ನಾನೇ ತಲೆಗೆ ಎರಡು ಸುತ್ತು ಗುಂಡು ಹಾರಿಸಿದೆ: ದಾಬೋಲ್ಕರ್ ಹತ್ಯೆ ಕುರಿತು ಆರೋಪಿ ತಪ್ಪೊಪ್ಪಿಗೆ

ನವದೆಹಲಿ: ವಿಚಾರವಾದಿ ದಾಬೋಲ್ಕರ್ ಹತ್ಯೆ ಕುರಿತು ಆರೋಪಿ ಶರದ್ ಕಲಾಸ್ಕರ್ ತಪ್ಪೊಪ್ಪಿಕೊಂಡಿದ್ದು, ದಾಬೋಲ್ಕರ್ ಅವರ ತಲೆಗೆ ನಾನೇ ಎರಡು ಸುತ್ತು ಗುಂಡು ಹಾರಿಸಿದೆ ಎಂದು ಹೇಳಿದ್ದಾನೆ.

ವಿಚಾರವಾದಿ ನರೇಂದ್ರ ದಾಬೋಲ್ಕರ್ ಹತ್ಯೆ ನಡೆದು 6 ವರ್ಷಗಳ ನಂತರ ಇದೀಗ ಆರೋಪಿ ಶರದ್ ಕಲಸ್ಕರ್ ಕರ್ನಾಟಕ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಎರಡು ಸುತ್ತು ತಲೆಗೆ ಗುಂಡು ಹಾರಿಸಿ ಕೊಲೆ ಮಾಡಿದ್ದೇನೆ. ಒಂದು ಬಾರಿ ಹಿಂದಿನಿಂದ, ಇನ್ನೊಂದು ಬಾರಿ ಬಲ ಭಾಗದಿಂದ ಗುಂಡು ಹಾರಿಸಿದ್ದೇನೆ ಎಂದು ಕಲಸ್ಕರ್ ಹೇಳಿಕೊಂಡಿದ್ದಾನೆ.

ತಪ್ಪೊಪ್ಪಿಗೆ ಸಂದರ್ಭದಲ್ಲಿ ಆರೋಪಿಯೂ ಇನ್ನೂ ಭಯಾನಕವಾದ ಮಾಹಿತಿ ಬಹಿರಂಗ ಪಡಿಸಿದ್ದು, ನರೇಂದ್ರ ದಾಬೋಲ್ಕರ್ ಮಾತ್ರವಲ್ಲದೆ, ವಿಚಾರವಾದಿ ಗೋವಿಂದ್ ಪನ್ಸಾರೆ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಲ್ಲಿಯೂ ಭಾಗಿಯಾಗಿರುವುದಾಗಿ ಶರದ್ ಕಲಾಸ್ಕರ್ ಬಾಯ್ಬಿಟ್ಟಿದ್ದಾನೆ.

ಶರದ್ ಕಲಾಸ್ಕರ್‍ನನ್ನು ಕಳೆದ ವರ್ಷ ಕೊಲೆ ಹಾಗೂ ಪಿತೂರಿಗೆ ಸಂಬಂಧಿಸಿದಂತೆ ಬಂಧಿಸಲಾಗಿತ್ತು. ವಿಚಾರವಾದಿ ಹತ್ಯೆಯಲ್ಲಿ ಇನ್ನೂ ಹಲವು ಆರೋಪಿಗಳು ಭಾಗಿಯಾಗಿದ್ದು, ಮೊದಲ ಮೂವರು ವಿಚಾರವಾದಿಗಳು 2013 ಮತ್ತು 2015ರಲ್ಲಿ ಕೊಲೆಯಾಗಿದ್ದಾರೆ. ದಾಬೋಲ್ಕರ್ ಅವರನ್ನು ಆಗಸ್ಟ್ 2013ರಲ್ಲಿ ಪುಣೆಯಲ್ಲಿ, ಗೋವಿಂದ್ ಪನ್ಸಾರೆ ಅವರನ್ನು 2015ರ ಫೆಬ್ರವರಿಯಲ್ಲಿ ಮತ್ತು ಎಂ.ಎಂ.ಕಲಬುರ್ಗಿ ಅವರನ್ನು ಅದೇ ವರ್ಷ ಆಗಸ್ಟ್‍ನಲ್ಲಿ ಕೊಲೆ ಮಾಡಲಾಗಿತ್ತು.

