ಯುವತಿಯನ್ನು ಚುಡಾಯಿಸಿದ್ದಕ್ಕೆ ಬುದ್ದಿ ಹೇಳಿದವನನ್ನೆ ಕೊಂದ ಪಾಪಿ

ಚಿಕ್ಕೋಡಿ: ಯುವತಿಗೆ ವಿನಾಕಾರಣ ಚುಡಾಯಿಸುತ್ತಿದ್ದ ಯುವಕನಿಗೆ ಬುದ್ದಿ ಹೇಳಲು ಹೋಗಿ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಶಿರಗಾಂವ ಗ್ರಾಮದಲ್ಲಿ ನಡೆದಿದೆ.

ಶಿರಗಾಂವ ಗ್ರಾಮದ ಭೀಮಪ್ಪ ಮಹಾದೇವ ಮಗುದುಮ್ಮ, ಇದೇ ಗ್ರಾಮದ ಸಂತೋಷ್ ಅಪ್ಪಾಸಾಹೇಬ್ ತೇಲಿ(42) ಅವರನ್ನು ಬುದ್ದಿ ಹೇಳಿದಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.

ನಡೆದಿದ್ದೇನು?
ಶಿರಗಾಂವ ಗ್ರಾಮದ ಯುವತಿಗೆ ಶಂಕಿತ ಆರೋಪಿ ಭಿಮಪ್ಪಾ ಮಹಾದೇವ ಮಗದುಮ್ಮ ಕಳೆದ ಹಲವಾರು ದಿನಗಳಿಂದ ಚುಡಾಯಿಸುತ್ತಿದ್ದ ಎಂಬ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಯುವತಿಯ ಪೋಷಕರು ಭೀಮಪ್ಪನಿಗೆ ಗ್ರಾಮದಲ್ಲಿ ಹಿರಿಯರ ಸಮ್ಮುಖದಲ್ಲಿ ತಾಕೀತು ಮಾಡಿದ್ದರು. ಇದರಲ್ಲಿ ಸಂತೋಷ್ ಅಪ್ಪಾಸಾಹೇಬ್ ತೇಲಿ(42) ಭೀಮಪ್ಪನಿಗೆ, ನೀನು ಮಾಡುತ್ತಿರುವುದು ಸರಿ ಅಲ್ಲ ಎಂದು ತಿಳುವಳಿಕೆಯನ್ನು ಹೇಳಿದ್ದಾನೆ. ಇದನ್ನೂ ಓದಿ: ಪಾಕ್ ಹೊಗಳುವ ಹಾಡು ಹಾಕಿದ ಇಬ್ಬರ ವಿರುದ್ಧ ಕೇಸ್

3 ತಿಂಗಳು ಗ್ರಾಮ ಬಿಟ್ಟು ಹೋಗಿದ್ದ
ಈ ಪರಿಣಾಮ ಭೀಮಪ್ಪ ಹಾಗೂ ಸಂತೋಷ್ ಮಧ್ಯೆ ಸಣ್ಣ ಪ್ರಮಾಣದಲ್ಲಿ ಜಗಳವಾಗಿತ್ತು. ಇದಾದ ನಂತರ ಮೂರು ತಿಂಗಳು ಕಾಲ ಭೀಮಪ್ಪ ಶಿರಗಾಂವ ಗ್ರಾಮವನ್ನು ಬಿಟ್ಟು ಹೋಗಿದ್ದನು. ಕಳೆದ ಕೆಲ ದಿನಗಳ ಹಿಂದೆ ಮತ್ತೆ ಶಿರಗಾಂವ ಗ್ರಾಮಕ್ಕೆ ವಾಪಸ್ಸು ಆಗಿದ್ದನು. ಈ ವೇಳೆ ತಿಳುವಳಿಕೆ ನೀಡಿದ್ದ ಸಂತೋಷ್ ಜೊತೆಗೆ ಮತ್ತೆ ಭೀಮಪ್ಪ ಸ್ನೇಹ ಬೆಳೆಸಿಕೊಂಡಿದ್ದಾನೆ.

ಬುಧವಾರ ರಾತ್ರಿ 9 ಗಂಟೆಯ ಸಮಯದಲ್ಲಿ ಸಂತೋಷ್ ಹಾಗೂ ಭೀಮಪ್ಪ ಶಿರಗಾಂವ ಗ್ರಾಮದ ವೈನ್ ಶಾಪ್ ಹತ್ತಿರ ಹೋಗಿದ್ದಾರೆ. ಇದೇ ಸಂದರ್ಭದಲ್ಲಿ ಮದ್ಯದ ಆಮಲಿನಲ್ಲಿದ್ದ ಭೀಮಪ್ಪ ತನ್ನಲ್ಲಿದ್ದ ಹರಿತವಾದ ಚಾಕುವಿನಿಂದ ಜೊತೆಯಲ್ಲಿದ್ದ ಸಂತೋಷ್‍ನಿಗೆ ಇರಿದಿದ್ದಾನೆ. ಇದನ್ನೂ ಓದಿ: ಬೈಕ್‍ಗೆ ಲಾರಿ ಡಿಕ್ಕಿ – ಫಾರ್ಮಾ ಕಂಪನಿ ನೌಕರ ಸಾವು

ಇದರಿಂದ ತೀವ್ರ ರಕ್ತಸಾವ್ರದಿಂದ ಬಳಲುತ್ತಿದ್ದ ಸಂತೋಷ್ ಸ್ಥಳದಲ್ಲೇ ಮೃತ ಪಟ್ಟಿದ್ದಾನೆ. ನಂತರ ಆರೋಪಿ ಭೀಮಪ್ಪನೂ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಖಡಕಲಾಟ ಪೊಲೀಸ್ ಠಾಣೆಯ ಪಿಎಸ್‍ಐ ಲಕ್ಷ್ಮಣಪ್ಪ ಆರಿ ಭೇಟಿ ನೀಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ.

Comments

Leave a Reply

Your email address will not be published. Required fields are marked *