ಐ ಫೋನ್ ವಿಚಾರಕ್ಕಾಗಿ ಯುವಕನ ಮೇಲೆ ಸ್ನೇಹಿತರಿಂದಲೇ ಮಾರಣಾಂತಿಕ ಹಲ್ಲೆ

ಬೆಂಗಳೂರು: ಐ ಫೋನ್ ಹಾಗೂ ಹಣದ ವಿಚಾರಕ್ಕಾಗಿ ಯುವಕನ ಮೇಲೆ ಸ್ನೇಹಿತರೇ ಲಾಂಗ್ ಮತ್ತು ಡ್ರಾಗರ್ ನಿಂದ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಬೆಂಗಳೂರು ಹೊರವಲಯ ಬನ್ನೇರುಘಟ್ಟದಲ್ಲಿ ನಡೆದಿದೆ.

ಆನೇಕಲ್‍ನ ಮುತ್ತಗಟ್ಟಿ ನಿವಾಸಿ ಸಂತೋಷ್ ಹಲ್ಲೆಗೆ ಒಳಗಾದ ಯುವಕ. ಬನ್ನೇರುಘಟ್ಟದ ಚಂಪಕಧಾಮಸ್ವಾಮಿ ದೇವಾಲಯದ ರಸ್ತೆಯಲ್ಲಿ ಘಟನೆ ನಡೆದಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಂತೋಷ್‍ನನ್ನು ಸಮೀಪ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಸಂತೋಷ್ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ.

ಸಂತೋಷ್ ಇಂದು ಸ್ನೇಹಿತರ ಜೊತೆ ಹುಳಿಮಾವು ಬಳಿ ಸಿನಿಮಾ ನೋಡಲು ಹೋಗುತ್ತಿದ್ದ. ಈ ವೇಳೆ ಹಾರಗದ್ದೆ ಸಮೀಪ ಐ ಫೋನ್ ಹಾಗೂ ಹಣದ ವಿಚಾರಕ್ಕಾಗಿ ಗಲಾಟೆಯಾಗಿದೆ. ಇದರಿಂದಾಗಿ ಅಲ್ಲಿಂದ ಸಂತೋಷ್ ಪರಾರಿಯಾಗಿದ್ದ. ಆದರೆ ಕಾರಿನಲ್ಲಿ ಬಂದ ಆರು ಜನ ಯುವಕರು ಬನ್ನೇರುಘಟ್ಟದ ಚಂಪಕಧಾಮಸ್ವಾಮಿ ದೇವಾಲಯದ ರಸ್ತೆಯಲ್ಲಿ ಸಂತೋಷ್‍ನನ್ನು ಹಿಡಿದು ಮತ್ತೆ ಜಗಳ ಮಾಡಿದ್ದಾರೆ.

ಮಾತಿಗೆ ಮಾತು ಬೆಳೆದು ಗಲಾಟೆ ಜೋರಾಗುತ್ತಿದ್ದಂತೆ ಯುವಕರ ತಂಡವು ಲಾಂಗ್ ಮತ್ತು ಡ್ರಾಗರ್ ನಿಂದ ಸಂತೋಷ್ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಸಂತೋಷ್‍ನನ್ನು ಸ್ಥಳೀಯರು ಚಂದಾಪುರ ಬಳಿಯ ಸ್ಪರ್ಶ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಬನ್ನೇರುಘಟ್ಟ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.

Comments

Leave a Reply

Your email address will not be published. Required fields are marked *