ಕಾಂಗ್ರೆಸ್‍ನಿಂದ ಕರ್ನಾಟಕ ವಿಧಾನಸಭಾ ಚುನಾವಣೆ ಬಹಿಷ್ಕಾರ?

ನವದೆಹಲಿ: ಗುಜರಾತ್ ಬೆನ್ನಲ್ಲೇ ಕರ್ನಾಟಕದಲ್ಲಿ ಇನ್ನೈದು ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈ ಚುನಾವಣೆಯನ್ನು ಬಹಿಷ್ಕರಿಸಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಇವಿಎಂ ಬಳಕೆ ಮಾಡಿದರೆ ಚುನಾವಣೆ ಬಹಿಷ್ಕಾರಕ್ಕೆ ಚಿಂತನೆ ನಡೆಸಿದ್ದು ಮತ್ತೆ ಬ್ಯಾಲೆಟ್ ಪೇಪರ್ ಚುನಾವಣೆಗೆ ಕಾಂಗ್ರೆಸ್ ಪಟ್ಟು ಹಿಡಿದಿದೆ. ಸೋಮವಾರದ ದೆಹಲಿ ಭೇಟಿ ವೇಳೆ ಸಿದ್ದರಾಮಯ್ಯ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಈ ವಿಚಾರವನ್ನು ಮನವರಿಕೆ ಮಾಡಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ಸಿಕ್ಕಿದೆ.

ಇವಿಎಂ ಬಳಕೆ ಕರ್ನಾಟಕದಿಂದಲೇ ರದ್ದಾಗಬೇಕು. ಬ್ಯಾಲೆಟ್ ಪೇಪರ್ ಬಳಕೆ ಮಾಡದೇ ಇದ್ದಲ್ಲಿ ಚುನಾವಣೆಯನ್ನು ಬಹಿಷ್ಕರಿಸಲು ರಾಷ್ಟ್ರಮಟ್ಟದ ವಿಪಕ್ಷಗಳು ಚರ್ಚೆ ನಡೆಸಿವೆ ಅಂತ ತಿಳಿದುಬಂದಿದೆ.

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಇವಿಎಂಗಳ ದುರ್ಬಳಕೆಯಾಗಿದೆ. ಯಾರೇ ವೋಟ್ ಮಾಡಿದ್ರು ಅದು ಬಿಜೆಪಿಗೆ ಹೋಗ್ತಿದೆ ಅಂತ ಬಿಎಸ್‍ಪಿ ಅಧಿನಾಯಕಿ ಮಾಯಾವತಿ ಗಂಭೀರ ಆರೋಪ ಮಾಡಿದ್ದರು. ( ಇದನ್ನೂ ಓದಿ: ಚುನಾವಣೆ ಸಮಯದಲ್ಲಿ ರಾಜ್ಯಕ್ಕೆ ಅಮಿತ್ ಶಾ ಆಗಮನಕ್ಕೆ ನಿಷೇಧ? )

ಬಳಿಕ ಎಎಪಿ, ಎಡಪಕ್ಷಗಳೂ ದನಿಗೂಡಿಸಿದ್ದವು. ಅದರಲ್ಲೂ ಆಪ್ ಅಂತು ಚುನಾವಣಾ ಆಯೋಗಕ್ಕೆ ಸವಾಲು ಎಸೆದಿತ್ತು. ಅಷ್ಟೇ ಅಲ್ಲದೆ ವಿಶೇಷ ಅಧಿವೇಶನ ನಡೆಸಿ ಡಮ್ಮಿ ಇವಿಎಂ ಬಳಸಿ ಹೇಗೆಲ್ಲಾ ದುರ್ಬಳಕೆ ಮಾಡಬಹುದು ಅನ್ನೋದರ ಡೆಮೋ ತೋರಿಸಿತ್ತು. ಈ ವಿವಾದ ವ್ಯಾಪಕ ಚರ್ಚೆಯಾದ ಬೆನ್ನಲ್ಲಿ ಕೇಂದ್ರ ಚುನಾವಣಾ ಆಯೋಗವೇ ರಾಜಕೀಯ ಪಕ್ಷಗಳಿಗೆ ಪಂಥಾಹ್ವಾನ ನೀಡಿ, ಪರೀಕ್ಷೆ ನಡೆಸಿತ್ತು. ಆದ್ರೆ, ಉತ್ತರ ಪ್ರದೇಶ ಚುನಾವಣೆಗೆ ಬಳಸಿ ಇವಿಎಂ ಕೊಡದಿದ್ದ ಕಾರಣ ಆಪ್ ದೂರ ಉಳಿದಿತ್ತು.

ನಂತರ ತಣ್ಣಗಾಗಿದ್ದ ಇವಿಎಂ ದುರ್ಬಳಕೆ ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಫಲಿತಾಂಶದ ಬಳಿಕ ಮತ್ತೆ ಸುದ್ದಿಗೆ ಬಂದಿದೆ. ಇವಿಎಂ ಬಳಕೆ ಮಾಡಿದ ಹಿನ್ನೆಲೆಯಲ್ಲಿ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದೆ. ಇವಿಎಂ ಬಳಕೆ ಮಾಡದೆ ನಡೆದ ಚುನಾವಣೆಯಲ್ಲಿ ಬೇರೆ ಪಕ್ಷದವರು ಮತ್ತು ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಈ ವಿಚಾರವನ್ನು ಮುಂದಿಟ್ಟುಕೊಂಡು ಈಗ ಮತ್ತೊಮ್ಮೆ ಮಾಯಾವತಿ, ಅಖಿಲೇಶ್, ಮಮತಾ ಬ್ಯಾನರ್ಜಿ, ಅರವಿಂದ್ ಕೇಜ್ರಿವಾಲ್, ಲಾಲೂ ಪ್ರಸಾದ್ ಹಾಗೂ ಸೀತಾರಾಂ ಯಚೂರಿ ಸೇರಿದಂತೆ ವಿಪಕ್ಷ ನಾಯಕರು ದನಿಯೇರಿಸಿದ್ದಾರೆ. ಈ ಸಂಬಂಧ, ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಲು ಸಜ್ಜಾಗಿದ್ದಾರೆ ಅಂತ ತಿಳಿದು ಬಂದಿದೆ.

Comments

Leave a Reply

Your email address will not be published. Required fields are marked *