ಡಿ.19 ರಂದು ಇಂಡಿಯಾ ಒಕ್ಕೂಟದ ಸಭೆ: ಜೈರಾಮ್‌ ರಮೇಶ್‌

ನವದೆಹಲಿ: ಇಂಡಿಯಾ ಒಕ್ಕೂಟದ (INDIA Bloc) ನಾಲ್ಕನೇ ಸಭೆಯನ್ನು ಮತ್ತೆ ಮುಂದೂಡಲಾಗಿದ್ದು, ಡಿಸೆಂಬರ್ 19 ರಂದು ದೆಹಲಿಯಲ್ಲಿ ನಡೆಯಲಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ (Jai Ram Ramesh) ಭಾನುವಾರ ಹೇಳಿದ್ದಾರೆ.

ಈ ಹಿಂದೆ ಡಿಸೆಂಬರ್ 17 ರಂದು ಸಭೆ ನಿಗದಿಯಾಗಿತ್ತು. ಆದರೆ ಇದೀಗ ಮತ್ತೆ ಈ ಸಭೆಯನ್ನು ಮುಂದೂಡಿದ್ದು, ಇದಕ್ಕೆ ಕಾರಣ ತಿಳಿದುಬಂದಿಲ್ಲ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸೇರಿದಂತೆ ಮೈತ್ರಿಕೂಟದ ಉನ್ನತ ನಾಯಕರು ನಿರ್ಧರಿಸಿದ ಹಿನ್ನೆಲೆಯಲ್ಲಿ ಡಿ.6ರಂದು ನಿಗದಿಯಾಗಿದ್ದ ಸಭೆಯನ್ನು ಡಿ. 17 ಕ್ಕೆ ಮುಂದೂಡಲಾಗಿತ್ತು.

ಮಧ್ಯಪ್ರದೇಶ, ಛತ್ತೀಸ್‌ಗಢ, ತೆಲಂಗಾಣ ಮತ್ತು ರಾಜಸ್ಥಾನಗಳ ಚುನಾವಣಾ ಫಲಿತಾಂಶ ಪ್ರಕಟವಾದ ದಿನವೇ ಡಿಸೆಂಬರ್ 6 ರಂದು ಕಾಂಗ್ರೆಸ್ ಸಭೆಯನ್ನು (Comgress Meeting) ಕರೆದಿತ್ತು . ಆದರೆ ಮೂರು ರಾಜ್ಯಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸುತ್ತಿದ್ದಂತೆಯೇ ಪ್ರತಿಪಕ್ಷಗಳ ಸಭೆಯನ್ನು ಘೋಷಿಸಲಾಯಿತು. ಇದನ್ನೂ ಓದಿ: ಸೋದರಳಿಯನನ್ನು ರಾಜಕೀಯ ಉತ್ತರಾಧಿಕಾರಿಯಾಗಿ ಘೋಷಿಸಿದ ಮಾಯಾವತಿ

27 ಮೈತ್ರಿ ಪಕ್ಷಗಳ ಕೊನೆಯ ಸಭೆಯು ಮುಂಬೈನಲ್ಲಿ ನಡೆಯಿತು. ಶಿವಸೇನಾ (ಯುಬಿಟಿ) ಅಧ್ಯಕ್ಷ ಉದ್ಧವ್ ಠಾಕ್ರೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಐದು ರಾಜ್ಯಗಳ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಇದನ್ನು ಆಯೋಜನೆ ಮಾಡಲಾಗಿತ್ತು. ಈ ವೇಳೆ ಪ್ರಮುಖ ಚುನಾವಣಾ ವಿಷಯಗಳ ಚರ್ಚೆಯ ಜೊತೆಗೆ ಸಮನ್ವಯ ಸಮಿತಿಯನ್ನು ರಚಿಸಿತು. ಅಲ್ಲದೇ 2024 ರ ಭಾರತೀಯ ಸಾರ್ವತ್ರಿಕ ಚುನಾವಣೆಗಳನ್ನು ಸಾಧ್ಯವಾದಷ್ಟು ಒಟ್ಟಾಗಿ ಎದುರಿಸಲು ಮೂರು ಅಂಶಗಳ ನಿರ್ಣಯವನ್ನು ಅಂಗೀಕರಿಸಿತು.

ಬೆಂಗಳೂರಿನಲ್ಲಿ ನಡೆದ ಎರಡನೇ ಸಭೆಯಲ್ಲಿ ಮೈತ್ರಿಕೂಟದ ಹೆಸರು ಇಂಡಿಯನ್ ನ್ಯಾಷನಲ್ ಡೆವಲಪ್‌ಮೆಂಟ್ ಇನ್‌ಕ್ಲೂಸಿವ್ ಅಲೈಯನ್ಸ್ (ಇಂಡಿಯಾ) ಅನ್ನು ಘೋಷಿಸಲಾಯಿತು. ಮೊದಲ ಸಭೆಯನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪಾಟ್ನಾದಲ್ಲಿ ಆಯೋಜಿಸಿದ್ದರು . ಈ ವೇಳೆ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಒಟ್ಟಾಗಿ ಹೋರಾಡಲು ಪಕ್ಷಗಳು ನಿರ್ಧರಿಸಿದವು.