ಪಾಕ್ ಕುತಂತ್ರಕ್ಕೆ ಭಾರತದಲ್ಲಿ ‘ಯುದ್ಧವೂ ಇಲ್ಲ, ಶಾಂತಿಯೂ ಇಲ್ಲ’: ಬಿಪಿನ್ ರಾವತ್

ನವದೆಹಲಿ: ಉಗ್ರರನ್ನು ಮುಂದಿಟ್ಟುಕೊಂಡು ಪಾಕಿಸ್ತಾನ ಭಾರತದ ಮೇಲೆ ದಾಳಿ ನಡೆಸುತ್ತಿದೆ. ಈ ಬಗ್ಗೆ ಗೊತ್ತಿದ್ದರೂ ನಾವು ಯುದ್ಧ ಮಾಡಲು ಆಗುತ್ತಿಲ್ಲ. ಇದರಿಂದ ಭಾರತದಲ್ಲಿ ಶಾಂತಿಯೂ ಇಲ್ಲ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.

ಇಂದು ರಕ್ಷಣಾ ಸಂವಹನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಾಕಿಸ್ತಾನದ ಕುತಂತ್ರದ ಬಗ್ಗೆ ತಿಳಿದಿದ್ದರೂ ಕ್ರಮ ತೆಗದುಕೊಳ್ಳಲು ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಪಾಕಿಸ್ತಾನ ಉಗ್ರರನ್ನು ಮುಂದೆ ಬಿಟ್ಟು ನಡೆಸುತ್ತಿರುವ ದಾಳಿಯಲ್ಲಿ ಹೋರಾಡುವುದರಲ್ಲಿಯೇ ಭಾರತ ನಿರತವಾಗಿದೆ. ಯುದ್ಧವೂ ಇಲ್ಲ, ಶಾಂತಿಯೂ ಇಲ್ಲದಂತಹ ಸ್ಥಿತಿಯಲ್ಲಿ ನಾವಿದ್ದೇವೆ ಎಂದು ತಿಳಿಸಿದರು.

ಆಧುನಿಕ ಯುದ್ಧ ಭೂಮಿಯಲ್ಲಿ ಜಯಗಳಿಸುವುದು ತಡೆರಹಿತ ಸಂವಹನದ ಮೇಲೆ ನಿಂತಿದೆ. ನಮ್ಮ ರಕ್ಷಣಾ ಸಂವಹನ ಸೇನೆ, ನೌಕಾಪಡೆ, ವಾಯುಪಡೆ ಮೂರು ಪಡೆಗಳನ್ನು ಒಂದು ಮಾಡಿದೆ. ಆದರೆ ಇಂದು ಭಾರತೀಯ ಸೇನೆ ರಾಜಿ ಮಾಡಿಕೊಳ್ಳಬೇಕಾದ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಸೇನೆಯ ಗೌಪ್ಯತೆಯನ್ನು ಕಾಪಾಡಿಕೊಳ್ಳುವ ಸಂವಹನ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸಬೇಕಾದ ಅವಶ್ಯಕತೆಯಿದೆ ಎಂದರು.

ಭದ್ರತಾ ಪಡೆ ವ್ಯವಸ್ಥೆಯಲ್ಲಿ ಗೌಪ್ಯತೆ ಮುಖ್ಯವಾಗಿರುತ್ತದೆ. ನಾವು ಅದರಲ್ಲಿ ರಾಜಿ ಮಾಡಿಕೊಂಡರೆ ಯಾವ ಯೋಜನೆಯೂ ಯಶಸ್ವಿ ಆಗುವುದಿಲ್ಲ. ಆದ್ದರಿಂದ ಸ್ಥಳೀಯ ವ್ಯವಸ್ಥೆಗಳನ್ನು ಅಭಿವೃದ್ಧಿಗೊಳಿಸುವುದು ಮುಖ್ಯವಾಗಿದೆ. ಆದರೆ ನಾವು ಇಂದು ಎಲ್ಲದರಲ್ಲೂ ರಾಜಿ ಮಾಡಿಕೊಳ್ಳುತ್ತಿದ್ದೇವೆ ಎಂದು ಅಸಮಾಧಾನವನ್ನು ಹೊರಹಾಕಿದರು.

ಸೇನೆ, ನೌಕಾಪಡೆ ಮತ್ತೆ ವಾಯು ಪಡೆಗಳ ಸಂಪರ್ಕವನ್ನು ಸಂಯೋಜಿಸಲಾಗುವುದು, ಸಮಸ್ಯೆಯ ಪರಸ್ಪರ ಕಾರ್ಯಸಾಧ್ಯತೆಯನ್ನು ತಿಳಿಸಲಾಗುವುದು. ಜಂಟಿ ಕಾರ್ಯಾಚರಣೆಗಾಗಿ ಯೋಜನೆ, ಗುಪ್ತಚರ, ವ್ಯವಸ್ಥೆ ಮತ್ತು ಸಂವಹನ ಅಗತ್ಯ. ಹೀಗಾಗಿ ಮುಂದಿನ ವರ್ಷ ಹೊಸ ರಕ್ಷಣಾ ಖರೀದಿ ನೀತಿಯನ್ನು ನಿರೀಕ್ಷಿಸಲಾಗಿದೆ ಎಂದು ಜನರಲ್ ರಾವತ್ ಹೇಳಿದರು.

Comments

Leave a Reply

Your email address will not be published. Required fields are marked *