ಕ್ಷಣಾರ್ಧದಲ್ಲಿ ಗಲ್ಲಾ ಪೆಟ್ಟಿಗೆಯಿಂದ ಹಣ ಕದ್ದ ಕಳ್ಳ

ಹಾಸನ: ಹಳ್ಳಿ ಜನ ಒಳ್ಳೆ ಜನ ಎನ್ನುವ ಮಾತಿದೆ. ಆದರೆ ಹಾಸನದಲ್ಲಿ ಅದೇ ಹಳ್ಳಿ ವ್ಯಕ್ತಿಯೊಬ್ಬ ಟೆಲಿಕಾಂ ಅಂಗಡಿಯೊಂದರಲ್ಲಿ ಹಣ ಇದ್ದ ಡ್ರಾಯರ್ ಗೆ ಹಾಡುಹಗಲೇ ಕೈ ಹಾಕಿ 15 ರಿಂದ 18 ಸಾವಿರ ನಗದು ಎಗರಿಸಿ ಪರಾರಿಯಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಹಾಸನದ ಕಟ್ಟಿನಕೆರೆ ಮಾರುಕಟ್ಟೆಯಲ್ಲಿರುವ ಲಕ್ಷ್ಮಿ ಟೆಲಿಕಾಂ ಎನ್ನುವ ಅಂಗಡಿಗೆ ಬರುವ ಮಧ್ಯಮ ವಯಸ್ಸಿನ ವ್ಯಕ್ತಿಯೊಬ್ಬ ವಸ್ತು ಖರೀದಿ ಮಾಡುವ ನೆಪದಲ್ಲಿ ಹೊಂಚು ಹಾಕುತ್ತಾನೆ. ಅದೇ ವೇಳೆಗೆ ಅಂಗಡಿ ಮಾಲೀಕ ಸತೀಶ್ ಎಂಬುವರು ಮೂತ್ರ ವಿಸರ್ಜನೆ ನಿಮಿತ್ತ ಕೇವಲ 5 ನಿಮಿಷ ಹೊರಗೆ ಹೋಗಿ ಬರುವಷ್ಟರಲ್ಲಿ ಗಲ್ಲದಲ್ಲಿದ್ದ 18 ಸಾವಿರ ಹಣವನ್ನು ಎಗರಿಸಿ ಪಂಚೆಯೊಳಗಿನ ಕಿಸೆಯಲ್ಲಿ ಬಿಟ್ಟುಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಇದಕ್ಕೂ ಮುನ್ನ ಏಳೆಂಟು ದಿನ ಟೆಲಿಕಾಂ ಮತ್ತು ಅದರ ಪಕ್ಕದಲ್ಲಿರುವ ಕೀಟನಾಶಕ ಅಂಗಡಿ ಎದುರು ಬಂದು ಕಾಯುವ ಕಳ್ಳ, ಕೊನೆಗೆ ಹಣ ದೋಚಿ ಪರಾರಿಯಾಗಿದ್ದಾನೆ. ಈ ಸಂಬಂಧ ಪೊಲೀಸರಿಗೆ ದೂರು ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಂಗಡಿ ಮಾಲೀಕ ಸತೀಶ್ ಅಳಲು ತೋಡಿಕೊಂಡಿದ್ದಾರೆ.

https://youtu.be/fLU64WXjsSA

Comments

Leave a Reply

Your email address will not be published. Required fields are marked *