಲ್ಲಿ ಕನ್ನಡಿಗ ಆಟಗಾರರೇ ಹೆಚ್ಚಿದ್ದರು. ಮಾಜಿ ಕ್ರಿಕೆಟಿಗರಾದ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್ ಒಟ್ಟಿಗೆ ಕಣಕ್ಕಿಳಿದಿದ್ದು ಇದೀಗ ಇತಿಹಾಸ.

Comments

Leave a Reply

Your email address will not be published. Required fields are marked *