‘ಭದ್ರತೆ ನೀಡಿದ್ರೆ ಬಿಎಸ್‍ವೈ-ಶೋಭಾ ಮದುವೆ ಸಿಡಿ ಬಿಡುಗಡೆ ಮಾಡ್ತೀನಿ’: ಪದ್ಮನಾಭ ಪ್ರಸನ್ನ

ರಾಯಚೂರು: ‘ಸೂಕ್ತ ಭದ್ರತೆ ನೀಡಿದರೆ ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆ ಮದುವೆ ಸಿಡಿ ಬಿಡುಗಡೆ ಮಾಡುತ್ತೇನೆ’ ಎಂದು ಕೆಜೆಪಿ ಪಕ್ಷದ ಸಂಸ್ಥಾಪಕ ಪದ್ಮನಾಭ ಪ್ರಸನ್ನಕುಮಾರ್ ಪುನರುಚ್ಚರಿಸಿದ್ದಾರೆ.

ರಾಯಚೂರಿನಲ್ಲಿ ಮಾತನಾಡಿದ ಅವರು, ‘ಸಿಡಿ ಬಿಡುಗಡೆ ಮಾಡಲು ನಮಗೆ ಜೀವಭಯವಿದೆ. ಈಗಾಗಲೇ ಎರಡು ಮೂರು ಬಾರಿ ನನ್ನ ಮೇಲೆ ದಾಳಿ ನಡೆದಿದೆ. ಒಮ್ಮೆ ಅಪಹರಣ ಮಾಡಿದ್ರು, ಪಕ್ಷದ ಕಚೇರಿ ಮೇಲೂ ದಾಳಿ ಮಾಡಿದ್ದರಿಂದ ಜೀವ ಭಯವಿದೆ. ನನಗೆ ಭದ್ರತೆ ನೀಡಿದ್ರೆ ಸಿಡಿ ಬಿಡುಗಡೆ ಮಾಡುತ್ತೇನೆ, ಇಲ್ಲದಿದ್ದರೇ ನನ್ನ ಹೆಂಡತಿ ಮಕ್ಕಳಿಗೆ ಗತಿ ಯಾರು?’ ಎಂದು ತನ್ನ ಭಯ ವ್ಯಕ್ತಪಡಿಸಿದ್ದಾರೆ.

ಇನ್ನೂ ಕೆಜೆಪಿ ಪಕ್ಷದ ಮುಖಂಡರೆಲ್ಲಾ ಪಕ್ಷದಲ್ಲೇ ಇದ್ದಾರೆ ಯಾರೂ ಯಡಿಯೂರಪ್ಪ ಅವರ ಹಿಂದೆ ಹೋಗಿಲ್ಲ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಕೆಜೆಪಿ ಅಭ್ಯರ್ಥಿಗಳು ಸ್ಪರ್ಧೆಗೆ ಇಳಿಯುತ್ತಾರೆ ಅಂತ ಪದ್ಮನಾಭ ಪ್ರಸನ್ನ ಹೇಳಿದ್ದಾರೆ. ಈ ಹಿಂದೆಯೂ ಪದ್ಮನಾಭ ಪ್ರಸನ್ನ ನನ್ನ ಬಳಿ ಬಿಎಸ್‍ವೈ-ಶೋಭಾರ ಸಿ.ಡಿ.ಯಿದೆ ಎಂದು ಹೇಳುತ್ತಿದ್ದರೇ ಹೊರತು ಸಿ.ಡಿ.ಯಲ್ಲೇನಿದೆ ಎಂದು ಮಾತ್ರ ವಿವರ ನೀಡುತ್ತಿರಲಿಲ್ಲ. ಪ್ರಸನ್ನ ಮತ್ತೆ ಠುಸ್ ಪಟಾಕಿ ಹಚ್ಚಿದ್ದಾರೋ ಅಥವಾ ನಿಜವಾಗಿಯೂ ಅಂಥಾ ಸಿ.ಡಿ. ಇದೆಯೇ ಎಂಬ ಅನುಮಾನ ಈಗಲಾದರೂ ಕೊನೆಗೊಳ್ಳುತ್ತಾ ಕಾದು ನೋಡಬೇಕು.

https://www.youtube.com/watch?v=VpnlD8gGDrA

Comments

Leave a Reply

Your email address will not be published. Required fields are marked *