ಮದ್ವೆ ಮುಹೂರ್ತಕ್ಕೆ ಕೆಲವೇ ನಿಮಿಷ ಇರುವಾಗ ಮೇಕಪ್ ರೂಮಿನಲ್ಲೇ ಟೆಕ್ಕಿ ನೇಣಿಗೆ ಶರಣು

ಹೈದರಾಬಾದ್: ಮದುವೆ ಮುಹೂರ್ತಕ್ಕೆ ಕೆಲವೇ ನಿಮಿಷ ಇರುವಾಗಲೇ ಟೆಕ್ಕಿಯೊಬ್ಬ ಕಲ್ಯಾಣಮಂಟಪದಲ್ಲಿ ನೇಣಿಗೆ ಶರಣಾದ ಘಟನೆ ಹೈದರಾಬಾದ್‍ನ ಹೊರವಲಯದಲ್ಲಿ ನಡೆದಿದೆ.

ಹೈದರಾಬಾದ್‍ನ ದಿಲ್ಖುಶ್‍ನಗರದ ನಿವಾಸಿ ಎನ್.ಎಸ್.ಸಂದೀಪ್ ನೇಣಿಗೆ ಶರಣಾದ ಟೆಕ್ಕಿ. ಮೆಡ್ಚಲ್ ಜಿಲ್ಲೆಯ ಕೊಂಪಲ್ಲಿ ನಗರದ ಕಲ್ಯಾಣಮಂಟದಲ್ಲಿ ಘಟನೆ ನಡೆದಿದ್ದು, ಸಂದೀಪ್ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ಮದ್ವೆ ದಿನ ತಂದೆಯ ಸಾವು-ಅಪ್ಪನ ಸಾವಿನ ಸುದ್ದಿ ಬಚ್ಚಿಟ್ಟು ಮಗಳ ವಿವಾಹ

ಸಾಫ್ಟ್‌ವೇರ್‌ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಸಂದೀಪ್‍ಗೆ ಶನಿವಾರ ಮದುವೆ ನಿಶ್ಚಿಯವಾಗಿತ್ತು. ಕೊಂಪಲ್ಲಿ ನಗರದ ಕಲ್ಯಾಣಮಂಟದಲ್ಲಿ ಸಂದೀಪ್ ಮದುವೆ ಸಂತೋಷದಿಂದ ನಡೆಯುತ್ತಿತ್ತು. 11:30ಕ್ಕೆ ಹಸೆಮಣೆ ಏರಬೇಕಿದ್ದ ಸಂದೀಪ್ ಬಹಳ ಹೊತ್ತು ಕಳೆದರೂ ಮೇಕಪ್ ರೂಮ್‍ನಿಂದ ಹೊರ ಬಂದಿರಲಿಲ್ಲ. ಹೀಗಾಗಿ ಸ್ನೇಹಿತರು, ಸಂಬಂಧಿಕರು ಎಷ್ಟೇ ಕೂಗಿದರೂ ಸಂದೀಪ್ ಬಾಗಿಲು ತೆರೆಯಲಿಲ್ಲ. ಇದರಿಂದ ಗಾಬರಿಗೊಂಡ ಸಂಬಂಧಿಕರು ರೂಮ್‍ನ ಬಾಗಿಲು ಮುರಿದು ನೋಡಿದಾಗ ಸಂದೀಪ್ ಫ್ಯಾನ್‍ಗೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದ.

ಸಂದೀಪ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೇಟ್ ಬಶೀರಾಬಾದ್ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಬಳಿಕ ಸಂದೀಪ್‍ನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ, ಪ್ರಕರಣ ದಾಖಲಿಸಿಕೊಂಡ ತನಿಖೆ ಆರಂಭಿಸಿದ್ದಾರೆ.

Comments

Leave a Reply

Your email address will not be published. Required fields are marked *