ನಾನೇ ಮುಂದಿನ ಮುಖ್ಯಮಂತ್ರಿ – ಎಲೆಕ್ಷನ್‍ಗೂ ಮೊದಲೇ ಮಂತ್ರಿಯನ್ನು ಘೋಷಿಸಿದ ಬಿಎಸ್‍ವೈ

ವಿಜಯಪುರ: ನಾನೇ ಮುಂದಿನ ಸಿಎಂ ಎಂದು ವಿಶ್ವಾಸ ವ್ಯಕ್ತಪಡಿಸಿ ಚುನಾವಣಾ ಪ್ರಚಾರ ನಡೆಸುತ್ತಿರುವ ಬಿಎಸ್ ಯಡಿಯೂರಪ್ಪ ಇಂದು ಇನ್ನು ಒಂದು ಹೆಜ್ಜೆ ಮುಂಡಿಟ್ಟು ಬಸವರಾಜ್ ಯತ್ನಾಳ್ ಅವರಿಗೆ ಮಂತ್ರಿ ಸ್ಥಾನ ನೀಡುವುದಾಗಿ ಘೋಷಿಸಿದ್ದಾರೆ.

ಜಿಲ್ಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನೇ ಮುಂದಿನ ಮುಂಖ್ಯಮಂತ್ರಿ ಆಗಲಿದ್ದು, ಮೇ 17 ರ ಗುರುವಾರ ನನಗೆ ಶುಭದಿನ ಪ್ರಧಾನಿಗಳ ಸಮ್ಮುಖದಲ್ಲಿ ನಾನು ಸಿಎಂ ಆಗಲಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮೊದಲು ಸಿದ್ದರಾಮಯ್ಯ ಅವರಿಗೆ ಯೋಗ್ಯತೆ ಇದ್ದರೆ ಚಾಮುಂಡೇಶ್ವರಿಯಲ್ಲಿ ಮಾತ್ರ ನಿಲ್ಲಬೇಕಿತ್ತು. ಆದರೆ, ಬಾದಾಮಿಗೆ ಯಾಕೆ ಬಂದು ಚುನಾವಣೆಗೆ ನಿಂತಿದ್ದಾರೆ. ಚಾಮುಂಡೇಶ್ವರಿ ಹಾಗೂ ಬಾದಾಮಿ ಎರಡೂ ಕ್ಷೇತ್ರದಲ್ಲಿ ಸಿದ್ದರಾಮಯ್ಯಗೆ ಸೋಲು ಖಚಿತ ಎಂದು ಹೇಳಿದ್ದಾರೆ.

ನಾನು ಗೆಲ್ಲುತ್ತೇನೆ, ನಾನೇ ದಂಡನಾಯಕ ಎಂದು ಸಿದ್ದರಾಮಯ್ಯ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿದ ಯಡಿಯೂರಪ್ಪ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಹಾಗೂ ಡಾ. ಜಿ. ಪರಮೇಶ್ವರ್ ಒಂದೇ ವೇದಿಕೆಯಲ್ಲಿ ಕುಳಿತುಕೊಳ್ಳಲಿ. ಆಮೇಲೆ ಗೆಲುವಿನ ಕುರಿತು ಮಾತನಾಡಲಿ. ಅವರು ಇನ್ನು ಆರು ದಿನದಲ್ಲಿ ಮನೆಗೆ ಹೋಗುತ್ತಾರೆ ಎಂದು ಹೇಳಿದರು.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ವಿದೂಷಕರಿದ್ದಂತೆ ಎಂಬ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರ ಮಾತಿಗೆ ತಿರುಗೇಟು ನೀಡಿದ ಬಿಎಸ್‍ವೈ ಈ ಬಾರಿ 20 ಸ್ಥಾನದಲ್ಲಿಯೂ ಗೆಲ್ಲದವರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದರು.

ತಮ್ಮ ಭಾಷಣ ಉದಕ್ಕೂ ಆಶ್ವಾಸನೆಗಳನ್ನು ತಿಳಿಸಿದ ಬಿಎಸ್‍ವೈ, ಅಧಿಕಾರ ವಹಿಸಿಕೊಂಡ 24 ಗಂಟೆಯಲ್ಲಿ ರಾಷ್ಟ್ರೀಕೃತ ಬ್ಯಾಂಕ್ ನ 1 ಲಕ್ಷ ಸಾಲ ಮನ್ನಾ, ಕೃಷಿ ಉತ್ತೇಜನ, ಕೆರೆಗಳ ಪುನಶ್ಚೇತನಕ್ಕೆ ರೈತ ಕಲ್ಯಾಣ ಯೋಜನೆ, ಹೈನುಗಾರಿಕೆಗೆ ಉತ್ತೇಜನ, ಪ್ರವಾಸೋದ್ಯಮಕ್ಕೆ ಆದ್ಯತೆ, 1.5 ಲಕ್ಷ ಕೋಟಿ ನೀರಾವರಿಗೆ ಮೀಸಲಿಡುವುದಾಗಿ ತಿಳಿಸಿದರು.

Comments

Leave a Reply

Your email address will not be published. Required fields are marked *