ನೇತ್ರಾವತಿ ಸ್ನಾನಘಟ್ಟದಲ್ಲೇ ಮರಳು ದಂಧೆ- ಕಣ್ಮುಚ್ಚಿ ಕುಳಿತ ಜಿಲ್ಲಾಡಳಿತ

-ಅಧಿಕಾರಿಗಳಿಗೆ ಕಣ್ಣಿದ್ದೂ ಕುರುಡು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ನಿಲ್ಲುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ. ಜಿಲ್ಲಾಡಳಿತ ಜನಸಾಮಾನ್ಯರಿಗೆ ನಿಗದಿತ ಬೆಲೆಯಲ್ಲಿ ಮರಳು ನೀಡಲು ಅದೆಷ್ಟೋ ವ್ಯವಸ್ಥೆ ಕಲ್ಪಿಸಿದರೂ ಕೂಡಾ ಅಕ್ರಮ ದಂಧೆಕೋರರು ಅವೆಲ್ಲದಕ್ಕೂ ಡೋಂಟ್ ಕೇರ್ ಎಂದು ಬಿಂದಾಸ್ ಆಗಿ ದಂಧೆ ನಡೆಸುತ್ತಿದ್ದಾರೆ.

ಜಿಲ್ಲೆಯ ಪ್ರಸಿದ್ಧ ತೀರ್ಥ ಕ್ಷೇತ್ರ ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟಕ್ಕೆ ಕೂಗಳತೆ ದೂರದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಡ್ರೆಜಿಂಗ್ ಮೆಷಿನ್, ಜೇಸಿಬಿ ಬಳಸಿ ನದಿಯ ಒಡಲು ಬರಿದು ಮಾಡುತ್ತಿದ್ದರೆ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಜಾಣಕುರುಡು ಪ್ರದರ್ಶಿಸುತ್ತಿದ್ದು, ಸುಮ್ನೆ ನಮಗೆ ಅದೆಲ್ಲ ಯಾಕೆ ಸಾರ್, ದಾಳಿ ನಡೆಸಲು ಮುಂದಾದರೆ ಮೇಲಿಂದ ಫೋನ್ ಬರುತ್ತೆ. ವಿಧಾನಸೌಧ ತನಕ ಅವರ ಕೈ ಇದೆ. ಏನು ಮಾಡಿದ್ರೂ ವೇಸ್ಟ್ ಅಂತಾರೆ ಪೊಲೀಸ್ ಸಿಬ್ಬಂದಿ. ಹೀಗೆ ಕೆಳಗಿಂದ ಮೇಲಿನವರೆಗೆ ಮಾಮೂಲಿ ಯಾಗೇ ನಡೀತಿರೋ ದಂಧೆಯನ್ನು ಮಟ್ಟ ಹಾಕಿ ನದಿಯನ್ನು ಉಳಿಸೋದ್ಯಾರು ಅನ್ನೋದು ಧರ್ಮಸ್ಥಳ ಜನರ ಪ್ರಶ್ನೆಯಾಗಿದೆ. ಇದನ್ನೂ ಓದಿ: ಅಪ್ರಾಪ್ತೆಯ ಮೇಲೆ ರೇಪ್ – ಬೆಳ್ತಂಗಡಿ ಪೊಲೀಸರಿಂದ ಇಬ್ಬರು ಅರೆಸ್ಟ್

ಧರ್ಮಸ್ಥಳದ ಸ್ನಾನಘಟ್ಟದಿಂದ ಎಡಭಾಗಕ್ಕೆ ಮುಂಡಾಜೆ-ಚಾರ್ಮಾಡಿ ಸಂಧಿಸುವ ರಸ್ತೆ ಹೋಗುತ್ತದೆ. ಇಲ್ಲಿ 100 ಮೀಟರ್ ಮುಂದಕ್ಕೆ ಹೋದರೆ ಸೂರ್ಯಕಮಲ್ ಲಾಡ್ಜ್ ಇದ್ದು ಇದರ ಅಂಗಳದಲ್ಲೇ ಅಕ್ರಮ ಮರಳುಗಾರಿಕೆ ವ್ಯವಸ್ಥಿತವಾಗಿ ನಡೆಯುತ್ತಿದೆ. ಲಾಡ್ಜ್ ಮುಂಭಾಗ, ಹಿಂಭಾಗ ಎಲ್ಲೆಂದರಲ್ಲಿ ಟಿಪ್ಪರ್, ಜೇಸಿಬಿ ಸಾಲುಗಟ್ಟಿ ನಿಲ್ಲುತ್ತಿದ್ದು ಇಲ್ಲೇ ನೇತ್ರಾವತಿ ನದಿಯಿಂದ ಡ್ರೆಜಿಂಗ್ ಮೆಷಿನ್ ಬಳಸಿ ಮರಳು ತೆಗೆಯಲಾಗುತ್ತಿದೆ. ಹಾಗೆ ತೆಗೆದ ಮರಳನ್ನು ಟಿಪ್ಪರ್ ಗಳಲ್ಲಿ ರಾಜಾರೋಷವಾಗಿ ಸಾಗಾಟ ಮಾಡಲಾಗುತ್ತಿದೆ. ಇಲ್ಲಿಂದ ಬೆಳ್ತಂಗಡಿ, ಮೂಡಬಿದ್ರೆ, ಚಾರ್ಮಾಡಿ ಮಾರ್ಗವಾಗಿ ಚಿಕ್ಕಮಗಳೂರು, ಕಡಬ, ಮಂಗಳೂರು ಕಡೆಗೆ ಮರಳು ಸಾಗಾಟ ಮಾಡಲಾಗುತ್ತದೆ. ಹೀಗೆ ದಿನವೊಂದಕ್ಕೆ ಸುಮಾರು 100-150 ಟಿಪ್ಪರ್ ಗಳಷ್ಟು ಮರಳನ್ನು ಅಕ್ರಮವಾಗಿ ಸಾಗಿಸುತ್ತಿದ್ದು ದಂಧೆಕೋರರು ಅಧಿಕಾರಿಗಳ ಕೃಪಾಕಟಾಕ್ಷದಿಂದ ದುಡ್ಡಿನ ಕಂತೆ ಎಣಿಸುತ್ತಿದ್ದಾರೆ. ಸ್ನಾನಘಟ್ಟದ ಬಳಿಯಲ್ಲಿ ರಸ್ತೆಯಲ್ಲಿ ಘನವಾಹನ ಪ್ರವೇಶ ನಿಷೇಧಸಲಾಗಿದೆ ಎಂಬ ಬೋರ್ಡ್ ಹಾಕಿದ್ದರೂ ಭಾರೀ ಗಾತ್ರದ ಟಿಪ್ಪರ್ ಗಳು ರಸ್ತೆಯನ್ನು ಹಾಳುಗೆಡವುತ್ತಿದ್ದು ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.

