ದೇವರ ಮೇಲೆ ಆಣೆ ಮಾಡೆಂದು ಕರೆದೊಯ್ದು ಪತ್ನಿ, ಮಗಳನ್ನು ಕೊಲೆಗೈದ!

ಬಳ್ಳಾರಿ: ಶೀಲದ ಬಗ್ಗೆ ದೇವರ ಮುಂದೆ ಪ್ರಮಾಣ ಮಾಡುವಂತೆ ಕರೆಸಿಕೊಂಡು ಪತಿಯೇ, ಪತ್ನಿ ಮತ್ತು ಮಗಳನ್ನು ಕೊಲೆ ಮಾಡಿರುವ ಅಮಾನವೀಯ ಘಟನೆ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಹುಲವಾಗಲು ಗ್ರಾಮದಲ್ಲಿ ನಡೆದಿದೆ.

ಪವಿತ್ರಾ(26) ಮತ್ತು ಮಗಳು ಮಮತಾ(3) ಕೊಲೆಯಾದ ದುರ್ದೈವಿಗಳು. ಆರೋಪಿಯನ್ನು ಹುಲವಾಗಲು ಗ್ರಾಮದ ನಿವಾಸಿ ಸಿದ್ದಪ್ಪ ಎಂದು ಗುರುತಿಸಲಾಗಿದೆ.

ಪತ್ನಿಯ ಶೀಲದ ಮೇಲೆ ಅನುಮಾನ ಪಟ್ಟಿದ್ದ ಸಿದ್ದಪ್ಪ, ಹುಲವಾಗಲು ಕಾಡಿನಲ್ಲಿರುವ ಬೀರದೇವರಪ್ಪ ದೇವರ ಮುಂದೆ ಶೀಲದ ಬಗ್ಗೆ ಆಣೆ ಮಾಡುವಂತೆ ಹೇಳಿ ಕರೆಸಿಕೊಂಡಿದ್ದಾನೆ. ಪತಿಯ ಹಠಕ್ಕೆ ಬಿದ್ದು ಮಧ್ಯರಾತ್ರಿಯೇ ತಾಯಿ, ಮಗಳು ಕಾಡಿಗೆ ಹೋಗಿದ್ದಾಗ ಅಲ್ಲಿ ಇಬ್ಬರ ಮೇಲೂ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ.

ಪ್ರಕರಣ ಸಂಬಂಧ ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಹಿರೇಹಡಗಲಿ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *