ಧೋನಿ ಭರ್ಜರಿ ಕೀಪಿಂಗ್ – ಭಾರತಕ್ಕೆ 265 ರನ್ ಗುರಿ

ಲಂಡನ್: ವಿಶ್ವಕಪ್ ಟೂರ್ನಿಯ ಅಂತಿಮ ಪಂದ್ಯವನ್ನು ಆಡುತ್ತಿರುವ ಶ್ರೀಲಂಕಾ ತಂಡ ಟೀಂ ಇಂಡಿಯಾಗೆ ಗೆಲ್ಲಲು 265 ರನ್ ಗುರಿ ನೀಡಿದೆ.

ಲಂಕಾ ತಂಡದ ಪರ ಶತಕ ಸಿಡಿಸಿದ ಮ್ಯಾಥ್ಯೂಸ್ ತಂಡ ಸವಾಲಿನ ಮೊತ್ತ ಗಳಿಸಲು ಕಾರಣರಾದರು. ಪಂದ್ಯದಲ್ಲಿ 128 ಎಸೆತಗಳನ್ನು ಎದರುಸಿದ ಮ್ಯಾಥ್ಯೂಸ್ 113 ರನ್ (10 ಬೌಂಡರಿ, 2 ಸಿಕ್ಸ್) ಗಳಿಸಿದರು. ಆ ಮೂಲಕ ವೃತ್ತಿ ಜೀವನದ 3ನೇ ಶತಕವನ್ನು ಗಳಿಸಿದರು. ವಿಶೇಷ ಎಂದರೆ ಮ್ಯಾಥ್ಯೂಸ್ 3 ಶತಕಗಳನ್ನು ಭಾರತ ವಿರುದ್ಧವೇ ಸಿಡಿಸಿದ್ದಾರೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ ತಂಡಕ್ಕೆ ಟೀಂ ಇಂಡಿಯಾ ಬೌಲರ್ ಬುಮ್ರಾ ಆರಂಭಿಕ ಆಘಾತ ನೀಡಿದರು. ಕರುಣಾರತ್ನೆ 10 ರನ್ ಹಾಗೂ 18 ರನ್ ಹೊಡೆದಿದ್ದ ಕುಶಾಲ್ ಪೆರೆರಾ ಅವರನ್ನು ಔಟ್ ಮಾಡಿದರು. ಆ ಬಳಿಕ 20 ರನ್ ಗಳಿಸಿದ್ದ ಅವಿಷ್ಕಾ ಫರ್ನಾಂಡೊ ವಿಕೆಟನ್ನು ಪಾಂಡ್ಯ ಪಡೆದರೆ, ಟೂರ್ನಿಯಲ್ಲಿ ಮೊದಲ ಪಂದ್ಯವಾಡಿದ ಜಡೇಜಾ ತಮ್ಮ ಮೊದಲ ಓವರಿನಲ್ಲಿ ಕುಶಾಲ ಮೆಂಡೀಸ್ (3 ರನ್) ವಿಕೆಟ್ ಪಡೆದು ಮಿಂಚಿದರು. ಮೊದಲ ನಾಲ್ಕು ವಿಕೆಟ್ ಪಡೆದಾಗಲೂ ಧೋನಿ 3 ಕ್ಯಾಚ್ ಪಡೆದು 1 ಸ್ಟಂಪ್ ಔಟ್ ಮಾಡಿದ್ದರು. ಇದರೊಂದಿಗೆ ಲಂಕಾ ತಂಡ 55 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇತ್ತ ಏಕದಿನ ಕ್ರಿಕೆಟಿನಲ್ಲಿ ಬುಮ್ರಾ 100 ವಿಕೆಟ್ ಸಾಧನೆ ಮಾಡಿದರು.

ಸಂಕಷ್ಟದ ಹಂತದಲ್ಲಿ ತಂಡಕ್ಕೆ ಆಸೆಯಾದ ಮ್ಯಾಥ್ಯೂಸ್, ತಿರಿಮಣೆ 53 ರನ್(68 ಎಸೆತ, 4 ಬೌಂಡರಿ) ರೊಂದಿಗೆ ಸೇರಿ 5ನೇ ವಿಕೆಟ್‍ಗೆ 124 ರನ್ ಜೊತೆಯಾಟ ನೀಡಿದರು. ಇತ್ತ ಬೃಹತ್ ಜೊತೆಯಾಟದೊಂದಿಗೆ ತಂಡಕ್ಕೆ ತಲೆನೋವಾಗಿದ್ದ ಜೋಡಿಯನ್ನು ತಿರಿಮಣೆ ವಿಕೆಟ್ ಪಡೆಯುವ ಮೂಲಕ ಕುಲ್ದೀಪ್ ಯಾಧವ್ ಬಹು ದೊಡ್ಡ ಬ್ರೇಕ್ ನೀಡಿದರು. ಅಂತಿಮ ಹಂತದಲ್ಲಿ 113 ರನ್ ಗಳಿಸಿದ್ದ ಮ್ಯಾಥ್ಯೂಸ್ ರನ್ನು ಬುಮ್ರಾ ಪೆವಿಲಿಯನ್‍ಗಟ್ಟಿದ್ದರು. ಅಂತಿಮವಾಗಿ 7 ವಿಕೆಟ್ ಕಳೆದುಕೊಂಡು 264 ರನ್ ಗಳಿಸಿದ ಶ್ರೀಲಂಕಾ ಟೀಂ ಇಂಡಿಯಾಗೆ 265 ರನ್ ಗುರಿ ನೀಡಿತು. ಟೀಂ ಇಂಡಿಯಾ ಪರ ಬುಮ್ರಾ 3 ವಿಕೆಟ್ ಪಡೆದರೆ, ಭುವನೇಶ್ವರ್ ಕುಮಾರ್, ಪಾಂಡ್ಯ, ಜಡೇಜಾ, ಕುಲ್ದೀಪ್ ಯಾದವ್ ತಲಾ 1 ವಿಕೆಟ್ ಪಡೆದರು.

Comments

Leave a Reply

Your email address will not be published. Required fields are marked *