ಅನೈತಿಕ ಸಂಬಂಧ ಶಂಕೆ: ಆಟೋ ಚಾಲಕನ ಬರ್ಬರ ಕೊಲೆ!

ಬಳ್ಳಾರಿ: ಅನೈತಿಕ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಆಟೋ ಚಾಲಕನನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದಲ್ಲಿ ಇಂದು ನಡೆದಿದೆ.

ಬಸವನಕುಂಟೆ ನಿವಾಸಿ ಈಶ್ವರ್ (45) ಕೊಲೆಯಾದ ಆಟೋ ಚಾಲಕ. ನಗರದ ಕಂಟ್ಮೋನೆಂಟ್ ಪ್ರದೇಶದಲ್ಲಿ ಈಶ್ವರ್ ಮೇಲೆ ದಾಳಿ ಮಾಡಿದ ದುಷ್ಕರ್ಮಿಗಳು ಮಚ್ಚು ಲಾಂಗ್ ಗಳಿಂದ ಹಲ್ಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಈಶ್ವರ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಈ ವೇಳೆ ಈಶ್ವರ್ ಜೊತೆಗಿದ್ದ ದಾದು ದುಷ್ಕರ್ಮಿಗಳಿಂದ ತಪ್ಪಿಸಿಕೊಂಡು ಬಂದಿದ್ದಾರೆ.

ಈಶ್ವರ್‌ಗೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಸುಮಾರು 20 ವರ್ಷಗಳಿಂದ ಆಟೋ ಚಾಲನೆ ಮಾಡುತ್ತ ಜೀವನ ಸಾಗಿಸುತ್ತಿದ್ದ. ಆದರೆ ತಮ್ಮ ಬಡಾವಣೆ ಸಮೀಪದ ದೇವಿನಗರದ ನಿವಾಸಿ ಹಸೀನಾ ಎಂಬ ಮಹಿಳೆಯ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದ. ಆಕೆಯ ಜೊತೆಗೆ ಸಂಬಂಧ ಬಿಡುವಂತೆ ಈ ಹಿಂದೆ ಹಲವು ಬಾರಿ ಗಲಾಟೆಯಾಗಿ, ರಾಜಿ ಮಾಡಿಕೊಳ್ಳಲಾಗಿತ್ತು. ಆದರೆ ಈಶ್ವರ್ ಹಾಗೂ ಹಸೀನಾ ಸಂಬಂಧ ಮುಂದುವರಿದಿತ್ತು. ಇದೇ ಕಾರಣಕ್ಕೆ ಹಸೀನಾ ಸಂಬಂಧಿಕರು ಈಶ್ವರ್‍ನನ್ನು ಕೊಲೆ ಮಾಡಿದ್ದಾರೆ ಎನ್ನಲಾಗುತ್ತಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಈಶ್ವರ್ ಸಂಬಂಧಿ, ಕಂಟ್ಮೋನೆಂಟ್ ಪ್ರದೇಶದಲ್ಲಿ ಈಶ್ವರ್ ಹಾಗೂ ಓರ್ವ ಮಹಿಳೆ ಆಟೋದಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಕೆಲ ದುಷ್ಕರ್ಮಿಗಳು ಏಕಾಏಕಿ ದಾಳಿ ಮಾಡಿದ್ದರು. ಲಾಂಗು, ಮಚ್ಚಿನಿಂದ ಕೊಲೆ ಮಾಡಿದ್ದಾರೆ ಅಂತ ದುಷ್ಕರ್ಮಿಗಳಿಂದ ತಪ್ಪಿಸಿಕೊಂಡ ಬಂದಿರುವ ದಾದು ಹೇಳಿದ್ದಾರೆ. ಆಟೋದಲ್ಲಿದ್ದ ಮಹಿಳೆ ಕೂಡ ಕೊಲೆಯಲ್ಲಿ ಭಾಗಿಯಾಗಿದ್ದಾಳೆ ಎಂದು ಆರೋಪಿಸಿದ್ದಾರೆ.

ಈಶ್ವರ್ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದ ಹಸೀನಾ ಪರಾರಿಯಾಗಿದ್ದಾಳೆ. ಇದರಿಂದಾಗಿ ಆಕೆಯೇ ಕೊಲೆ ಮಾಡಿದ್ದಾಳೆಯೇ ಎನ್ನುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಕೌಲಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದುಷ್ಕರ್ಮಿಗಳಿಂದ ಪಾರಾದ ದಾದು ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ತನಿಖೆ ಆರಂಭಿಸಿರುವ ಪೊಲೀಸರು ಮಹಿಳೆ ಹಾಗೂ ಆರೋಪಿಗಳಿಗಾಗಿ ಬಲೆ ಬಿಸಿದ್ದಾರೆ.

Comments

Leave a Reply

Your email address will not be published. Required fields are marked *