ನಮ್ಮ ಅಧಿಕಾರಿಗಳ ಹೇಳಿಕೆ ಮೇಲೆ ನನಗೆ ನಂಬಿಕೆ ಇಲ್ಲ: ಬಸವರಾಜ್ ಬೊಮ್ಮಾಯಿ

ಬೆಂಗಳೂರು: ನಮ್ಮ ಅಧಿಕಾರಿಗಳ ಹೇಳಿಕೆ ಮೇಲೆ ನನಗೆ ನಂಬಿಕೆ ಇಲ್ಲ. ಅದಕ್ಕೆ ಸ್ವತಃ ನಾನೇ ಪ್ರಕರಣದ ಫೈಲ್‍ಗಳನ್ನು ತರಿಸಿ ಪರಿಶೀಲಿಸುತ್ತಿದ್ದೇನೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದ ಕಾಶ್ಮೀರಿ ವಿದ್ಯಾರ್ಥಿಗಳ ಪ್ರಕರಣದ ಕುರಿತು ಪ್ರತಿಕ್ರಿಯಿಸಿದರು. ಪೊಲೀಸರಿಗೆ ಯಾರು ಸೆಲ್ಫ್ ಬಾಂಡ್ ಕೊಟ್ಟಿದ್ದಾರೆ ಎನ್ನುವ ಬಗ್ಗೆ ಸ್ಪಷ್ಟ ಮಾಡಿತಿ ಇಲ್ಲ. ಆದರೆ ಈ ಬಗ್ಗೆ ತನಿಖೆ ನಡೆಯುತ್ತಿದೆ. ಈ ಪ್ರಕರಣ ಸಂಬಂಧ ಎಲ್ಲಾ ವರದಿಯನ್ನು ನನಗೆ ನೀಡಲು ಅಧಿಕಾರಿಗಳ ಬಳಿ ಸೂಚಿಸಿದ್ದೇನೆ. ನಾಳೆ ನನಗೆ ಆ ವರದಿ ಸಿಗುತ್ತದೆ ಎಂದು ತಿಳಿಸಿದರು.

ಈ ಬಗ್ಗೆ ಪೊಲೀಸರಿಗೂ ಸ್ಪಷ್ಟ ಮಾಹಿತಿ ಇಲ್ಲ. ಹೀಗಾಗಿ ಒರಿಜಿನಲ್ ಫೈಲ್ ಕಾಪಿ ತರಿಸಿಕೊಳ್ಳುತ್ತಿದ್ದೇನೆ. ಅದನ್ನ ನಾನೇ ವಿಚಾರಣೆ ಮಾಡಿ ಸ್ಪಷ್ಟೀಕರಣ ಕೊಡುತ್ತಿದ್ದೇನೆ. ದೇಶದ್ರೋಹಿ ವಿಚಾರದಲ್ಲಿ ಯಾರನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಅವರು ಯಾರೇ ಇದ್ದರೂ ಕೂಡ. ಯಾರೇ ಸಹಾಯ ಮಾಡಿದರು ಕೂಡ ಅವರನ್ನು ಬಗ್ಗು ಬಡಿಯುತ್ತೇವೆ. ಈ ವಿಚಾರದಲ್ಲಿ ಹೆಚ್ಚಿನ ಮಾಹಿತಿ ಸಿಕ್ಕ ಮೇಲೆ ಎಲ್ಲರಿಗೂ ಸ್ಪಷ್ಟೀಕರಣ ನೀಡುತ್ತೇನೆ. ಅದರಲ್ಲಿ ಮುಚ್ಚುಮರೆ ಮಾಡುವ ಪ್ರಶ್ನೆಯೇ ಇಲ್ಲ ಎಂದರು.

ನಮ್ಮ ಅಧಿಕಾರಿಗಳ ಹೇಳಿಕೆ ಮೇಲೆ ನಂಬಿಕೆಯಿಲ್ಲ. ನನಗೆ ಆಫೀಶಿಯಲ್ ಮಾಹಿತಿ ಇಲ್ಲ. ಹೀಗಾಗಿ ನಾಳೆ ಒರಿಜಿನಲ್ ಕೇಸ್ ಫೈಲ್‍ನ್ನ ತರಿಸ್ತಿದ್ದೇನೆ. ನಾಳೆ ನನ್ನ ಮುಂದೆ ವರದಿ ಬರುತ್ತೆ ಎಂದು ಹೇಳಿದರು.

ಅಷ್ಟೇ ಅಲ್ಲದೇ ಅಮುಲ್ಯ ಲಿಯೋನಾ ಮತ್ತು ಆರುದ್ರಾ ನಾರಾಯನ್ ಹೇಳಿಕೆ ಬಗ್ಗೆ ಮಾತನಾಡಿ, ದೇಶದ್ರೋಹ ಪ್ರಕರಣದಲ್ಲಿ ಭಾಗಿಯಾದವರನ್ನು ಬಗ್ಗು ಬಡಿತೀವಿ. ರಾಷ್ಟ್ರದ್ರೋಹ ಬೆಳೆಸುವ ಕೆಲಸ, ಕೆಲ ಸಂಘಟನೆಗಳು ಮಾಡುತ್ತಿವೆ. ಹೆಣ್ಣುಮಕ್ಕಳು, ವಿದ್ಯಾರ್ಥಿಗಳು, ಯುವಕರಿಂದ ದೇಶದ್ರೋಹಿ ಹೇಳಿಕೆಗಳನ್ನು ಹೇಳಿಸುತ್ತಿದ್ದಾರೆ. ಇದರ ಹಿಂದೆ ಹಲವಾರು ಶಕ್ತಿಗಳ ಕೈವಾಡ ಇದೆ ಎಂದು ತಿಳಿಸಿದರು.

ಇಲ್ಲಿ ಪಾಕಿಸ್ತಾನಕ್ಕೆ ಜಿಂದಾಬಾದ್ ಎನ್ನುವವರು ಪಾಕಿಗೆ ಹೋಗಿ ಹಿಂದುಸ್ತಾನ್ ಜಿಂದಾಬಾದ್ ಎಂದು ಹೇಳಿ ಜೀವಂತವಾಗಿ ವಾಪಸ್ಸು ಬರಲಿ ನೋಡೋಣ. ತಾಕತ್ತಿದೆಯಾ ಅವರಿಗೆ ಕೆಲವು ರಾಜಕೀಯ ಪಕ್ಷಗಳು ದೇಶದ್ರೋಹಿ ಹೇಳಿಕೆಗಳು ಕೊಟ್ಟವರ ಪರ ನಿಲ್ಲುತ್ತಿವೆ. ದೇಶದ್ರೋಹ ಕೆಲಸದಲ್ಲಿ ಭಾಗಿಯಾಗದಂತೆ ವಿದ್ಯಾಸಂಸ್ಥೆ, ಯೂನಿವರ್ಸಿಟಿಗಳಿಗೆ ಸೂಚನೆ ನೀಡಲಾಗಿದೆ. ಯುನಿವರ್ಸಿಟಿ, ವಿದ್ಯಾಸಂಸ್ಥೆಗಳು ವಿದ್ಯೆಯನ್ನ ಪ್ರಸಾರ ಮಾಡಲಿ, ದೇಶದ್ರೋಹ ತಾಣಗಳಾಗದಿರಲಿ. ಕಾರ್ಯಕ್ರಮಗಳಲ್ಲಿ ಈ ರೀತಿಯ ಹೇಳಿಕೆಗಳು ಕಂಡು ಬಂದರೆ ಕಾರ್ಯಕ್ರಮದ ಆಯೋಜಕರೇ ನೇರ ಹೊಣೆಗಾರರಾಗುತ್ತಾರೆ ಎಂದು ಖಡಕ್ ಆಗಿ ಪ್ರತಿಕ್ರಿಯಿಸಿದರು.

Comments

Leave a Reply

Your email address will not be published. Required fields are marked *