ದಂತ ವೈದ್ಯ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ – ಬೆಂಗಳೂರಲ್ಲಿ ಡಾಕ್ಟರ್ ಪ್ರಿಯತಮೆಯೂ ಆತ್ಮಹತ್ಯೆ

– ಡೆತ್‍ನೋಟ್ ಬರೆದಿಟ್ಟು ನೇಣಿಗೆ ಶರಣು
– ಒಂದು ಕೊಲೆ, ಎರಡು ಆತ್ಮಹತ್ಯೆ, ಮೂರು ಮಕ್ಕಳು ಅನಾಥ

ಬೆಂಗಳೂರು: ಚಿಕ್ಕಮಗಳೂರಿನ ದಂತವೈದ್ಯ ಡಾ.ರೇವಂತ್ ಪ್ರೇಯಸಿ ಹರ್ಷಿತಾ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಡಾ.ರೇವಂತ್ ಪತ್ನಿ ಕವಿತಾಳನ್ನು ಕೊಲೆಗೈದು ಕಡೂರಿನ ಮಸಾಲ ಡಾಬಾದ ಸಮೀಪ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದನು. ಪ್ರಿಯಕರ ರೇವಂತ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಬೆಂಗಳೂರಿನಲ್ಲಿದ್ದ ಪ್ರಿಯತಮೆ ಹರ್ಷಿತಾ (32) ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪತಿಯಿಂದ ದೂರವಾಗಿರುವ ಹರ್ಷಿತಾ ಮಗಳ ಜೊತೆ ಬೆಂಗಳೂರಿನ ರಾಜರಾಜೇಶ್ವರಿ ನಗರದ ಜವರೇಗೌಡ ಬಡಾವಣೆಯಲ್ಲಿ ವಾಸವಾಗಿದ್ದಳು. ಫ್ಯಾಶನ್ ಡಿಸೈನರ್ ಆಗಿರುವ ಹರ್ಷಿತಾ ದಂತವೈದ್ಯ ರೇವಂತ್ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಹರ್ಷಿತಾ ಪತಿ ಸುದೀಂದ್ರ ಬಿಎಂಟಿಸಿ ಚಾಲಕರಾಗಿ ಕೆಲಸ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಡೆತ್ ನೋಟ್ ಬರೆದಿಟ್ಟು ಫ್ಯಾನಿಗೆ ನೇಣು ಹಾಕಿಕೊಂಡು ಹರ್ಷಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿರಿಸಲಾಗಿದೆ. ಈ ಸಂಬಂಧ ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಏನಿದು ಪ್ರಕರಣ? ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ ಡಾ.ರೇವಂತ್ ಪರ ಸ್ತ್ರೀ ವ್ಯಾಮೋಹಕ್ಕ ಸಿಲುಕಿ ಪತ್ನಿ ಕವಿತಾಳನ್ನು ಕೊಲೆ ಮಾಡಿದ್ದನು. ಕೊಲೆಯ ಬಳಿಕ ಪೊಲೀಸ್ ತನಿಖೆಗೆ ಹೆದರಿದ ರೇವಂತ್ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದನು. ಪತಿಯ ಅಕ್ರಮ ಸಂಬಂಧದ ವಿಷಯ ತಿಳಿದ ಪತ್ನಿ ಕವಿತಾ ಹಲವು ಬಾರಿ ಬುದ್ಧಿ ಹೇಳಿದ್ದರೂ ಈ ಡಾಕ್ಟರ್ ತನ್ನ ಚಾಳಿ ಬಿಟ್ಟಿರಲಿಲ್ಲ. ಆದರೂ ಹೆಂಡತಿ ಮಾತು ಕೇಳದ ಈತ ಇಟ್ಕೊಂಡವಳ ಮೋಹ ಪಾಶದಲ್ಲಿ ಮುಂದುವರಿದಿದ್ದನು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾಗ ಹೆಂಡತಿಯನ್ನೇ ಕೊಲೆಗೈದು, ದುಷ್ಕರ್ಮಿಗಳಿಗೆ ಮನೆಗೆ ನುಗ್ಗಿ ಕವಿತಾಳನ್ನು ಹತ್ಯೆ ಮಾಡಿದ್ದಾರೆ ಎಂದು ಕಥೆ ಕಟ್ಟಿ ಮೊಸಳೆ ಕಣ್ಣೀರು ಹಾಕಿದ್ದನು.

