ಜಾಲಿ ರೈಡ್ ಕರೆದುಕೊಂಡು ಹೋಗಿ ಪತ್ನಿಯನ್ನೇ ಕೊಂದ

ಬೆಂಗಳೂರು: ಪತಿಯೊಬ್ಬ ತನ್ನ ಪತ್ನಿಯನ್ನು ಜಾಲಿ ರೈಡ್‍ಗೆ ಕರೆದುಕೊಂಡು ಹೋಗಿ ಕೊಲೆ ಮಾಡಿರುವ ಘಟನೆ ನವೆಂಬರ್ 16ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ತೇಜ್ ಸಿಂಗ್ ಅರೆಸ್ಟ್ ಆದ ಪತಿ. ಆರೋಪಿ ತೇಜ್ ಸಿಂಗ್ ಹಾಗೂ ಆತನ ಪತ್ನಿ ದೀಪಲ್ ಕಂವಾರ್ ಮೂಲತಃ ರಾಜಸ್ಥಾನದವರಾಗಿದ್ದು, ಹುಣಿಸೇಮಾರನಹಳ್ಳಿ ಬಳಿಯ ಜನತಾ ಕಾಲೋನಿಯಲ್ಲಿ ವಾಸವಿದ್ದರು. ಈ ದಂಪತಿ ಚಿಕ್ಕ ಚಿನ್ನದ ಮಳಿಗೆ ಹೊಂದಿದ್ದರು.

ಇಬ್ಬರ ನಡುವೆ ಮನಸ್ಥಾಪವಿದ್ದ ಹಿನ್ನೆಲೆಯಲ್ಲಿ ಮನೆಯಲ್ಲಿ ದಿನ ನಿತ್ಯ ಜಗಳ ನಡೆಯುತ್ತಿತ್ತು. ಇದರಿಂದ ರೋಸಿ ಹೋಗಿದ್ದ ಪತಿ ತೇಜ್ ತನ್ನ ಪತ್ನಿ ದೀಪಲ್‍ಳನ್ನು ಕೊಲೆ ಮಾಡಲು ಸಂಚು ರೂಪಿಸಿದ್ದನು. ನ. 16ರಂದು ಸ್ನೇಹಿತನ ಹೆಸರಲ್ಲಿ ಕಾರು ಬುಕ್ ಮಾಡಿ ಪತ್ನಿ ಮತ್ತು ಸ್ನೇಹಿತರನ್ನು ಡಿನ್ನರ್ ಪಾರ್ಟಿಗೆ ಕರೆದುಕೊಂಡು ಹೋಗಿದ್ದನು. ಇದನ್ನೂ ಓದಿ: ಸೆಕ್ಸ್ ಫೋಟೋ ನೋಡಿ ಪತ್ನಿಯನ್ನು ಗುಂಡಿಕ್ಕಿ ಕೊಂದ

ತೇಜ್ ಸಿಂಗ್ ಸ್ನೇಹಿತರ ಜೊತೆ ಪತ್ನಿಗೂ ಮದ್ಯಪಾನ ಮಾಡಿಸಿದ್ದಾನೆ ಎಂದು ಶಂಕಿಸಲಾಗಿದೆ. ಡಿನ್ನರ್ ನಂತರ ಸ್ನೇಹಿತರನ್ನು ವಾಪಸ್ ಮನೆಗೆ ಬಿಟ್ಟು, ಮಧ್ಯರಾತ್ರಿ ಪತ್ನಿಯನ್ನು ನಂದಿ ಬೆಟ್ಟದ ರಸ್ತೆಗೆ ಕರೆದುಕೊಂಡು ಹೋಗಿ ಕಾರಿನಿಂದ ಕೆಳಗೆ ತಳ್ಳಿದ್ದಾನೆ.

ಕೆಳಗೆ ಬಿದ್ದು ಓದ್ದಾಡ್ತಿದ್ದ ಪತ್ನಿ ಮೇಲೆ ತೇಜ್ ಸಿಂಗ್ ಕಾರು ಹತ್ತಿಸಿ ಕೊಲೆ ಮಾಡಿದ್ದಾನೆ. ಬಳಿಕ ಅಪರಿಚಿತ ವಾಹನದಿಂದ ಅಪಘಾತವಾಗಿದೆ ಎಂದು ದೂರು ನೀಡಿದ್ದನು. ದೂರು ದಾಖಲಿಸಿಕೊಂಡ ಪೊಲೀಸರು ಕಾರಿನ ಜಿಪಿಎಸ್ ಪರಿಶೀಲಿಸಿದಾಗ ಅಪಘಾತ ಸ್ಥಳದಲ್ಲಿ ಹಿಂದೆ ಮುಂದೆ ಚಲಿಸುವ ಮಾಹಿತಿ ದೊರೆಯಿತು.

ಬಳಿಕ ಪೊಲೀಸರು ತೇಜ್ ಸಿಂಗ್‍ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆರೋಪಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಕೆಂಪೇಗೌಡ ವಿಮಾನ ನಿಲ್ದಾಣ ಪೊಲೀಸರು ಆರೋಪಿ ತೇಜ್ ಸಿಂಗ್‍ನನ್ನು ಬಂಧಿಸಿದ್ದಾರೆ.

Comments

Leave a Reply

Your email address will not be published. Required fields are marked *