ಕುತ್ತಿಗೆಗೆ ಹಗ್ಗ ಬಿಗಿದು ಪತ್ನಿಯ ಕೊಲೆಗೈದ ಪತಿ!- ಮುಂಜಾನೆ ಎದ್ದು ಅಮ್ಮನ ಕುತ್ತಿಗೆಯಲ್ಲಿ ಹಗ್ಗ ನೋಡಿ ಬೆಚ್ಚಿಬಿದ್ರು ಮಕ್ಕಳು

ಬೆಂಗಳೂರು: ಪತಿಯೇ ಪತ್ನಿಯ ಕುತ್ತಿಗೆಗೆ ಹಗ್ಗ ಬಿಗಿದು ಬರ್ಬರವಾಗಿ ಹತ್ಯೆಗೈದ ಘಟನೆಯೊಂದು ನಡೆದಿದ್ದು, ಇಂದು ಮುಂಜಾನೆ ಬೆಳಕಿಗೆ ಬಂದಿದೆ.

ಈ ಘಟನೆ ಶ್ರೀರಾಂಪುರದಲ್ಲಿ ನಡೆದಿದ್ದು, 45 ವರ್ಷದ ಜಾನಕಿ ತನ್ನ ಪತಿ ಚಂದ್ರಶೇಖರ್ ಎಂಬಾತನಿಂದಲೇ ಕೊಲೆಯಾಗಿದ್ದಾರೆ. ಈ ದಂಪತಿಗೆ 2 ಹೆಣ್ಣು, 4 ಗಂಡು ಮಕ್ಕಳಿದ್ದಾರೆ.

ಬೆಳಕಿಗೆ ಬಂದಿದ್ದು ಹೇಗೆ?: ಇಂದು ಮುಂಜಾನೆ ಸುಮಾರು 4 ಗಂಟೆ ಸುಮಾರಿಗೆ ಹಸಿವಿನಿಂದ ಮಗು ಎದ್ದಿದೆ. ಎದ್ದ ವೇಳೆ ತಾಯಿಯ ಬಳಿ ತೆರಳಿ ಕರೆದು ಎಬ್ಬಿಸತೊಡಗಿದೆ. ಆದ್ರೆ ತಾಯಿ ಏಳದ ಹಿನ್ನಲೆ ಕಂದಮ್ಮ ತನ್ನ ಅಕ್ಕನ ಬಳಿ ತೆರಳಿದೆ. ಅಕ್ಕ ಎದ್ದು ತಾಯಿ ಬಳಿ ತೆರಳಿದಾಗ ಕತ್ತಿಗೆ ಹಗ್ಗ ಸುತ್ತಿರುವುದು ಬೆಳಕಿಗೆ ಬಂದಿದೆ. ಕೂಡಲೇ ಹಗ್ಗ ತೆಗೆದು ತಾಯಿಯನ್ನು ಎಬ್ಬಿಸಲು ಮುಂದಾದ ಮಕ್ಕಳಿಗೆ ತಾಯಿ ಮೃತಪಟ್ಟಿರುವುದು ಅರಿವಿಗೆ ಬಂದಿದೆ. ಮಕ್ಕಳು ಕೂಡಲೇ ತಮ್ಮ ಸಂಬಂಧಿಕರಿಗೆ ವಿಷಯ ಮುಟ್ಟಿಸಿದ್ದಾರೆ.

ಚಂದ್ರಶೇಖರ್ ಹಾಗೂ ಜ್ಯೋತಿ ಮದುವೆಯಾಗಿ 15 ವರ್ಷಗಳಾಗಿವೆ. ಕಳೆದ ನಾಲ್ಕು ವರ್ಷದಿಂದ ಇಬ್ಬರ ನಡುವೆ ಜಗಳವಾಗಿ ಕೊರ್ಟ್ ನಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಈ ನಡುವೆ ಇಬ್ಬರು ದೂರವಾಗಿದ್ದವರು ಕೆಲದಿನಗಳ ಹಿಂದೆ ಒಟ್ಟಿಗೆ ಇದ್ದರು. ಸೋಮವಾರ ತಡರಾತ್ರಿ ನಡೆದ ಕ್ಷುಲ್ಲಕ ವಿಚಾರಕ್ಕೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಅಲ್ಲದೇ ಆರೋಪಿ ಚಂದ್ರಶೇಖರ್‍ಗೆ ಮತ್ತೊಂದು ಮಹಿಳೆ ಜೊತೆ ಅನೈತಿಕ ಸಂಬಂಧವಿರುವ ಬಗ್ಗೆಯೂ ಆರೋಪ ಕೇಳಿಬರುತ್ತಿದೆ.

ಸದ್ಯ ಮೃತ ಜಾನಕಿ ಶವವನ್ನು ಕೆಸಿ ಜನರಲ್ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *