ನಿನ್ನೆಯಿಂದ ಪತಿಯನ್ನು ಕಾಯ್ತಿದ್ದೇನೆ, ಇನ್ನು ಬಂದಿಲ್ಲ: ಯೋಧನ ಪತ್ನಿಯ ಕಣ್ಣೀರು

ಮಂಡ್ಯ: ನಿನ್ನೆಯಿಂದ ನನ್ನ ಪತಿಯನ್ನು ಕರೆದುಕೊಂಡು ಬರುತ್ತೀನಿ ಅಂತಾ ಎಲ್ಲರೂ ಹೇಳುತ್ತಿದ್ದಾರೆ. ಇನ್ನು ನಮ್ಮ ಮನೆಯವರು ಬಂದಿಲ್ಲ ಎಂದು ಯೋಧ ಗುರು ಅವರ ಪತ್ನಿ ಕಲಾವತಿ ಕಣ್ಣೀರು ಹಾಕುತ್ತಿದ್ದಾರೆ.

ಜೀವನದಲ್ಲಿ ಇಟ್ಟುಕೊಂಡಿದ್ದ ಸೇನೆ ಸೇರುವ ಗುರಿ ಸಾಧಿಸಿದ ಮೇಲೆ ಗುರು 10 ತಿಂಗಳ ಹಿಂದಷ್ಟೇ ಮನೆ ಕಟ್ಟಿಸಿದ್ದರು. ಎರಡು ಅಂತಸ್ತಿನ ಹೊಸ ಮನೆಯ ಗೃಹಪ್ರವೇಶ ಬಳಿಕ 8 ತಿಂಗಳ ಹಿಂದಷ್ಟೇ ಸೋದರ ಮಾವನ ಮಗಳು ಕಲಾವತಿಯನ್ನು ವರಿಸಿದ್ದರು. ಗುರು ವೀರಮರಣ ಅಪ್ಪಿದ ಸುದ್ದಿ ತಿಳಿಯುತ್ತಲೇ ಗ್ರಾಮದಲ್ಲಿ ಸೂತಕ ಕವಿದೆ. ರಾಜಕೀಯ ಗಣ್ಯರು ಸೇರಿದಂತೆ ಎಲ್ಲರು ಬಂದು ಗುರು ಕುಟುಂಬಸ್ಥರಿಗೆ ಸಾಂತ್ವಾನ ಹೇಳುತ್ತಿದ್ದಾರೆ.

ದೆಹಲಿಯ ಪಾಲಂ ವಿಮಾನ ನಿಲ್ದಾಣದಿಂದ ಗುರು ಪಾರ್ಥಿವ ಶರೀರ ಏರ್ ಲಿಫ್ಟ್ ಆಗಿದೆ. ಒಂದೇ ವಿಮಾನದಲ್ಲಿದೆ ನಾಲ್ವರು ಯೋಧರ ಪಾರ್ಥಿವ ಶರೀರ ಕಳುಹಿಸಲಾಗಿದ್ದು, 11.30ಕ್ಕೆ ತಿರುಚ್ಚಿ, 12.30ಕ್ಕೆ ಮಧುರೈ, 2.15ಕ್ಕೆ ಕ್ಯಾಲಿಕಟ್‍ನಲ್ಲಿ ಪಾರ್ಥಿವ ಶರೀರ ಹಸ್ತಾಂತರ ಮಾಡಲಾಗುವುದು. ಮಧ್ಯಾಹ್ನ 3.40ಕ್ಕೆ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಪಾರ್ಥಿವ ಶರೀರ ಆಗಮನವಾಗಲಿದೆ. ಬೆಂಗಳೂರು ವಿಮಾನ ನಿಲ್ದಾಣದಿಂದ ರಸ್ತೆ ಮೂಲಕ ಮಂಡ್ಯಕ್ಕೆ ರವಾನೆ ಆಗಲಿದೆ.

ಯೋಧ ಗುರು ಸ್ವಗ್ರಾಮ ಗುಡಿಗೆರೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಅಂತಿಮ ದರ್ಶನ ಬಳಿಕ ಅಂತ್ಯಕ್ರಿಯೆ ಸ್ಥಳದವರೆಗೆ ಮೆರವಣಿಗೆ ನಡೆಸಲು ಜಿಲ್ಲಾಡಳಿತ ನಿರ್ಧರಿಸಿದೆ. ಸಂಜೆ ವೇಳೆಗೆ ಮದ್ದೂರು-ಮಳವಳ್ಳಿ ರಸ್ತೆಯ ಪಕ್ಕ ಕೆಎಂ ದೊಡ್ಡಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Comments

Leave a Reply

Your email address will not be published. Required fields are marked *