ತ್ರಿವಳಿ ತಲಾಖ್ ನಿಷೇಧ – ಸುಪ್ರೀಂನಿಂದ ಮಹತ್ವದ ತೀರ್ಪು

ನವದೆಹಲಿ: ದೇಶದಾದ್ಯಂತ ಬಹು ಚರ್ಚೆಗೆ ಗ್ರಾಸವಾಗಿದ್ದ ತ್ರಿವಳಿ ತಲಾಖ್ ಸಂಬಂಧಿಸಿದ ತೀರ್ಪು ಸುಪ್ರೀಂ ಕೋರ್ಟ್ ನಿಂದ ಹೊರಬಿದ್ದಿದ್ದು ತ್ರಿವಳಿ ತಲಾಖ್ ನಿಷೇಧಿಸಲಾಗಿದೆ. ಈ ಮೂಲಕ ಮುಸ್ಲಿಂ ಮಹಿಳೆಯರ ಸ್ವಾತಂತ್ರ್ಯವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.

ಐವರು ನ್ಯಾಯಾಧೀಶರ ಪಂಚ ಸದಸ್ಯ ಪೀಠ ಈ ತೀರ್ಪು ನೀಡಿದೆ. ತ್ರಿವಳಿ ತಲಾಖ್ ರದ್ದು ಮಾಡಬೇಕು ಎಂದು ಮೂವರು ನ್ಯಾಯಾಧೀಶರು ತೀರ್ಪು ನೀಡಿದ್ದರೆ, ಮುಖ್ಯ ನ್ಯಾಯಾಧೀಶರಾದ ಜೆಎಸ್ ಖೆಹರ್ ಹಾಗೂ ಕರ್ನಾಟಕ ಮೂಲದ ನ್ಯಾ. ಅಬ್ದುಲ್ ನಜೀರ್ ತ್ರಿವಳಿ ತಲಾಖ್ ಪರವಾಗಿ ತೀರ್ಪು ಬರೆದಿದ್ದಾರೆ. ಬಹುಮತದ ಲೆಕ್ಕಾಚಾರದಲ್ಲಿ ಐವರಲ್ಲಿ ಮೂವರು ತ್ರಿವಳಿ ತಲಾಖ್ ನಿಷೇಧವಾಗ್ಬೇಕು ಎಂದಿರುವ ಕಾರಣ ದೇಶದಲ್ಲಿ ತ್ರಿವಳಿ ತಲಾಖ್ ನಿಷೇಧವಾಗಿದೆ.

ತ್ರಿವಳಿ ತಲಾಖ್ ಪರವಾಗಿ ತೀರ್ಪು ನೀಡಿದ್ದ ಮುಖ್ಯ ನ್ಯಾಯಾಧೀಶರಾದ ಜೆಎಸ್ ಖೇಹರ್, ಇದಕ್ಕೆ ಸಂವಿಧಾನಿಕ ಕಾನೂನು ರೂಪಿಸಲು ಅವಕಾಶ ಕೊಟ್ಟು, 6 ತಿಂಗಳವರೆಗೆ ತಡೆ ನೀಡಿದ್ದರು. ತ್ರಿವಳಿ ತಲಾಖ್ ಸಂವಿಧಾನದ ಆರ್ಟಿಕಲ್ 14,15,21 ಹಾಗೂ 25ರ ಉಲ್ಲಂಘನೆಯಲ್ಲ ಎಂದು ಅವರು ಹೇಳಿದ್ದು, ಮುಂದಿನ 6 ತಿಂಗಳ ಒಳಗೆ ಸಂವಿಧಾನ ಈ ಬಗ್ಗೆ ಕಾನೂನು ರೂಪಿಸಬೇಕು ಎಂದಿದ್ದರು. ಆದ್ರೆ ಉಳಿದ ಮೂವರು ನ್ಯಾಯಾಧೀಶರಾದ ಕುರಿಯನ್ ಜೋಸೆಫ್, ಯುಯು ಲಲಿತ್ ಹಾಗೂ ಆರ್.ಎಫ್ ನಾರಿಮನ್ ತ್ರಿವಳಿ ತಲಾಖ್ ವಿರುದ್ಧವಾಗಿ ತೀರ್ಪು ನೀಡಿದ್ದಾರೆ. ಮುಸ್ಲಿಂ ಮಹಿಳೆಯರ ಹಿತಾಸಕ್ತಿ ಹಾಗೂ ಸ್ವಾತಂತ್ರ್ಯ ಎತ್ತಿ ಹಿಡಿಯುವ ನಿಟ್ಟಿನಲ್ಲಿ ತ್ರಿವಳಿ ತಲಾಖ್ ನಿಷೇಧಿಸಿದ್ದಾರೆ.

