ಪತ್ನಿ, ಮಕ್ಕಳನ್ನು ಬಿಟ್ಟು ಬೆಂಗ್ಳೂರಿಗೆ ಓಡಿ ಹೋದ – ಗಂಡ ಬೇಕೆಂದು ಪತ್ನಿ ಅಳಲು

ಮಂಗಳೂರು: ಪತಿವೊಬ್ಬ ಪತ್ನಿ ಮಕ್ಕಳನ್ನು ಬಿಟ್ಟು ಬೆಂಗಳೂರಿಗೆ ಓಡಿ ಹೋಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಮಂಗಳೂರು ನಗರ ಹೊರವಲಯದ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪತ್ನಿ ದೂರು ದಾಖಲಿಸಿದ್ದು, ಪತಿಯನ್ನು ಹುಡುಕಿಕೊಡುವಂತೆ ಅಲವತ್ತುಕೊಂಡಿದ್ದಾಳೆ. ಎಂಟು ವರ್ಷದ ಹಿಂದೆ ಬೆಂಗಳೂರಿನ ಮಾಗಡಿ ನಿವಾಸಿ ಮಹಮ್ಮದ್ ಸಲೀಂ ಕೊಣಾಜೆ ಬಳಿಯ ಮಂಜನಾಡಿಯ ಸಫಿಯಾಳನ್ನು ಮದುವೆ ಮಾಡಿಕೊಡಲಾಗಿತ್ತು.

ಏಳು ವರ್ಷಗಳ ಕಾಲ ಮಾಗಡಿಯ ಮನೆಯಲ್ಲಿ ಜೊತೆಗಿದ್ದ ದಂಪತಿ ಒಂದು ವರ್ಷದ ಹಿಂದೆ ಬೆಂಗಳೂರಿನಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದರು. ಬಾಡಿಗೆ ಮನೆಗೆ ಬಂದ ಬಳಿಕ ಪತಿ ಸಲೀಂ ಜಗಳ ಆರಂಭಿಸಿದ್ದಲ್ಲದೆ, ಆರು ತಿಂಗಳ ಹಿಂದೆ ಬಾಡಿಗೆ ಮನೆಯಲ್ಲಿ ಕಷ್ಟವಾಗುತ್ತಿದೆಯೆಂದು ತವರಿಗೆ ಕಳಿಸಿದ್ದ.

ಪತ್ನಿ ಮೂರು ಮಕ್ಕಳ ಜೊತೆ ತವರಿನಲ್ಲಿದ್ದ ವೇಳೆ, ಅತ್ತ ಸಲೀಂ ಮತ್ತೊಂದು ಮದುವೆಗೆ ರೆಡಿ ಮಾಡಿಕೊಂಡಿದ್ದ. ವಿಚಾರ ತಿಳಿದ ಪತ್ನಿ ಮತ್ತು ಮನೆಯವರು ಬೆಂಗಳೂರಿಗೆ ಧಾವಿಸಿ, ಮಹಮ್ಮದ್ ಸಲೀಂನ ಎರಡನೇ ಮದುವೆಗೆ ತಡೆ ಒಡ್ಡಿದ್ದರು. ಕೊನೆಗೆ ಅಲ್ಲಿನ ಪೊಲೀಸರು ಸಲೀಂನನ್ನು ಮುಚ್ಚಳಿಕೆ ಬರೆಸಿ ಕಳುಹಿಸಿದ್ದರು. ಬಳಿಕ ಪತ್ನಿಯ ಜೊತೆ ಮಂಗಳೂರಿನ ಮನೆಗೆ ಆಗಮಿಸಿ, ಒಂದು ವಾರ ಕಾಲ ಇದ್ದ ಮಹಮ್ಮದ್ ಸಲೀಂ ಬಳಿಕ ಅಲ್ಲಿದ್ದ ಕೈನೆಟಿಕ್ ಜೊತೆಗೆ ಪರಾರಿಯಾಗಿದ್ದಾನೆ. ಬೆಂಗಳೂರಿಗೆ ತೆರಳಿದ್ದಾನೆ ಎನ್ನಲಾಗುತ್ತಿದ್ದು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ.

ಈ ಬಗ್ಗೆ ಕೋಣಾಜೆ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ. ಇತ್ತ ಪತ್ನಿ ಸಫಿಯಾ ಮೂರು ಮಕ್ಕಳ ಜೊತೆ ಜೀವನ ಸಾಧ್ಯವಿಲ್ಲವೆಂದು ಪತಿಗಾಗಿ ಅಲವತ್ತುಕೊಳ್ಳುತ್ತಿದ್ದಾಳೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *