ಬಿಜೆಪಿ ಜೊತೆ ಹೋದ್ರೆ ಎಚ್ಡಿಕೆಗೆ ಮನೆಯಿಂದಲೇ ಬಹಿಷ್ಕಾರ- ಎಚ್‍ಡಿ ದೇವೇಗೌಡ

ಬೆಂಗಳೂರು: ಒಂದು ವೇಳೆ ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿ ಕುಮಾರಸ್ವಾಮಿ ಬಿಜೆಪಿ ಜೊತೆ ಹೋದರೆ ಆತನನ್ನು ಮನೆಯಿಂದಲೇ ಬಹಿಷ್ಕಾರ ಹಾಕುತ್ತೇನೆ ಎಂದು ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಹೇಳಿದ್ದಾರೆ.

ಎನ್‍ಡಿ ಟಿವಿ ಮುಖ್ಯಸ್ಥ ಪ್ರಣಯ್ ರಾಯ್ ನಡೆಸಿದ ಸಂದರ್ಶನದಲ್ಲಿ ಅವರು, 2006ರಲ್ಲಿ ಬಿಜೆಪಿ ಜೊತೆ ಸರ್ಕಾರ ನಡೆಸಿದ ತಪ್ಪಿನಿಂದ ಕುಮಾರಸ್ವಾಮಿ ಪಾಠ ಕಲಿತಿದ್ದಾನೆ. ಸಾರ್ವಜನಿಕ ಭಾಷಣದಲ್ಲೂ ಈ ಬಗ್ಗೆ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾನೆ. ನಾನು ತಪ್ಪು ಮಾಡಿದೆ, ನನ್ನ ತಂದೆ ಆರೋಗ್ಯ ಕೂಡಾ ಹಾಳಾಯ್ತು, ಅವರು ಸಂಕಟ ಅನುಭವಿಸಿದ್ರು. ನಾನು ಮತ್ತೆ ಆ ತಪ್ಪು ಮಾಡಲ್ಲ ಅಂತ ಹೇಳಿದ್ದಾನೆ ಎಂದು ಎಚ್‍ಡಿಡಿ ತಿಳಿಸಿದರು.

ಕಾಂಗ್ರೆಸ್ ಈಗಿನ ಚುನಾವಣಾ ವಾತಾವರಣವನ್ನು ಹಾಳು ಮಾಡಲು ಯತ್ನಿಸುತ್ತಿದೆ. ಎರಡೂ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಪ್ರಾದೇಶಿಕ ಪಕ್ಷವನ್ನು ಬಳಸಿ ಎಸೆಯುತ್ತಿವೆ. ಶಿವಸೇನೆ ಯಾಕೆ ಹೊರಬಂತು. ಚಂದ್ರಬಾಬು ನಾಯ್ಡು ಯಾಕೆ ಹೊರಬಂದರು. ಬಿಜೆಪಿಯಿಂದ ಬೆಂಬಲ ಪಡೆಯುವ ಪರಿಸ್ಥಿತಿ ಬರಲ್ಲ. ಕುಮಾರಸ್ವಾಮಿಗೆ ತಂದೆಯ ಆರೋಗ್ಯ ಎಲ್ಲಕ್ಕಿಂತ ಮುಖ್ಯವಾಗಿದೆ ಎಂದ್ರು.

ಒಂದು ವೇಳೆ ಬಿಜೆಪಿ ಜೊತೆ ಕುಮಾರಸ್ವಾಮಿ ಹೋದರೆ ಅವನು ನನ್ನ ಮಗನೇ ಅಲ್ಲ. ನಮ್ಮ ಕುಟುಂಬದಿಂದಲೇ ಕುಮಾರಸ್ವಾಮಿಗೆ ಬಹಿಷ್ಕಾರ ಹಾಕುತ್ತೇನೆ. ನನ್ನ ಅನುಮತಿ ಇಲ್ಲದೇ ಕಾಂಗ್ರೆಸ್ ಜೊತೆಗೂ ಹೋಗುವಂತಿಲ್ಲ ಎಂದು ಎಚ್.ಡಿ. ದೇವೇಗೌಡ ಖಡಕ್ ಮಾತನ್ನು ಆಡಿದ್ದಾರೆ.

Comments

Leave a Reply

Your email address will not be published. Required fields are marked *