ಕಣ್ಣು, ಕಿಡ್ನಿ ಮಾರುತ್ತೇನೆ ನನಗೆ ಸಾಲ ತೀರಿಸಲು ದುಡ್ಡು ಕೊಡಿ – ಬೋರ್ಡ್ ಹಿಡಿದು ಅಲೆಯುತ್ತಿರುವ ರೈತ

ತುಮಕೂರು: ಕಣ್ಣು, ಕಿಡ್ನಿ ಮಾರುತ್ತೇನೆ, ನನಗೆ ಸಾಲ ತೀರಿಸಲು ದುಡ್ಡು ಕೊಡಿ ಎಂದು ಬೋರ್ಡ್ ಹಿಡಿದು ಶಿರಾ ತಾಲೂಕಿನಲ್ಲಿ ರೈತರೊಬ್ಬರು ಬೀದಿ ಬೀದಿ ಅಲೆಯುತ್ತಿದ್ದಾರೆ.

ಮೂರ್ನಾಲ್ಕು ಬೋರ್ ವೆಲ್ ಕೊರೆದರೂ ಕೂಡ ರೇಷ್ಮೆ ಬೆಳೆ ಕೈ ಹತ್ತದೆ ಸಾಲ ಮಾಡಿದ ರೈತ ಚಂದ್ರಶೇಖರ್ ನಂತರ ಆ ಸಾಲವನ್ನು ತೀರಿಸಲಾಗದೆ ವಿಷವನ್ನು ಕುಡಿದಿದ್ದರು. ಅದೃಷ್ಟವಾಶಾತ್ ಬದುಕಿ ಬಂದು ಈಗ ಕೈ ಸಾಲ ಮಾಡಿ ಬ್ಯಾಂಕ್ ಸಾಲ ತೀರಿಸಿದ್ದರು. ಈಗ ಕೈ ಸಾಲ ತೀರಿಸಲಾಗದೆ ಕಿಡ್ನಿ ಮಾರುವ ಹಂತಕ್ಕೆ ಬಂದು ತುಲುಪಿದ್ದಾರೆ.

ಶಿರಾ ತಾಲೂಕಿನ ಮಾಗೂಡಿನ ರೈತನಾದ ಚಂದ್ರಶೇಖರ್ 15 ವರ್ಷದ ಹಿಂದೆ ಪಿಎಲ್‍ಡಿ ಹಾಗೂ ಡಿಸಿಸಿ ಬ್ಯಾಂಕಿನಲ್ಲಿ ಸಾಲ ಮಾಡಿದ್ದರು. ನಂತರ ಹಂತಹಂತವಾಗಿ ಸಾಲ ತೀರಿಸಿದ್ದರೂ ಕ್ಲಿಯರೆನ್ಸ್ ಸಿಗದೆ ಪಹಣಿಯಲ್ಲು ಇನ್ನೂ ಸಾಲವಿದೆ ಎಂದು ಬರುತ್ತಿದ್ದು ಜಮೀನನ್ನು ಉಪಯೋಗಿಸಿಕೊಂಡು ಮರುಸಾಲವೂ ಮಾಡಲಾಗದ ಪರಿಸ್ಥಿತಿ ತುಲುಪಿದ್ದಾರೆ.

ಇನ್ನೊಂದಡೆ ಕೈ ಸಾಲ ವಿಪರೀತ ಬೆಳೆದು 10ನೇ ತರಗತಿ ಓದುತ್ತಿರುವ ಮಗಳ ವಿದ್ಯಾಭ್ಯಾಸಕ್ಕೂ ಹಣವಿಲ್ಲದಂತೆ ಪರಿತಪಿಸುವ ಹಂತಕ್ಕೆ ತಲುಪಿದ್ದಾರೆ. ಈಗ ಕಿಡ್ನಿ ಮಾರಾಟ ಕಾನೂನು ಬಾಹಿರ ಎಂದು ಗೊತ್ತಿದ್ದರೂ ಬೇರೆ ದಾರಿ ಕಾಣದೆ ಇತ್ತ ಜೀವನವನ್ನೂ ನಡೆಸಲಾಗದೆ ತುತ್ತು ಅನ್ನಕ್ಕೂ ಕೈ ಚಾಚುತ್ತಿದ್ದಾರೆ.

Comments

Leave a Reply

Your email address will not be published. Required fields are marked *