ನನಗೆ ಯಾವುದೇ ಹುದ್ದೆ ಬೇಡ, ಎಚ್‍ಡಿಡಿ ಭೇಟಿ ಬಳಿಕ ರಾಮಲಿಂಗಾರೆಡ್ಡಿ ಸ್ಪಷ್ಟನೆ

ಬೆಂಗಳೂರು: ನನಗೆ ಯಾವುದೇ ಹುದ್ದೆ ಬೇಡ, ಡಿಸಿಎಂ ಹುದ್ದೆಯೂ ಬೇಡ, ಔಪಚಾರಿಕವಾಗಿ ಜೆಡಿಎಸ್ ವರಿಷ್ಠ ದೇವೇಗೌಡರನ್ನು ಭೇಟಿ ಮಾಡಿದ್ದೆಯಷ್ಟೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದರು.

ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರನ್ನು ಭೇಟಿ ಮಾಡಿದ ನಂತರ ಮಾತನಾಡಿದ ಅವರು, ಔಪಚಾರಿಕವಾಗಿ ಭೇಟಿಯಾಗಿದ್ದೆ ಅಷ್ಟೇ, ಅತೃಪ್ತ ಶಾಸಕರ ಮನವೊಲಿಕೆ ಕುರಿತು ಯಾವುದೇ ರೀತಿಯ ಚರ್ಚೆ ನಡೆದಿಲ್ಲ. ನಾನು ರಾಜೀನಾಮೆ ಹಿಂಪಡೆಯುವ ನಿರ್ಧಾರ ಮಾಡಿದಾಗ ಅತೃಪ್ತ ಶಾಸಕರನ್ನು ಸಂಪರ್ಕಿಸಲು ಪ್ರಯತ್ನಿಸಿದೆ. ಆದರೆ, ಅವರು ಸಂಪರ್ಕಕ್ಕೆ ಸಿಗಲಿಲ್ಲ ಎಂದು ಇದೇ ವೇಳೆ ತಿಳಿಸಿದರು.

ಎಸ್.ಟಿ.ಸೋಮಶೇಖರ್ ಹೇಳಿದ್ದು ನಿಜ:
ಅತೃಪ್ತ ಶಾಸಕ ಸೋಮಶೇಖರ್ ಅವರು ನನ್ನ ಬಗ್ಗೆ ಹೇಳಿದ್ದು ನಿಜ. ನಾನು, ಸೋಮಶೇಖರ್ ಹಾಗೂ ವಿಶ್ವನಾಥ್ ಅವರು ಮೂವರೂ ಸೇರಿ ಮಾತನಾಡಿಕೊಂಡು ಯಾವುದೇ ಒತ್ತಡ ಬಂದರೂ, ನಮ್ಮ ರಾಜೀನಾಮೆಯನ್ನು ವಾಪಸ್ ಪಡೆಯಬಾರದು ಎಂಬ ತಿರ್ಮಾನಕ್ಕೆ ಬಂದಿದ್ದೆವು. ಆದರೆ ಅಷ್ಟು ಜನ ಮುಖಂಡರು ಬಂದು ಒತ್ತಡ ಹಾಕಿದ್ದರಿಂದ ರಾಜೀನಾಮೆ ಹಿಂಪಡೆಯಬೇಕಾಯಿತು. ಭಾನುವಾರ ರಾಜೀನಾಮೆ ವಾಪಸ್ ಪಡೆಯಬೇಕೆಂದು ನಿರ್ಧಾರ ಮಾಡಿದ ನಂತರ ಸೋಮವಾರ, ಮಂಗಳವಾರ ಮಾತನಾಡಲು ಯತ್ನಿಸಿದೆ. ಆದರೆ, ಅವರು ಸಂಪರ್ಕಕ್ಕೆ ಸಿಗಲಿಲ್ಲ ಎಂದು ರಾಮಲಿಂಗಾರೆಡ್ಡಿ ಹೇಳಿದರು.

ನನಗೆ ಯಾವುದೇ ಹುದ್ದೆ ಬೇಡ, ಡಿಸಿಎಂ ಹುದ್ದೆಯ ಆಕಾಂಕ್ಷಿಗಳು ಹೆಚ್ಚಿದ್ದಾರೆ. ಹೀಗಿರುವಾಗ ನನಗೆ ಸಿಗಲು ಹೇಗೆ ಸಾಧ್ಯ. ಯಾವುದೇ ಹುದ್ದೆಯ ಆಕಾಂಕ್ಷಿ ನಾನಲ್ಲ. ಅವರೂ ನೀಡಿದರೂ ನನಗೆ ಬೇಡ. ಹುದ್ದೆಗಾಗಿ ನಾನು ರಾಜೀನಾಮೆ ನೀಡಿರಲಿಲ್ಲ ಎಂದು ಸ್ಪಷ್ಟಪಡಿಸಿದರು.

ಎಸ್.ಟಿ.ಸೋಮಶೇಖರ್ ಹೇಳಿದ್ದೇನು?
ರಾಮಲಿಂಗಾರೆಡ್ಡಿ ಅವರು ಶಾಸಕ ಸ್ಥಾನಕ್ಕೆ ನೀಡಿದ ರಾಜೀನಾಮೆಯನ್ನು ಹಿಂಪಡೆದ ನಂತರ ಅತೃಪ್ತ ಶಾಸಕ ಎಸ್.ಟಿ.ಸೋಮಶೇಖರ್ ಮಾತನಾಡಿ, ನಾವು ರಾಮಲಿಂಗಾರೆಡ್ಡಿ ಅವರು ರಾಜೀನಾಮೆ ಹಿಂಪಡೆಯುತ್ತಾರೆ ಎಂದು ಊಹಿಸಿರಲಿಲ್ಲ. ರಾಜೀನಾಮೆ ಹಿಂಪಡೆಯುವ ಮೂಲಕ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಆದರೆ, ನಾವು(ಉಳಿದ ಅತೃಪ್ತ ಶಾಸಕರು) ಎಂತಹ ಒತ್ತಡ ಹೇರಿದರೂ ರಾಜೀನಾಮೆ ಹಿಂಪಡೆಯುವ ಪ್ರಶ್ನೆಯೇ ಇಲ್ಲ. ನಮ್ಮ ನಿರ್ಧಾರಕ್ಕೆ ನಾವು ಎಂದಿಗೂ ಬದ್ಧರಾಗಿರುತ್ತೇವೆ. ನಾವು ನಾಲ್ಕೂ ಜನ (ಎಚ್.ವಿಶ್ವನಾಥ್, ಮುನಿರತ್ನ, ಸೋಮಶೇಖರ್, ರಾಮಲಿಂಗಾರೆಡ್ಡಿ) ಮತನಾಡಿಕೊಂಡು ರಾಜೀನಾಮೆ ನೀಡಿದ್ದೆವು. ಇದರಲ್ಲಿ ರಾಮಲಿಂಗಾರೆಡ್ಡಿ ರಾಜೀನಾಮೆ ಹಿಂಪಡೆದಿದ್ದಾರೆ. ನಾವು ಮೂವರೂ ಯಾವುದೇ ಕಾರಣಕ್ಕೂ ರಾಜೀನಾಮೆ ಹಿಂಪಡೆಯುವುದಿಲ್ಲ ಎಂದು ಎಸ್.ಟಿ.ಸೋಮಶೇಖರ್ ಸ್ಪಷ್ಟಪಡಿಸಿದ್ದರು.

Comments

Leave a Reply

Your email address will not be published. Required fields are marked *