ತ್ರಿವಳಿ ತಲಾಖ್ ಸಂವಿಧಾನ ಬಾಹಿರ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿತ್ತು. ಮುಸ್ಲಿಂ ಮಹಿಳೆಯರ ಹಕ್ಕು ಉಲ್ಲಂಘನೆ ಎಂದು ಕೋರ್ಟ್ ಹೇಳಿತ್ತು. ಆದ್ರೆ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ತ್ರಿವಳಿ ತಲಾಖ್ ಬೇಕು ಎಂದಿತ್ತು. ಉತ್ತರಾಖಂಡ್ ಮೂಲದ ಶಾಹಿರಾ ಭಾನು ಅನ್ನೋ ಮಹಿಳೆ 2015ರಲ್ಲಿ ತಲಾಖ್ ವಿರುದ್ಧ ಮೊದಲ ಬಾರಿಗೆ ಕೋರ್ಟ್ ಮೆಟ್ಟಿಲೇರಿದ್ರು. ಶಾಹಿರಾ ಬೆನ್ನಲ್ಲೇ ಸುಪ್ರೀಂಕೋರ್ಟ್ ಗೆ ಹಲವು ಮಹಿಳೆಯರು ತಲಾಖ್ ವಿರೋಧಿಸಿ ಅರ್ಜಿ ಹಾಕಿದ್ರು. ಆಗ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಅಭಿಪ್ರಾಯ ತಿಳಿಸುವಂತೆ ಸೂಚಿಸಿತ್ತು. ಆಗ ಮೋದಿ ಸರ್ಕಾರ ತ್ರಿವಳಿ ತಲಾಖ್ ಕೊನೆಯಾಗ್ಬೇಕು ಎಂದು ಅರ್ಜಿ ಹಾಕಿತ್ತು. ಕೊನೆಗೆ ಬರೋಬ್ಬರಿ 6 ದಿನಗಳ ಕಾಲ ನಿರಂತರವಾಗಿ ಸುಪ್ರೀಂ ಕೋರ್ಟ್ ವಾದ ಪ್ರತಿವಾದವನ್ನ ಆಲಿಸಿ ತೀರ್ಪನ್ನ ಕಾಯ್ದಿರಿಸಿತ್ತು. ಇವತ್ತು ಆ ತೀರ್ಪು ಪ್ರಕಟವಾಗಿದೆ.

ಪಂಚ ಪೀಠ ನ್ಯಾಯಾಧೀಶರು
> ಜಸ್ಟೀಸ್ ಜೆ.ಎಸ್ ಖೆಹರ್ [ಸಿಖ್]
> ಜಸ್ಟೀಸ್ ಯು.ಯು.ಲಲಿತ್ [ ಹಿಂದೂ ]
> ಜಸ್ಟೀಸ್ ಅಬ್ದುಲ್ ನಜೀರ್ [ ಮುಸ್ಲಿಂ ]
> ಜಸ್ಟೀಸ್ ಕುರಿಯನ್ ಜೋಸೆಫ್ [ ಕ್ರೈಸ್ತ]
> ಜಸ್ಟೀಸ್ ಆರ್.ಎಫ್ ನಾರಿಮನ್ [ ಪಾರ್ಸಿ]

