ಡಿನ್ನರಿಗೆ ಅರೆ ಬೆಂದ ಹೆಣದ ಕೈ, ಬೆರಳನ್ನು ಫ್ರೈ ಮಾಡ್ತಿದ್ದ ವ್ಯಕ್ತಿ ವಶಕ್ಕೆ

– ಗಾಬರಿಗೊಂಡು ಮನೆಯಿಂದ ಓಡಿ ಹೋದ ಪತ್ನಿ
– ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು

ಲಕ್ನೋ: ಅರೆ ಬೆಂದ ಹೆಣದ ಮಾಂಸದಿಂದ ಅಡುಗೆ ಮಾಡುತ್ತಿದ್ದ ಪತಿಯನ್ನು ಪೊಲೀಸರು ಬಂಧಿಸಿದ ಘಟನೆ ಸೋಮವಾರ ಉತ್ತರ ಪ್ರದೇಶದ ಬಿಜ್ನೋರ್ ನಲ್ಲಿ ನಡೆದಿದೆ.

32 ವರ್ಷದ ಪತಿ ಸಂಜಯ್‍ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಟಿಕ್ಕೋಪುರ ಗ್ರಾಮದ ನಿವಾಸಿಯಾಗಿರುವ ಸಂಜಯ್ ಅರೆ ಬೆಂದ ಹೆಣದ ಮಾಂಸದಿಂದ ಅಡುಗೆ ಮಾಡುತ್ತಿದ್ದನು. ಈ ವೇಳೆ ಮಾರ್ಕೆಟ್‍ಗೆ ಹೋಗಿದ್ದ ಆತನ ಪತ್ನಿ ಅಡುಗೆ ಮನೆಗೆ ಹೋಗಿದ್ದಾಳೆ. ಆಗ ಪತಿ ಹೆಣದ ಮಾಂಸದಿಂದ ಅಡುಗೆ ಮಾಡುತ್ತಿರುವುದನ್ನು ನೋಡಿ ಗಾಬರಿಯಿಂದ ಅಲ್ಲಿಂದ ಓಡಿ ಹೋಗಿದ್ದಾಳೆ. ಈ ಎಲ್ಲಾ ಘಟನೆಯಿಂದ ಪತ್ನಿ ತನ್ನ ಪತಿಯ ಮನೆಗೆ ಹಿಂದಿರುಗಲು ನಿರಾಕರಿಸುತ್ತಿದ್ದಾಳೆ.

ವರದಿಗಳ ಪ್ರಕಾರ, ಸಂಜಯ್ ಕುಡಿದ ನಶೆಯಲ್ಲಿ ಸ್ಮಶಾನಕ್ಕೆ ಹೋಗಿದ್ದನು. ಈ ವೇಳೆ ಅಲ್ಲಿ ಅರೆ ಬೆಂದಿದ್ದ ಹೆಣದ ದೇಹವನ್ನು ಬ್ಯಾಗಿನಲ್ಲಿ ಹಾಕಿಕೊಂಡಿದ್ದಾನೆ. ಬಳಿಕ ಮನೆಗೆ ಬಂದು ತವಾದಲ್ಲಿ ಫ್ರೈ ಮಾಡುತ್ತಿದ್ದನು. ಈ ವೇಳೆ ಅಡುಗೆ ಮನೆಗೆ ಬಂದ ಪತ್ನಿ ಅಲ್ಲಿ ತವಾದಲ್ಲಿ ಮನುಷ್ಯನ ಕೈ ಹಾಗೂ ಬೆರಳುಗಳನ್ನು ನೋಡಿ ಅಲ್ಲಿಂದ ಓಡಿ ಹೋಗಿ ಅಕ್ಕಪಕ್ಕದ ಮನೆಯವರಿಗೆ ವಿಷಯ ತಿಳಿಸಿದ್ದಾಳೆ. ವಿಷಯ ತಿಳಿದ ಸ್ಥಳೀಯರು ಸಂಜಯ್‍ನನ್ನು ಮನೆಯೊಳಗೆ ಕೂಡಿ ಹಾಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಎಸ್‍ಎನ್‍ಒ ಆರ್.ಸಿ ಶರ್ಮಾ, ಮಾಹಿತಿ ತಿಳಿದ ತಕ್ಷಣ ನಾವು ಸ್ಥಳಕ್ಕೆ ಭೇಟಿ ನೀಡಿದ್ದೇವು. ಆಗ ಮನುಷ್ಯನ ಮಾಂಸ ಪತ್ತೆಯಾಗಿತ್ತು. ಸದ್ಯ ಆರೋಪಿಯನ್ನು ನಾವು ವಶಕ್ಕೆ ಪಡೆದುಕೊಂಡಿದ್ದೇವೆ. ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಗಂಗಾ ನದಿಯ ದಡದಲ್ಲಿ ಶವವನ್ನು ಸುಡಲಾಗಿತ್ತು. ಅಲ್ಲಿಂದ ತಂದಿರುವುದಾಗಿ ಸಂಜಯ್ ಹೇಳಿದ್ದಾನೆ. ಇದೇ ವೇಳೆ ಸಂಜಯ್ ಕೆಲವು ದಿನಗಳ ಹಿಂದೆ ತನ್ನ ತಂದೆ ಮೇಲೆ ಹಲ್ಲೆ ಮಾಡಿದ್ದನು ಎಂಬುದು ತಿಳಿಯಿತು ಎಂದರು.

Comments

Leave a Reply

Your email address will not be published. Required fields are marked *