ಹೃದಯ, ಗನ್ ಯಾರ ಹತ್ತಿರ ಇದೆಯೆಂದು ಬಲ್ಲೆ: ಎಚ್.ವಿಶ್ವನಾಥ್

ಮುಂಬೈ: ಯಾವುದೇ ಕಾರಣಕ್ಕೂ ನಾವು ನಿಮ್ಮನ್ನು ಭೇಟಿ ಮಾಡುವುದಕ್ಕೆ ಇಷ್ಟ ಪಡುವುದಿಲ್ಲ. ಯಾರ ಹತ್ತಿರ ಹೃದಯ ಇದೆ, ಯಾರ ಹತ್ತಿರ ಗನ್ ಇದೆ ಎಂದು 40 ವರ್ಷಗಳಿಂದ ನನಗೂ ಗೊತ್ತಿದೆ ಎಂದು ಹೇಳುವ ಮೂಲಕ ಜೆಡಿಎಸ್ ನಾಯಕ ಎಚ್. ವಿಶ್ವನಾಥ್ ಅವರು ಸಚಿವ ಡಿ.ಕೆ ಶಿವಕುಮಾರ್ ಅವರನ್ನು ಭೇಟಿಯಾಗಲು ನಿರಾಕರಿಸಿದ್ದಾರೆ.

ತಾವು ವಾಸ್ತವ್ಯ ಇರುವ ಹೋಟೆಲ್ ನಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾವು ಬಹಳ ದೂರ ಬಂದು ಬಿಟ್ಟಿದ್ದೇವೆ. ಯಾರನ್ನು ಭೇಟಿ ಮಾಡೋದಾಗಲಿ, ಅವರ ಜೊತೆ ಚರ್ಚೆ, ಮಾತುಕತೆ ಮಾಡೋದಾಗಲಿ ಸಾಧ್ಯವಿಲ್ಲ ಎಂದು ಪ್ರತಿಕ್ರಿಯಿಸಿದರು. ಬಳಿಕ ನಮ್ಮ ಸ್ನೇಹಿತರು ಪಾಪ ಅಷ್ಟು ದೂರದಿಂದ ಬಂದಿದ್ದೀರಿ. ನೀವು ವಾಪಸ್ ಹೋಗೋದು ಒಳ್ಳೆಯದು. ಯಾವುದೇ ಕಾರಣಕ್ಕೂ ನಾವು ನಿಮ್ಮನ್ನ ಭೇಟಿ ಮಾಡುವುದಕ್ಕೆ ಇಷ್ಟ ಪಡುವುದಿಲ್ಲ. ಯಾರ ಹತ್ತಿರ ಹೃದಯ ಇದೆ, ಯಾರ ಹತ್ತಿರ ಗನ್ ಇದೆ ಎಂದು 40 ವರ್ಷಗಳಿಂದ ನಾನೂ ಬಲ್ಲೆ. ಕರ್ನಾಟಕದಿಂದ ಬಂದಿರುವ ಯಾರನ್ನೂ ಭೇಟಿಯಾಗುವುದಕ್ಕೆ ನಾವು ಇಷ್ಟಪಡಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅವರೆಲ್ಲಾ ನಮ್ಮ ಸಹೋದರರು ಎಂಬ ಶಾಸಕ ಶಿವಲಿಂಗೇಗೌಡ ಹೇಳಿಕೆ ವಿಚಾರವಾಗಿ ಮಾತನಾಡಿ, ಇದೇ ತಿಂಗಳ 15ರ ನಂತರ ಸಹೋದರರು ಇನ್ನೂ ಉಳಿದ ವಿಚಾರಗಳ ಬಗ್ಗೆ ಮಾತನಾಡೋಣ. ನಮ್ಮ ಪಾಡಿಗೆ ನಮ್ಮನ್ನು ಬಿಟ್ಟು ಬಿಡಿ. ನಾವು ಬಹಳ ದೂರ ಕ್ರಮಿಸಿಬಿಟ್ಟಿದ್ದೇವೆ. ಈಗ ಕೊನೇ ಘಟ್ಟದಲ್ಲಿ ಬಂದು ಮನವೊಲಿಸಬೇಕೆಂದರೆ ಯಾವುದೇ ಕಾರಣಕ್ಕೂ ಆಗಲ್ಲ. ನಾವು ತೆಗೆದುಕೊಂಡ ನಿರ್ಧಾರ ನಿಶ್ಚಲ ಹಾಗೂ ಬಹಳ ಕಠಿಣ ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲದೆ ಬಿಜೆಪಿಯವರಿಗೂ ನಮಗೂ ಯಾವುದೇ ಸಂಬಂಧ ಇಲ್ಲ. ನಾವು ನಮ್ಮ ಸ್ವಂತ ಇಚ್ಛೆಯ ಮೇರೆಗೆ ಇಲ್ಲಿಗೆ ಬಂದಿದ್ದೇವೆ ಎಂದು ಕಾಂಗ್ರೆಸ್, ಜೆಡಿಎಸ್ ನಾಯಕರ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.

Comments

Leave a Reply

Your email address will not be published. Required fields are marked *