ಕೇಂದ್ರದ ವಾದ ಏನು?
> ದೇಶದಲ್ಲಿ ಎಲ್ಲಾ ಧರ್ಮದ ಜನರಿಗೂ ಒಂದೇ ನ್ಯಾಯ, ಸಮಾನತೆಯ ಸಂವಿಧಾನ ಇರಬೇಕು
> ತಲಾಖ್ ಹೆಸರಲ್ಲಿ ಮುಸ್ಲಿಂ ಮಹಿಳೆಯರ ಹಕ್ಕು-ಬಾಧ್ಯತೆ ಕಿತ್ತುಕೊಳ್ಳವ ಅಧಿಕಾರ ಯಾರಿಗೂ ಇಲ್ಲ
> ಸಂವಿಧಾನದ ಪರಿಚ್ಛೇದ 25ರಂತೆ ಧರ್ಮದ ಹೆಸರಲ್ಲಿ ವ್ಯಕ್ತಿಯ ಸ್ವಾತಂತ್ರ್ಯಹರಣ ಆಗಬಾರದು
> ಲಿಂಗ ಸಮಾನತೆ, ಮಹಿಳಾ ಘನತೆ, ಗೌರವದ ವಿಚಾರದಲ್ಲಿ ರಾಜಿ ಮಾಡಿಕೊಳ್ಳಬಾರದು
> ದೇಶದಲ್ಲಿ ಮುಸ್ಲಿಂ ಮಹಿಳೆಯರು ಸಾಮಾಜಿಕ ಸ್ಥಾನಮಾನ ಪಡೆಯುವಲ್ಲಿ ವಿಫಲ
> ಕೇವಲ ತಲಾಖ್ ಮೂಲಕ ವಿಚ್ಛೇದನ ಪಡೆದು ಬಹುಪತ್ನಿತ್ವ ನಡೆಸುವುದು ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ ತರುತ್ತದೆ
> ಕಾನೂನು ವ್ಯಾಪ್ತಿಯಲ್ಲಿ ವಿಚ್ಛೇದನ ಸಿಗುವುದೇ ಸಾಮಾಜಿಕ ನ್ಯಾಯ.. ಸಂವಿಧಾನದ ಘನತೆ ಹೆಚ್ಚಿಸುವ ಅಂಶ
> ಇದು ಪುರುಷ ಸಮಾಜವಲ್ಲ.. ಮಹಿಳಾ ಪ್ರಧಾನ ಸಮಾಜವೂ ಅಲ್ಲ.. ಎಲ್ಲರೂ ಒಂದೇ

ಮುಸ್ಲಿಂ ಸಂಘಟನೆ ವಾದವೇನು?
> ಸಾಮಾಜಿಕ ಸುಧಾರಣೆ ಹೆಸರಲ್ಲಿ ವೈಯಕ್ತಿಕ ಕಾನೂನಿನ ಹಸ್ತಕ್ಷೇಪ ಆಗಬಾರದು.
> ಏಕರೂಪ ನಾಗರೀಕ ಸಂಹಿತೆ ಎನ್ನುವುದು ಸರ್ವಧರ್ಮ ರಾಷ್ಟ್ರ ಒಪ್ಪುವಂಥದ್ದಲ್ಲ.
> ಇಸ್ಲಾಂನ ಹನಫಿ, ಶಾಫಿ ಮಾಲಿಕಿ, ಹನ್ಬಲಿ ಪಂಗಡಗಳು ತ್ರಿವಳಿ ತಲಾಖ್ ಒಪ್ಪಿಕೊಂಡಿವೆ.
> ಕೆಲವರಿಗೆ ಪಾಪ ಅನಿಸಿರಬಹುದು, ಆದ್ರೆ ಇದು ಪರಿಣಾಮಕಾರಿ ವಿಚ್ಛೇದನ ರೂಪ.
> ಇಸ್ಲಾಂ ನ್ಯಾಯಶಾಸ್ತ್ರದಲ್ಲಿ ಅನಿಯಮಿತ, ಅಸಮರ್ಪಕ ನಿರ್ಧಾರ ಕಾನೂನಿನ ಮೇಲೆ ಪರಿಣಾಮ ಬೀರಲ್ಲ.
> ಬೇರೆ ಕಾನೂನಿನಂತೆ ಶರಿಯತ್ ಕಾನೂನಿನಲ್ಲಿ ವಿಚ್ಛೇದನ ಪ್ರಕರಣ ಹೆಚ್ಚು ಕಾಲ ಎಳೆದಾಡುವುದಿಲ್ಲ.

Comments

Leave a Reply

Your email address will not be published. Required fields are marked *