ಈ ಬಾರಿ ಉಡುಪಿ – ಮಂಗಳೂರಲ್ಲಿ ಬಿಜೆಪಿ ಒಂದೂ ಸೀಟ್ ಗೆಲ್ಲಲ್ಲ: ಸಿಎಂ

ಮಂಗಳೂರು: ಈ ಬಾರಿ ಉಡುಪಿ, ಮಂಗಳೂರಲ್ಲಿ ಬಿಜೆಪಿಗೆ ಒಂದೂ ಸೀಟು ಬರುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕರಾವಳಿ ಬಿಜೆಪಿಯ ಕೋಮುವಾದವನ್ನು ಮೆಟ್ಟಿ ನಿಂತಿದ್ದು ಇಲ್ಲಿಯ ಜನ ಮತ್ತೊಮ್ಮೆ ನಮ್ಮ ಕೈ ಹಿಡಿಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ನಾಯಕರಿಗೆ ಮೂರು ಕಾಸಿನ ಮಾನ ಮರ್ಯಾದೆ ಇಲ್ಲ. ಚುನಾವಣೆ ಘೋಷಣೆಯಾದ ಕೂಡಲೇ 2008 ರ ಲೂಟಿ ಕೋರರು ಮತ್ತೆ ಒಂದಾಗಿದ್ದಾರೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಮತ್ತು ಟೀಂ ವಿರುದ್ಧ ಸಿಎಂ ಆಕ್ರೋಷ ವ್ಯಕ್ತಪಡಿಸಿದರು.

ಜನಾರ್ದನ ರೆಡ್ಡಿ, ಸೋಮಶೇಖರ್ ರೆಡ್ಡಿ, ಕರುಣಾಕರ್ ರೆಡ್ಡಿ, ಶ್ರೀರಾಮುಲು, ಬಿಎಸ್‍ವೈ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮತ್ತು ಶೋಭಾ ಕರಂದ್ಲಾಜೆ ದೊಡ್ಡ ಲೂಟಿಕೋರರು. 5 ವರ್ಷದಲ್ಲಿ 1 ಲಕ್ಷ ಕೋಟಿ ಲೂಟಿಯಾಗಿದೆ ಎಂದು ಸಿಎಂ ಗಂಭೀರ ಆರೋಪ ಮಾಡಿದರು.

ಬಳ್ಳಾರಿಯ ಭಯದ ವಾತಾವರಣ ಮತ್ತೆ ಈಗ ಒಂದಾಗಿದೆ. ರಿಪಬ್ಲಿಕ್ ಆಫ್ ಬಳ್ಳಾರಿ ಅಂತ ಲೋಕಾಯುಕ್ತ ಸಂತೋಷ್ ಹೆಗ್ಡೆ ಕರೆದಿದ್ದರು. ನಾನು ಒಬ್ಬಂಟಿಯಾಗಿ ರೆಡ್ಡಿಯ ರಿಪಬ್ಲಿಕ್ ಆಫ್ ಬಳ್ಳಾರಿಗೆ ಹೋಗಿದ್ದೇನೆ. ರೆಡ್ಡಿ ಬ್ರದರ್ಸ್ ದು ಗೂಂಡಾ ಗ್ಯಾಂಗ್, ಆಗ ಜೈಲಿಗೆ ಹೋದವರೆಲ್ಲಾ ಈಗ ಬೇಲ್ ಹಿಡಿದುಕೊಂಡು ತಿರುಗಾಡುತ್ತಿದ್ದಾರೆ ಎಂದು ಸಿಎಂ ಟಾಂಗ್ ಕೊಟ್ಟರು.

Comments

Leave a Reply

Your email address will not be published. Required fields are marked *