ಐಎಂಎ ದ್ರೋಹಕ್ಕೆ ಮೊದಲ ಬಲಿ – 8 ಲಕ್ಷ ಕಳೆದುಕೊಂಡ ವ್ಯಕ್ತಿಗೆ ಹೃದಯಾಘಾತ

– ಮುಗಿಲು ಮುಟ್ಟಿದ ಕುಟುಂಬದ ಆಕ್ರಂದನ

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಮೊದಲ ಬಲಿಯಾಗಿದೆ. ಐಎಂಎಯಲ್ಲಿ ಹಣ ಹೂಡಿದ್ದ ಅಫ್ಜಲ್ ಪಾಷಾ ವಂಚನೆಗೊಳಗಾದ ಆಘಾತದಿಂದ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ.

ಬೆಂಗಳೂರು ಹಳೇಗುಡ್ಡದಹಳ್ಳಿ ನಿವಾಸಿಯಾದ ಪಾಷಾ, ಹೆಸರುಘಟ್ಟದ ಸಪ್ತಗಿರಿ ಆಸ್ಪತ್ರೆಯಲ್ಲಿ ಗುರುವಾರ ರಾತ್ರಿ ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ.

ಅಪ್ಜಲ್ ಪಾಷಾ ಫುಟ್ ಬಾತ್ ಮೇಲೆ ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದರು. ವ್ಯಾಪಾರದಲ್ಲಿ ಬಂದ ಹಣದಲ್ಲಿ ಕುಟುಂಬ ಸಾಗಿಸುತ್ತಾ ಇದ್ದರು. ನಾಲ್ಕು ಹೆಣ್ಣು ಮಕ್ಕಳ ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದ ಅಪ್ಜಲ್ ಪಾಷಾ, ಮಕ್ಕಳು, ಪತ್ನಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ ಎಂದು ಅವರ ಸಂಬಂಧಿ ಮಹಮ್ಮದ್ ಹನೀಫ್ ಹೇಳಿದ್ದಾರೆ. ಇದನ್ನೂ ಓದಿ: ಐಎಂಎ ಮಾಲೀಕ ಆತ್ಮಹತ್ಯೆ ಮಾಡಿಕೊಂಡಿಲ್ವಂತೆ – ಲಾಭಾಂಶದ ಆಸೆಗೆ ಲಕ್ಷ, ಕೋಟಿ ಕಳೆದುಕೊಂಡ್ರು, ವಂಚನೆ ಹೇಗೆ..?

ನಾಲ್ವರು ಹೆಣ್ಣು ಮಕ್ಕಳಲ್ಲಿ ಇಬ್ಬರಿಗೆ ಮದುವೆ ಮಾಡಿದ್ದಾರೆ. ಮೂರನೇ ಮಗಳ ಮದುವೆಗೆ ಎಂದು 2017ರಲ್ಲಿ ಐಎಂಎ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ್ದರು. ಅಪ್ಜಲ್ ಪಾಷಾ 2 ಲಕ್ಷ ತನ್ನ ಇಬ್ಬರು ಹೆಣ್ಣು ಮಕ್ಕಳ ಕಡೆಯಿಂದ ತಲಾ ಮೂರು ಲಕ್ಷ ಒಟ್ಟು ಎಂಟು ಲಕ್ಷ ಹಣ ಹೂಡಿಕೆ ಮಾಡಿದ್ದರು. ಆಗಸ್ಟ್ 4 ರಂದು ಮೂರನೇ ಮಗಳ ಮದುವೆ ಐಎಂಎ ಕಂಪನಿಗೆ ಕಟ್ಟಿದ್ದ ಹಣ ಆಪ್ಲೇ ಮಾಡಿದ್ದರು. ಕಂಪನಿ ಮಾರ್ಚ್ 30 2019ಕ್ಕೆ ಹಣ ಮರುಪಾವತಿ ಮಾಡುವುದಾಗಿ ಲೆಟರ್ ಕೊಟ್ಟಿದೆ. ಏಳು ಎಂಟು ತಿಂಗಳಾದರೂ ಹಣ ಬಂದಿರಲಿಲ್ಲ. ಕಟ್ಟಿದ ಹಣ ಬಂದೇ ಬರುತ್ತದೆ ಎಂಬ ಆಶಾ ಭಾವನೆಯಲ್ಲಿದ್ದ ಅಪ್ಜಲ್ ಪಾಷಾ ಕಾಲ ದೂಡುತ್ತಿದ್ದರು ಎಂದು ಅವರ ಮತ್ತೊಬ್ಬ ಸಂಬಂಧಿ ಇಮ್ರಾನ್ ತಿಳಿಸಿದ್ದಾರೆ.

ಆದರೆ ಇತ್ತ ನಯವಂಚಕ ಮನ್ಸೂರ್ ಖಾನ್ ನ ಅಸಲಿ ಬಣ್ಣ ಬಯಲಾಗುತ್ತಿದ್ದಂತೆ ಅಪ್ಜಲ್ ಪಾಷಾ ಆತಂಕಗೊಂಡಿದ್ದರು. ಇದೇ ಟೆನ್ಷನ್‍ನಲ್ಲಿ ನಿನ್ನೆ ಪೀಣ್ಯಾದ ಸಂಬಂಧಿಕರ ಮನೆಗೆ ಹೋಗಿದ್ದಾರೆ. ಈ ವೇಳೆ, ವಂಚನೆಯ ಬಗ್ಗೆ ಭಾವುಕರಾಗಿ ಮಾತನಾಡುವಾಗ ಹೃದಯಾಘಾತವಾಗಿದೆ. ತಕ್ಷಣವೇ ಹೆಸರಘಟ್ಟ ರಸ್ತೆಯ ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಲಿದ್ದಾರೆ. ಆದರೂ ರಾತ್ರಿ 9.30ರ ಸುಮಾರಿಗೆ ಅಫ್ಜಲ್ ಸಾವಿಗೀಡಾಗಿದ್ದಾರೆ ಎಂಬುದಾಗಿ ಇಮ್ರಾನ್ ವಿವರಿಸಿದ್ದಾರೆ.

Comments

Leave a Reply

Your email address will not be published. Required fields are marked *