ಕೊಲೆಗೂ ಮುನ್ನ ಪತ್ನಿಗೆ ಒಡವೆ ಕೊಡಿಸಿದ್ದ: ಐದು ದಿನಗಳ ಹಿಂದೆಯೇ ಕೊಲೆಗೆ ಸ್ಕೆಚ್ ಹಾಕಿದ್ದ ಡಾಕ್ಟರ್ ರೇವಂತ್ ಫೆಬ್ರವರಿ 17ರಂದು ರೇವಂತ್ ಪತ್ನಿ ಕವಿತಾಗೆ ಒಡವೆ ಕೊಡಿಸಿದ್ದಾನೆ. ಮನೆಗೆ ಬಂದ ಕೂಡಲೇ ಕವಿತಾ ಬಾಯಿಗೆ ಬಟ್ಟೆ ತುರುಕಿ ಹೊಟ್ಟೆ ಭಾಗಕ್ಕೆ ಇಂಜೆಕ್ಷನ್ ಕೊಟ್ಟಿದ್ದಾನೆ. ಕವಿತಾ ಕೆಲವೇ ಕ್ಷಣಗಳಲ್ಲಿ ಪ್ರಜ್ಞೆ ತಪ್ಪಿದ್ದಾರೆ. ಕವಿತಾಳನ್ನು ಕಾರ್ ಶೆಡ್ಡಿಗೆ ಎಳೆದೊಯ್ದಿದು ಆರು ತಿಂಗಳ ಮಗುವಿನ ಮುಂದೆಯೇ ಪತ್ನಿಯ ಕತ್ತು ಕೊಯ್ದಿದ್ದಾನೆ. ಕೊಲೆಯ ಬಳಿಕ ರಕ್ತ ಹರಿಯಬಾರದೆಂದು ಕವಿತಾ ಸುತ್ತ ಮ್ಯಾಟ್ ಹಾಕಿದ್ದಾನೆ. ಮನೆಯಲ್ಲಿಯೇ ಇದ್ದ 5 ವರ್ಷದ ಕಂದಮ್ಮ ಅಮ್ಮ ಎಂದು ಕೇಳಿದಾಗ ವಾಶ್ ರೂಂಗೆ ಹೋಗಿದ್ದಾಳೆ ಎಂದು ಸುಳ್ಳು ಹೇಳಿದ್ದಾನೆ. ಕೊಲೆಯ ಬಳಿಕ ಮಕ್ಕಳನ್ನು ಕರೆದುಕೊಂಡು ಕ್ಲಿನಿಕ್ ಗೆ ಹೋಗಿದ್ದನು.

ಮೊಸಳೆ ಕಣ್ಣೀರು ಸುರಿಸಿದ್ದ: ಪೊಲೀಸರ ತನಿಖೆಯ ದಿಕ್ಕು ತಪ್ಪಿಸಲು ಯಾರೋ ದುಷ್ಕರ್ಮಿಗಳು ಮನೆಗೆ ಬಂದು ಕೊಲೆ ಮಾಡಿ, ಚಿನ್ನಾಭರಣವನ್ನ ದೋಚಿ ಹೋಗಿದ್ದಾರೆ ಅಂತ ದೂರು ನೀಡಿ, ಎಲ್ಲರೆದರು ಮೊಸಳೆ ಕಣ್ಣೀರು ಸುರಿಸಿದ್ದ. ಆದರೆ ಕವಿತಾ ಮರಣೋತ್ತರ ವರದಿಯಲ್ಲಿ ದಂತವೈದ್ಯನ ಅಸಲಿ ಮುಖವನ್ನ ಬಯಲು ಮಾಡಿತ್ತು. ಕವಿತಾಳ ಕೊಲೆ ಮಾಡುವ ಮುನ್ನ ಆಕೆಗೆ ಇಂಜೆಕ್ಷನ್ ನೀಡಲಾಗಿತ್ತು ಅಂತ ವರದಿ ಹೇಳಿತ್ತು. ಇದರಿಂದ ಹೆದರಿದ ರೇವಂತ್, ಕಡೂರಿನ ಮಸಾಲ ಡಾಬಾದ ಸಮೀಪ ಕಾರು ನಿಲ್ಲಿಸಿ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದುರಂತ ಅಂದರೆ 6 ತಿಂಗಳ ಹಸುಗೂಸು, 5 ವರ್ಷದ ಮಗು ಇದೀಗ ಅಪ್ಪ-ಅಮ್ಮ ಇಬ್ಬರನ್ನೂ ಕಳೆದುಕೊಂಡು ಅನಾಥರಾಗಿದ್ದಾರೆ. ಇತ್ತ ಹರ್ಷಿತಾ ಪುತ್ರಿಯೂ ಅಮ್ಮನನ್ನು ಕಳೆದುಕೊಂಡು ಅನಾಥವಾಗಿದ್ದಾಳೆ. ಅಕ್ರಮ ಸಂಬಂಧ ಮೂವರನ್ನ ಬಲಿ ಪಡೆದಿದೆ.

Comments

Leave a Reply

Your email address will not be published. Required fields are marked *