ಹೋರಾಟ ನಿಲ್ಲಿಸಿ ಮನೆಗೆ ಹೋಗಿ: ರೈತರಿಗೆ ನರೇಂದ್ರ ಸಿಂಗ್ ಮನವಿ

ನವದೆಹಲಿ: ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ತಮ್ಮ ಆಂದೋಲನವನ್ನು ಕೊನೆಗೊಳಿಸಿ ಮನೆಗೆ ಹೋಗಬೇಕೆಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮನವಿ ಮಾಡಿದ್ದಾರೆ.

ರೈತರ ಆಂದೋಲನ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಮಸೂದೆಯನ್ನು ಚಳಿಗಾಲದ ಅಧಿವೇಶನದ ಮೊದಲ ದಿನ(ನವೆಂಬರ್ 29) ಸಂಸತ್ತಿನಲ್ಲಿ ಮಂಡಿಸಲಾಗುವುದು. ಬೆಳೆ ವೈವಿಧ್ಯೀಕರಣ ವಿಷಯಗಳ ಕುರಿತು ಚರ್ಚಿಸಲು ಸಮಿತಿಯನ್ನು ರಚಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಕೃಷಿ ಮತ್ತು ಕನಿಷ್ಠ ಬೆಂಬಲ ಬೆಲೆಗೆ (ಎನ್‍ಎಸ್‍ಪಿ) ವ್ಯವಸ್ಥೆಯನ್ನು ಹೆಚ್ಚು ಪಾರದರ್ಶಕ ಮತ್ತು ಪರಿಣಾಮಕಾರಿಯಾಗಿ ಮಾಡುವುದು ಈ ಸಮಿತಿ ಉದ್ದೇಶವಾಗಿರುತ್ತೆ ಎಂದು ತಿಳಿಸಿದ್ದಾರೆ.  

ಈ ಸಮಿತಿಯ ರಚನೆಯೊಂದಿಗೆ, ಎಂಎಸ್‍ಪಿ ಮೇಲಿನ ರೈತರ ಬೇಡಿಕೆ ಈಡೇರುತ್ತದೆ. ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸುವುದಾಗಿ ಘೋಷಿಸಿದ ನಂತರ ರೈತರ ಆಂದೋಲನವನ್ನು ಮುಂದುವರಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ರೈತರು ತಮ್ಮ ಧರಣಿಯನ್ನು ಕೊನೆಗೊಳಿಸಿ ಮನೆಗೆ ಹೋಗಬೇಕೆಂದು ನಾನು ಮನವಿ ಮಾಡುತ್ತೇನೆ ಎಂದಿದ್ದಾರೆ.

26 ನವೆಂಬರ್ 2020ರಿಂದ ದೆಹಲಿಯ ವಿವಿಧ ಗಡಿಗಳಲ್ಲಿ ರೈತರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ಈ ಹಿನ್ನೆಲೆ ಮೋದಿ ಅವರು ಕಳೆದ ವಾರ, ಕೇಂದ್ರವು ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ಈ ತಿಂಗಳ ಕೊನೆಯಲ್ಲಿ ಪ್ರಾರಂಭವಾಗುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಅಗತ್ಯ ಮಸೂದೆಗಳನ್ನು ತರಲಿದೆ ಎಂದು ಘೋಷಿಸಿದ್ದರು. ಈ ವೇಳೆ ಎಂಎಸ್‍ಪಿ ಹೊಸ ಚೌಕಟ್ಟಿನ ಮೇಲೆ ಕೆಲಸ ಮಾಡಲು ಸರ್ಕಾರವು ಸಮಿತಿಯನ್ನು ರಚಿಸುತ್ತದೆ ಎಂದು ಮೋದಿ ಅವರು ತಿಳಿಸಿದ್ದರು. ಇದನ್ನೂ ಓದಿ: ಹೊಸ ರೂಪಾಂತರಿ ವೈರಸ್ ಪೀಡಿತ ದೇಶಗಳಿಂದ ವಿಮಾನ ಹಾರಾಟ ನಿಲ್ಲಿಸಿ – ಮೋದಿಗೆ ಕೇಜ್ರಿವಾಲ್ ಮನವಿ 

ಕನಿಷ್ಠ ಬೆಂಬಲ ಬೆಲೆ(ಎಂಎಸ್‍ಪಿ) ಕಾನೂನಿನ ನಮ್ಮ ಬೇಡಿಕೆಯನ್ನು ಸರ್ಕಾರ ಒಪ್ಪಿಕೊಂಡ ನಂತರ ನಾವು ಪ್ರತಿಭಟನೆಯನ್ನು ಹಿಂಪಡೆಯುತ್ತೇವೆ. ಈ ಪ್ರತಿಭಟನೆಯ ವೇಳೆ ಸಾವನ್ನಪ್ಪಿದ 750 ರೈತರ ಕುಟುಂಬಕ್ಕೆ ಪರಿಹಾರ ನೀಡಿದ ನಂತರ ನಾವು ಮನೆಗೆ ಹಿಂದಿರುಗುತ್ತೇವೆ ಎಂದು ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ತಿಳಿಸಿದ್ದರು.

Comments

Leave a Reply

Your email address will not be published. Required fields are marked *