ಯಡಿಯೂರಪ್ಪಗೆ ನಾನು ಪೈಪೋಟಿ ಅಲ್ಲ: ಉಮೇಶ್ ಕತ್ತಿ

ನವದೆಹಲಿ: ಸಿಎಂ ಸ್ಥಾನಕ್ಕೆ ನಾನು ಅರ್ಹ ವ್ಯಕ್ತಿ, ಸಿಎಂ ಆಗಲು ಎಲ್ಲ ಕ್ವಾಲಿಫೈಗಳು ನನ್ನಲ್ಲಿದೆ. ಆದರೆ ನಾನು ಬಿ.ಎಸ್ ಯಡಿಯೂರಪ್ಪ ಅವರಿಗೆ ಪೈಪೋಟಿ ಅಲ್ಲ ಎಂದು ಶಾಸಕ ಉಮೇಶ್ ಕತ್ತಿ ಪ್ರತಿಕ್ರಿಯಿಸಿದ್ದಾರೆ.

ನವದೆಹಲಿಯಲ್ಲಿ ಮಾತನಾಡಿದ ಅವರು, ಗ್ಯಾಸ್ ಕನೆಕ್ಷನ್ ಸಂಬಂಧ ದೆಹಲಿಗೆ ಬಂದಿದ್ದೇನೆ. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಭೇಟಿಯಾಗುತ್ತೇನೆ. ಕ್ಷೇತ್ರದ ಕೆಲವು ಕೆಲಸಗಳ ಬಗ್ಗೆ ಚರ್ಚೆ ಮಾಡಲಿದ್ದೇನೆ ಎಂದರು.

ದೆಹಲಿಯಲ್ಲಿ ಪ್ರಹ್ಲಾದ್ ಜೋಶಿ ಬಿಟ್ಟು ಹೈಕಮಾಂಡ್ ಪೈಕಿ ಯಾರ ಜೊತೆಗೂ ಮಾತನಾಡಲ್ಲ. ನಾನು ಮಂತ್ರಿಗಿರಿ ಕೇಳ್ತಿಲ್ಲ, ಅದು ನನ್ನ ಹಕ್ಕು. ನನಗೆ ಸಚಿವ ಸ್ಥಾನ ನೀಡಿದರೆ ಒಳ್ಳೆಯ ಕೆಲಸ ಮಾಡುವೆ ಎಂದು ಸಿಎಂಗೆ ಗೊತ್ತಿದೆ. ಹೈಕಮಾಂಡ್‍ಗೂ ಮನವಿ ಮಾಡ್ತೇನೆ, ಸಚಿವ ಸ್ಥಾನ ಕೊಡದಿದ್ರೆ ಪಕ್ಷದ ಶಿಸ್ತಿನ ಸಿಪಾಯಿ ಆಗಿ ಕೆಲಸ ಮಾಡುತ್ತೇನೆ ಎಂದರು.

ಸಿಎಂ ಸ್ಥಾನದ ಬಗ್ಗೆ ಮಾತನಾಡಿ, ನಾನು ಸಿಎಂ ಸ್ಥಾನಕ್ಕೆ ಅರ್ಹ ವ್ಯಕ್ತಿ, ಎಲ್ಲ ಕ್ವಾಲಿಫೈ ಇದೆ. 8 ಬಾರಿ ಶಾಸಕನಾಗಿದ್ದೇನೆ, ಮಂತ್ರಿಯಾಗಿ 13 ವರ್ಷ ಕೆಲಸ ಮಾಡಿದ ಅನುಭವ ಇದೆ. ಹಾಗಂತ ಮಾತ್ರಕ್ಕೆ ಯಡಿಯೂರಪ್ಪ ಅವರಿಗೆ ನಾನು ಪೈಪೋಟಿ ಅಲ್ಲ, ಮುಂದಿನ ದಿನಗಳಲ್ಲಿ ನಾನು ಸಿಎಂ ಆಗಬಹುದು ಎಂದರು.

ಡಿಸಿಎಂ ಸಾಂವಿಧಾನಿಕ ಹುದ್ದೆ ಅಲ್ಲ ಅವರನ್ನು ಮುಂದುವರಿಸುವುದು ಬಿಡುವುದು ಹೈಕಮಾಂಡ್‍ಗೆ ಬಿಟ್ಟಿದ್ದು. ನಾನು ಡಿಸಿಎಂ ಹುದ್ದೆಗೆ ಬೇಡಿಕೆ ಇಟ್ಟಿಲ್ಲ. ಅತಿ ಹೆಚ್ಚು ಶಾಸಕರು ಬೆಳಗಾವಿಯಲ್ಲಿದ್ದಾರೆ. ಹೆಚ್ಚು ಸಚಿವ ಸ್ಥಾನ ಕೊಟ್ಟರೇ ತಪ್ಪಿಲ್ಲ ಎಂದು ಬೆಳಗಾವಿಗೆ ಹೆಚ್ಚು ಸಚಿವ ಸ್ಥಾನ ನೀಡುವುದನ್ನು ಸಮರ್ಥಿಸಿಕೊಂಡರು.

Comments

Leave a Reply

Your email address will not be published. Required fields are marked *