ಮಹಾರಾಷ್ಟ್ರ ಭದ್ರತಾ ನಿಗ್ರಹ ದಳ ಪಾಲ್ಘರ್ ಜಿಲ್ಲೆಯ ನಲ್ಲಸೋಪುರದ ಪಿಸ್ತೂಲು ಉತ್ಪಾದನಾ ಘಟಕದ ಮೇಲೆ ದಾಳಿ ನಡೆಸಿದ ವೇಳೆ ಶರದ್ ಕಲಸ್ಕರ್ ನನ್ನು ಬಂಧಿಸಿತ್ತು. ವಿಚಾರಣೆ ವೇಳೆ ಎಲ್ಲ ವಿಚಾರವಾದಿಗಳ ಹತ್ಯೆ ಕುರಿತು ವಿವಿಧ ರಾಜ್ಯಗಳ ಪೊಲೀಸರೊಂದಿಗೆ ಮಾಹಿತಿ ಹಂಚಿಕೊಂಡು ತನಿಖೆ ನಡೆಸಬೇಕಿತ್ತು. ಆದರೆ, ಅಧಿಕಾರಿಗಳು ಎಡವಿದ್ದರು. ನಂತರ ಕರ್ನಾಟಕ ಪೊಲೀಸರ ಜೊತೆ ಮಾಹಿತಿ ಹಂಚಿಕೊಂಡರು.

ಕೆಲ ಬಲಪಂಥೀಯ ಸದಸ್ಯರನ್ನು ಸಂಪರ್ಕಿಸಿ, ಕ್ರ್ಯಾಶ್ ಕೋರ್ಸ್, ಬಂದೂಕುಗಳ ಬಳಕೆ ಹಾಗೂ ಬಾಂಬ್ ತಯಾರಿಸುವ ಪ್ರಕ್ರಿಯೆ ಕುರಿತು ಕಲಿತುಕೊಂಡೆ ಎಂದು ತಪ್ಪೊಪ್ಪಿಗೆ ಪತ್ರದಲ್ಲಿ ಕೊಲೆಗೆ ಕಾರಣಗಳನ್ನು ವಿವರಿಸುವಾಗ ಶರದ್ ಕಲಾಸ್ಕರ್ ತಿಳಿಸಿದ್ದಾನೆ ಎಂದು ವರದಿಯಾಗಿದೆ.

ಏನು ಹೇಳಿದ್ದಾನೆ?
ಎಲ್ಲ ವಿಚಾರವಾದಿಗಳ ಕೊಲೆಗೆ ವಿರೇಂದ್ರ ತಾವ್ಡೆ ಸೂತ್ರಧಾರಿ. ತಾವ್ಡೆ ಕೊಲೆ ಮಾಡುವಂತೆ ಯುವಕರನ್ನು ಪ್ರೇರೆಪಿಸುತ್ತಿದ್ದರು. ನಾವು ಕೆಲವು ದುಷ್ಟರನ್ನು ಮುಗಿಸಬೇಕಿದೆ ಎಂದು ವಿರೇಂದ್ರ ತಾವ್ಡೆ ಹೇಳಿದ್ದಾರು. ಅವರೇ ಎಲ್ಲ ರೀತಿಯ ಪಿತೂರಿ ಹೆಣೆದಿದ್ದು, ಯುವಕರನ್ನು ಕೊಲೆಗೆ ಪ್ರೇರೆಪಿಸಿದ್ದಾರೆ.

ದಾಬೋಲ್ಕರ್ ತಲೆಗೆ ಗುಂಡು ಹಾರಿಸುವಂತೆ ತಾವ್ಡೆ ಅವರೇ ಹೇಳಿದ್ದರು. ಅದರಂತೆ ತಲೆಗೆ ಗುಂಡು ಹಾರಿಸಿದೆವು. ಹೀಗಾಗಿ ಅವರು ಸ್ಥಳದಲ್ಲೇ ಸಾವನ್ನಪ್ಪಿದರು. ದಾಬೋಲ್ಕರ್ ಬೆಳಗ್ಗೆ ವಾಕಿಂಗ್ ಹೋದಾಗ ತಡೆದು ತಲೆಗೆ ಗುಂಡು ಹಾರಿಸಿದೆವು

