‘ಮನೆಯೇ’ ಮಂತ್ರಾಲಯದಿಂದ ಪ್ರಭಾವಿತರಾದ ಯುವ ಉದ್ಯಮಿ- ಬಡವರ ಸಂಕಷ್ಟಕ್ಕೆ ಸಹಾಯಹಸ್ತ

– ಅಮ್ಮನ ನೆನಪಿಗಾಗಿ ಕ್ಯಾಂಟೀನ್ ಆರಂಭ

ಯಾದಗಿರಿ: ಹಣ ಇದ್ದವರು ಬಡವರ ಕಷ್ಟಕ್ಕೆ ಮರುಗುವುದಿಲ್ಲ ಎಂಬ ಮಾತಿದೆ. ಆದರೆ ಈ ಮಾತನ್ನು ಯಾದಗಿರಿ ಜಿಲ್ಲೆಯ ಶಹಪುರದ ಯುವ ಉದ್ಯಮಿ ಗುರು ಮಣಿಮಠ ಹುಸಿಯಾಗಿಸಿದ್ದಾರೆ.

ಶಹಪುರ ಪಟ್ಟಣದಲ್ಲಿ ಯಾರಿಗಾದರೂ ಕಷ್ಟ ಎಂದು ಬಂದಾಗ ಅವರಿಗೆ ಗುರು ಸಹಾಯ ಹಸ್ತ ಚಾಚುತ್ತಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಪಬ್ಲಿಕ್ ಟಿವಿಯ ಮನವಿಗೆ ಗುರು ಮಣಿಕಂಠ ಸ್ಪಂದಿಸಿದ ರೀತಿ ಇದೀಗ ಎಲ್ಲರೂ ಮೆಚ್ಚುವಂತದ್ದಾಗಿದೆ.

ಸದ್ಯ ಯಾದಗಿರಿಯಲ್ಲಿ ಲಾಕ್ ಡೌನ್ ಸಂಪೂರ್ಣ ಸಡಿಲಿಕೆಯಾಗಿದೆ. ಹೀಗಿದ್ದರೂ ಕೆಲ ಕುಟುಂಬಗಳು ಇನ್ನೂ ಸಂಕಷ್ಟದಿಂದ ಹೊರ ಬಂದಿಲ್ಲ. ಒಂದು ಹೊತ್ತು ಊಟಕ್ಕೂ ದಿನಸಿಗಳಿಲ್ಲದೆ ಪರದಾಡುತ್ತಿವೆ. ಇಂತಹ ಕುಟುಂಬಗಳು ಪಬ್ಲಿಕ್ ಟಿವಿಗೆ ನೆರವು ಕೋರಿ ದೂರವಾಣಿಗಳ ಮೂಲಕ ಮನವಿ ಮಾಡಿದ್ದವು. ಈ ವಿಷಯ ತಿಳಿದ ಗುರು, ಸಂಕಷ್ಟದಲ್ಲಿರುವ ಕುಟುಂಬಗಳ ಬಳಿಗೆ ತೆರಳಿ ಆ ಕುಟುಂಬಗಳ ನೆರವಿಗೆ ನಿಂತಿದ್ದಾರೆ. 15 ದಿನಕ್ಕೆ ಆಗುವಷ್ಟು ದಿನಸಿಗಳನ್ನು ವಿತರಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಪಬ್ಲಿಕ್ ಟಿವಿಯಲ್ಲಿ ಪ್ರಸಾರವಾಗುವ ‘ಮನೆಯೇ’ ಮಂತ್ರಾಲಯ ಕಾರ್ಯಕ್ರಮದಿಂದ ಪ್ರಭಾವಿತರಾಗಿರುವ ಗುರು ಮಣಿಕಂಠ, ಕೊರೊನಾ ವಿರುದ್ಧ ತಮ್ಮದೇ ರೀತಿಯ ಹೋರಾಟ ನಡೆಸಿದ್ದಾರೆ. ಸದ್ಯ ಸಂಕಷ್ಟದಲ್ಲಿರುವ ರೈತರು ಬೆಳೆದ ತರಕಾರಿ, ಹಣ್ಣು-ಹಂಪಲು ಖರೀದಿಸಿ ಅದನ್ನು ಉಚಿತವಾಗಿ ಬಡವರಿಗೆ ಹಂಚುತ್ತಿದ್ದಾರೆ.

ಮುಂಜಾಗ್ರತಾ ಹಿತದೃಷ್ಟಿಯಿಂದ ಶಹಪುರ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಸ್ಯಾನಿಟೈಸರ್ ಸ್ಪ್ರೇ ಟೆನಲ್ ಹಾಕಿಸಿದ್ದಾರೆ. ಇಷ್ಟು ಮಾತ್ರವಲ್ಲದೆ ಅವರ ತಾಯಿಯ ನೆನಪಿಗಾಗಿ ಅಮ್ಮ ಕ್ಯಾಂಟೀನ್ ಆರಂಭಿಸಿದ ಇವರು, ಬರೀ ಹತ್ತು ರೂಪಾಯಿಯಲ್ಲಿ ಬಡವರ ಮತ್ತು ಶ್ರಮಿಕರ ಹೊಟ್ಟೆ ತುಂಬಿಸುತ್ತಿದ್ದಾರೆ. ಸಂಕಷ್ಟದಲ್ಲಿರುವ ಜನರಿಗಾಗಿ ಪಬ್ಲಿಕ್ ಟಿವಿ ಜೊತೆ ಸದಾ ಕೈ ಜೋಡಿಸುವ ಗುರು ಮಣಿಕಂಠರಿಗೆ ಕಾರ್ಯಕ್ಕೆ ಜಿಲ್ಲೆಯಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

Comments

Leave a Reply

Your email address will not be published. Required fields are marked *