ಸುಬ್ರಮಣ್ಯ ಸ್ನಾನಘಟ್ಟದ ಬಳಿಕ ನೇತ್ರಾವತಿಗೆ ಕಂಟಕ:
ಕೆಲವು ತಿಂಗಳ ಹಿಂದೆ ಕೊರೊನಾ ಲಾಕ್‍ಡೌನ್ ಅವಧಿಯಲ್ಲಿ ಸುಬ್ರಮಣ್ಯದ ಕುಮಾರಧಾರ ಸ್ನಾನಘಟ್ಟದಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿದ್ದುದು ಬೆಳಕಿಗೆ ಬಂದಿತ್ತು. ಪೊಲೀಸ್ ಇಲಾಖೆಯಿಂದ ಹಿಡಿದು ವಿವಿಧ ಇಲಾಖೆಗಳ ಅಧಿಕಾರಿಗಳು ದಂಧೆಯಲ್ಲಿ ಶಾಮೀಲಾಗಿದ್ದ ಆರೋಪ ಕೇಳಿಬಂದಿತ್ತು. ಸಾರ್ವಜನಿಕರ ಆಕ್ರೋಶದ ಬಳಿಕ ದಂಧೆಯನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಬಂದ್ ಮಾಡಿದ್ದರು. ಈಗ ಮತ್ತೆ ಅಂತದ್ದೇ ಘಟನೆ ಧರ್ಮಸ್ಥಳದಲ್ಲಿ ನಡೆಯುತ್ತಿದ್ದು, ಜಿಲ್ಲೆಯಲ್ಲಿ ಗಣಿ ಇಲಾಖೆ ಅನ್ನೋದು ಇದೆಯೇ ಎನ್ನುವಷ್ಟು ಸಂದೇಹ ಜನರನ್ನು ಕಾಡಲಾರಂಭಿಸಿದೆ. ಸರ್ಕಾರಕ್ಕೆ ರಾಜಾಧನ ಪಾವತಿಸದೆ, ಲೀಸ್ ಪಡೆಯದೇ, ಯಾವೊಂದು ಅನುಮತಿಯೂ ಇಲ್ಲದೆ, ಲೈಸೆನ್ಸ್ ಅಗತ್ಯವೇ ಇಲ್ಲದೆ, ಸುಪ್ರೀಂಕೋರ್ಟ್ ನಿಷೇಧಿಸಿರುವ ಡ್ರೆಜಿಂಗ್ ಬಳಸಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ದಂಧೆ ನಡೆಯುತ್ತಿದ್ದರೆ ಅಧಿಕಾರಿಗಳು ದಾಳಿ ನಡೆಸದಂತೆ ಕಟ್ಟಿ ಹಾಕುತ್ತಿರುವ ಕೈ ಯಾವುದು ಅನ್ನೋದಕ್ಕೆ ಕ್ಷೇತ್ರದ ಶಾಸಕ ಹರೀಶ್ ಪೂಂಜಾ ಅವರೇ ಉತ್ತರಿಸಬೇಕಿದೆ. ದಂಧೆ ಹೀಗೆ ಮುಂದುವರಿದರೆ ಲಕ್ಷಾಂತರ ಭಕ್ತರ ನಂಬಿಕೆಯಾಗಿರುವ ನೇತ್ರಾವತಿ ನದಿಗೆ ಮುಂದಿನ ದಿನಗಳಲ್ಲಿ ಕಂಟಕ ಎದುರಾಗಲಿರುವುದು ಸುಳ್ಳಲ್ಲ.  ಇದನ್ನೂ ಓದಿ: ನನ್ನ ಮಗಳ ಸಾವಿಗೆ ತೆಲುಗು ನಟ ಕಾರಣ- ಸೌಜನ್ಯ ತಂದೆ ದೂರು 

Comments

Leave a Reply

Your email address will not be published. Required fields are marked *