ಅವಕಾಶ ಕೊಟ್ರೆ ಸಂಸತ್ತಿಗೆ ಸ್ಪರ್ಧಿಸದೇ ಕೆಪಿಸಿಸಿ ಅಧ್ಯಕ್ಷನಾಗ್ತೀನಿ: ಕೆಹೆಚ್ ಮುನಿಯಪ್ಪ

ನವದೆಹಲಿ: ಅವಕಾಶ ಕೊಟ್ಟರೆ ಲೋಕಸಭೆಗೆ ಸ್ಪರ್ಧೆ ಮಾಡದೇ  ಕೆಪಿಸಿಸಿ ಅಧ್ಯಕ್ಷ ನಾಗಿ ಕೆಲಸ ಮಾಡುತ್ತೇನೆ ಎಂದು ಸಂಸದ ಕೆಹೆಚ್ ಮುನಿಯಪ್ಪ ಹೇಳಿದ್ದಾರೆ.

ಕೆಪಿಸಿಸಿ ವಿಚಾರದಲ್ಲಿ ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧ. ಮೊನ್ನೆ ನಡೆದ ಸಂಸದರ ಸಭೆಯಲ್ಲಿ ಕೆಲವರು ಅಧ್ಯಕ್ಷ ಸ್ಥಾನಕ್ಕೆ ನನ್ನ ಹೆಸರು ಸೂಚಿಸಿದ್ದಾರೆ. ನನಗೆ ಅವಕಾಶ ನೀಡಿದರೆ ಸಮರ್ಥವಾಗಿ ಕೆಲಸ ಮಾಡುತ್ತೇನೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಗದೇ ಇದ್ದರೆ ಸಂಸತ್ತಿಗೆ ಸ್ಪರ್ಧೆ ಮಾಡುತ್ತೇನೆ ಎಂದು ತಿಳಿಸಿದರು.

ಈ ಹಿಂದೆ ಸೋನಿಯಾ ಗಾಂಧಿ ಎರಡು ಭಾರಿ ನನ್ನ ಹೆಸರು ಸೂಚಿಸಿದ್ದರೂ ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಕಾಂಗ್ರೆಸ್ ನಲ್ಲಿ ಎಲ್ಲರಿಗೂ ಅವಕಾಶ ನೀಡುತ್ತಾರೆ. ನಮಗೂ ಅವಕಾಶ ಕೊಟ್ಟರೆ ಸಮರ್ಥವಾಗಿ ಕೆಲಸ ಮಾಡುತ್ತೇನೆ. ನನ್ನ ಹೊರತು ಪಡಿಸಿ ಯಾರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಟ್ಟರೂ ನಮ್ಮ ವಿರೋಧ ಇಲ್ಲ. ಬಿ.ಕೆ ಹರಿಪ್ರಸಾದ್, ಮಾಜಿ ಸಿಎಂ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಗೆ ಅವಕಾಶ ಕೊಟ್ಟರೂ ನಮ್ಮ ಅಭ್ಯಂತರ ಇಲ್ಲ ಎಂದು ತಿಳಿಸಿದರು.

ಕಾಂಗ್ರೆಸ್ ಅತೃಪ್ತ ಶಾಸಕರ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಸರ್ಕಾರ ರಚನೆ ವೇಳೆ ಭಿನ್ನಾಭಿಪ್ರಾಯ ಸಹಜ. ಹೈಕಮಾಂಡ್ ಆದೇಶವನ್ನು ಎಲ್ಲರು ಪಾಲಿಸಬೇಕು. ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಇದ್ದು ಎಲ್ಲರೂ ಸೇರಿ ಪರಿಶೀಲಿಸಿ ಕೆಲಸ ಮಾಡ್ತಾರೆ. ಆರಂಭದಲ್ಲಿ ಒತ್ತಡ ಬರುವುದು ಸಹಜ. ಮತ್ತೊಮ್ಮೆ ಎಲ್ಲರಿಗೂ ಅವಕಾಶ ಸಿಗಲಿದೆ. ಪಕ್ಷ ಸಂಕಷ್ಟದಲ್ಲಿದೆ ಎಲ್ಲರೂ ಒಗ್ಗಟ್ಟಿನ ಕೆಲಸ ಮಾಡಬೇಕು. ಲೋಕಸಭೆಯಲ್ಲಿ ಅಧಿಕಾರಕ್ಕೆ ಬರಬೇಕಿದೆ. ರಾಹುಲ್ ಗಾಂಧಿ ಪ್ರಧಾನಿ ಮಾಡಲು ಎಲ್ಲರೂ ಸಹಕರಿಸಿಬೇಕು ಎಂದು ಹೇಳಿದರು.

Comments

Leave a Reply

Your email address will not be published. Required fields are marked *