ಪಾಕ್ ಭಯೋತ್ಪಾದನೆ ಮುಂದುವರಿಸಿದಲ್ಲಿ ತುಂಡು ತುಂಡಾಗುವುದು ನಿಶ್ಚಿತ – ರಾಜನಾಥ್ ಸಿಂಗ್

ಗಾಂಧಿನಗರ: ಪಾಕಿಸ್ತಾನ ಭಯೋತ್ಪಾದನೆಗೆ ಪ್ರಚೋದನೆ ನೀಡುವುದನ್ನು ನಿಲ್ಲಿಸದಿದ್ದರೆ, ತುಂಡು ತುಂಡಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುಡುಗಿದ್ದಾರೆ.

ಸೂರತ್‍ನಲ್ಲಿ ನಡೆದ 122 ಹುತಾತ್ಮ ಸೈನಿಕರ ಕುಟುಂಬಕ್ಕೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಾಕಿಸ್ತಾನಿಗಳು ಗಡಿ ನಿಯಂತ್ರಣ ರೇಖೆ(ಎಲ್‍ಓಸಿ)ಯನ್ನು ದಾಟಿದಲ್ಲಿ ನಮ್ಮ ಸೈನಿಕರು ಅವರು ಜೀವಂತವಾಗಿ ಮರಳು ಬಿಡುವುದಿಲ್ಲ ಎಂದು ಕುಟುಕಿದ್ದಾರೆ.

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ತಮ್ಮ ಸೈನಿಕರಿಗೆ ಗಡಿ ನಿಯಂತ್ರಣ ರೇಖೆಯನ್ನು ದಾಟದಂತೆ ಉತ್ತಮ ಸಲಹೆಯನ್ನು ನೀಡಿದ್ದಾರೆ. ಏಕೆಂದರೆ, ಭಾರತೀಯ ಸೈನಿಕರು ಪಾಕಿಸ್ತಾನಿಗಳನ್ನು ಬಗ್ಗು ಬಡಿಯಲು ಸಿದ್ಧರಾಗಿದ್ದಾರೆ. ಅವರು ಪಾಕಿಸ್ತನಕ್ಕೆ ಜೀವಂತವಾಗಿ ಮರಳಲು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 370ನೇ ವಿಧಿಯ ರದ್ದತಿಯ ಭಾರತದ ನಿರ್ಧಾರವನ್ನು ಪಾಕಿಸ್ತಾನಕ್ಕೆ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಅದನ್ನು ತಪ್ಪುದಾರಿಗೆ ಎಳೆಯಲು ವಿಶ್ವಸಂಸ್ಥೆ ಮೊರೆ ಹೋಯಿತು. ಆದರೆ, ಪಾಕಿಸ್ತಾನ ಹೇಳುವುದನ್ನು ಅಂತರಾಷ್ಟ್ರೀಯ ಸಮುದಾಯ ನಂಬುವುದಿಲ್ಲ ಎಂದರು.

ಶುಕ್ರವಾರ ಮುಜಾಫರಾಬಾದ್‍ನಲ್ಲಿ ಮಾತನಾಡಿದ್ದ ಇಮ್ರಾನ್ ಖಾನ್, ನಾನು ಸೂಚನೆ ನೀಡುವವರೆಗೆ ಪಕಿಸ್ತಾನದ ಜನತೆ ಗಡಿ ನಿಯಂತ್ರಣ ರೇಖೆಯತ್ತ ಸಾಗಬಾರದು ಎಂದು ಸೂಚಿಸಿದ್ದರು.

ಈ ವರ್ಷದ 9 ತಿಂಗಳ ಅವಧಿಯಲ್ಲಿ ಬರೋಬ್ಬರಿ 2,050ಕ್ಕೂ ಹೆಚ್ಚು ಬಾರಿ ಪಾಕಿಸ್ತಾನ ಕದನವಿರಾಮ ಉಲ್ಲಂಘಿಸಿದೆ. ಅಲ್ಲದೆ, 21 ಭಾರತೀಯರನ್ನು ಹತ್ಯೆ ಮಾಡಿದೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.

ಇದರ ನಡುವೆ, ವಿದೇಶಿ ಆಂಗ್ಲ ಮಾಧ್ಯಮಕ್ಕೆ ಸಂದರ್ಶನ ಕೊಟ್ಟಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಭಾರತದ ಜೊತೆ ಯುದ್ಧವಾದರೆ ನಾವು ಸೋತು ಸುಣ್ಣವಾಗುತ್ತೇವೆ. ಇದರ ಅರಿವು ನಮಗಿದೆ. ಆದರೆ, ಭಾರತ ಗಂಭೀರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದಿದ್ದಾರೆ. ಭಾರತದ ಮೇಲೆ ನ್ಯೂಕ್ಲಿಯರ್ ವಾರ್ ಬೆದರಿಕೆ ಒಡ್ಡುತ್ತಿದ್ದೀರಾ ಅಂತ ಸಂದಕರ್ಶಕ ಕೇಳಿದಾಗ ಈ ವಿಚಾರದಲ್ಲಿ ಗೊಂದಲಗಳೇ ಇಲ್ಲ. ಪಾಕಿಸ್ತಾನ ಯಾವತ್ತೂ ತಾನಾಗೇ ಪರಮಾಣು ಯುದ್ಧ ಆರಂಭಿಸಲ್ಲ. ನಾನು ಶಾಂತಿಪ್ರಿಯ. ಯುದ್ಧ ವಿರೋಧಿ, ಯುದ್ಧಗಳಿಂದ ಪರಿಹಾರ ಸಿಗಲ್ಲ ಅಂತ ಒಕ್ಕಣೆ ಹಾಕಿದ್ದಾರೆ. ಈ ಮಧ್ಯೆ, ಪಾಕಿಸ್ತಾನಿಗಳು ನಮ್ಮ ಸಹೋದರರು, ದ್ವೇಷ ಬೇಡ ಎಂದು ಕೇಂದ್ರದ ಮಾಜಿ ಸಚಿವ ಶರದ್ ಪವಾರ್ ಹೇಳಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.

Comments

Leave a Reply

Your email address will not be published. Required fields are marked *