ದಾಬೋಲ್ಕರ್ ಹತ್ಯೆಗೆ ದೇಸಿ ಬಂದೂಕು ಬಳಸಿದ್ದು, ತಲೆಗೆ ಹಿಂದಿನಿಂದ ಒಂದು ಬಾರಿ ಗುಂಡು ಹಾರಿಸಿದ ತಕ್ಷಣ ದಾಬೋಲ್ಕರ್ ಸೇತುವೆ ಮೇಲೆ ಬಿದ್ದರು. ಇನ್ನೊಂದು ಗುಂಡನ್ನು ಬಲದಿಂದ ಹೊಡೆಯಲೆತ್ನಿಸಿದೆ ಆದರೆ, ಅದು ಸಿಲುಕಿಕೊಂಡಿತು. ನಂತರ ಗುಂಡು ತೆಗೆದು ರಕ್ತದ ಮಡುವಿನಲ್ಲಿದ್ದ ದಾಬೋಲ್ಕರ್ ಮುಖದ ಬಲಗಣ್ಣಿನ ಭಾಗಕ್ಕೆ ಹೊಡೆದೆನು. ನಂತರ ಬಂದ ಎರಡನೇ ಶೂಟರ್ ಸಚಿನ್ ಅಂಡುರೆ ಕೂಡ ಗುಂಡು ಹಾರಿಸಿದ.

ತಪ್ಪೊಪ್ಪಿಗೆ ಪ್ರಕಾರ ವೀರೇಂದ್ರ ತಾವ್ಡೆ ಅವರು ಕಲಾಸ್ಕರ್‍ನನ್ನು ಅಮೋಲ್ ಕಾಳೆಗೆ ಪರಿಚಯಿಸಿದ್ದಾನೆ. ಅಮೋಲ್ ಕಾಳೆಯನ್ನು ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿಸಲಾಗಿದೆ. ಅಲ್ಲದೆ, ಗೌರಿ ಲಂಕೇಶ್ ಹತ್ಯೆ ಯೋಜನೆ ರೂಪಿಸಲು ನಡೆದ ಸಭೆಯಲ್ಲಿ ಭಾಗವಹಿಸಿದ್ದೆ.

2016ರ ಆಗಸ್ಟ್‍ನಲ್ಲಿ ಬೆಳಗಾವಿಯಲ್ಲಿ ಹಿಂದೂ ಧರ್ಮದ ವಿರುದ್ಧ ಕೆಲಸ ಮಾಡುವ ಜನರನ್ನು ಹೆಸರಿಸಲಾಗಿತ್ತು. ಈ ಸಭೆಯಲ್ಲಿ ಗೌರಿ ಲಂಕೇಶ್ ಹೆಸರೂ ಸಹ ಕೇಳಿಬಂದಿತ್ತು. ಅಲ್ಲಿಯೇ ಗೌರಿ ಲಂಕೇಶ್ ಅವರನ್ನು ಕೊಲೆ ಮಾಡುವ ನಿರ್ಧಾರ ಕೈಗೊಳ್ಳಲಾಯಿತು. ನಂತರ 2017ರ ಆಗಸ್ಟ್‍ನಲ್ಲಿ ನಡೆದ ಸಭೆಯಲ್ಲಿ ಯೋಜನೆಗಳನ್ನು ಅಂತಿಮಗೊಳಿಸಿ, ಜವಾಬ್ದಾರಿಗಳನ್ನು ಹಸ್ತಾಂತರಿಸಲಾಯಿತು. ಸಭೆ ನಡೆದು ಒಂದು ತಿಂಗಳ ನಂತರ ಗೌರಿ ಲಂಕೇಶ್ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು ಎಂದು ಹೇಳಿಕೆ ನೀಡಿದ್ದಾನೆ ಎಂದು ವರದಿಯಾಗಿದೆ.

ವಿಚಾರಣೆ ವೇಳೆ ಇನ್ನೊಂದು ಭಯಾನಕ ಅಂಶವನ್ನು ಕಲಾಸ್ಕರ್ ಬಹಿರಂಗಪಡಿಸಿದ್ದು, ಬಾಂಬೆ ಹೈ ಕೋರ್ಟ್‍ನ ನಿವೃತ್ತ ನ್ಯಾಯಾಧೀಶ ನ್ಯಾ.ಬಿ.ಜಿ.ಭೋಸ್ಲೆ ಪಾಟೀಲ್ ಅವರನ್ನು ಗುರಿಯಾಗಿಸುವ ಯೋಜನೆ ಇದೆ ಎಂದು ತಿಳಿಸಿದ್ದಾನೆ.

Comments

Leave a Reply

Your email address will not be published. Required fields are marked *